ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ: ಹೈದರಾಬಾದ್ ಎನ್​ಐಎ ಪೊಲೀಸರಿಂದ ಉತ್ತರ ಕನ್ನಡದ ಇಬ್ಬರ ಬಂಧನ

| Updated By: Ganapathi Sharma

Updated on: Feb 18, 2025 | 9:39 AM

ಕಾರವಾರ ಸೀಬರ್ಡ್ ನೌಕಾನೆಲೆಯ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಎನ್ಐಎ ಪೊಲೀಸರು ಉತ್ತರ ಕನ್ನಡದ ಕಾರವಾರ ತಾಲೂಕಿನ ಇಬ್ಬರನ್ನು ಬಂಧಿಸಿದ್ದಾರೆ. ವೇತನ್ ತಾಂಡೇಲ್ ಮತ್ತು ಅಕ್ಷಯ್ ನಾಯ್ಕ್ ಎಂಬುವರನ್ನು ಹೈದರಾಬಾದ್‌ನಿಂದ ಬಂದ ಎನ್ಐಎ ತಂಡ ಬಂಧಿಸಿದೆ. ಪಾಕಿಸ್ತಾನಿ ಏಜೆಂಟ್ ಹನಿಟ್ರ್ಯಾಪ್ ಮೂಲಕ ಇವರಿಂದ ಮಾಹಿತಿ ಕಲೆಹಾಕಿದ್ದಾರೆ ಎಂಬ ಅನುಮಾನವಿದೆ.

ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ: ಹೈದರಾಬಾದ್ ಎನ್​ಐಎ ಪೊಲೀಸರಿಂದ ಉತ್ತರ ಕನ್ನಡದ ಇಬ್ಬರ ಬಂಧನ
ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ: ಎನ್​ಐಎ ಪೊಲೀಸರಿಂದ ಇಬ್ಬರ ಬಂಧನ
Follow us on

ಕಾರವಾರ, ಫೆಬ್ರವರಿ 18: ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದುಗಾ ಗ್ರಾಮದ ವೇತನ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್ ಎಂಬಿಬ್ಬರನ್ನು ಹೈದರಾಬಾದ್ ಮೂಲದ ಎನ್​ಐಎ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ಬಗ್ಗೆ ಮಾಹಿತಿ ಕಲೆಹಾಕಿದ್ದ ಎನ್​ಐಎ ತಂಡ ಸೋಮವಾರ ಕಾರವಾರಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದೆ.

ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ 2024ರ ಆಗಸ್ಟ್ ತಿಂಗಳಲ್ಲಿ ಮೂವರನ್ನು ವಿಚಾರಣೆ ನಡೆಸಿದ್ದ ಎನ್​ಐಎ ನೋಟೀಸ್ ನೀಡಿ ಬಿಟ್ಟಿತ್ತು. ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್‌ನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿತ್ತು. ಇದೀಗ ಮತ್ತೆ ಪ್ರಕರಣ ಸಂಬಂಧ ಮತ್ತೆ ತನಿಖೆ ನಡೆಸಲು ಬಂದಿದ್ದ ಎನ್​ಐಎ ತಂಡ ಇಬ್ಬರನ್ನು ಬಂಧಿಸಿದೆ.

ಹನಿಟ್ರ್ಯಾಪ್ ಮಾಡಿ ಮಾಹಿತಿ ಕಲೆ ಹಾಕಿದ್ದ ಪಾಕಿಸ್ತಾನದ ಏಜೆಂಟ್

ಶಂಕಿತ ಆರೋಪಿಗಳನ್ನು ಹನಿ ಟ್ರ್ಯಾಪ್ ಮಾಡಿದ್ದ ಪಾಕಿಸ್ತಾನಿ ಏಜೆಂಟ್ ಮಾಹಿತಿ ಕಲೆ ಹಾಕಿದ್ದಳು ಎನ್ನಲಾಗಿತ್ತು. ಫೇಸ್‌ಬುಕ್ ಮೂಲಕ ತಾನು ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಪಾಕಿಸ್ತಾನಿ ಏಜೆಂಟ್, ಶಂಕಿತ ಆರೋಪಿಗಳಾದ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್‌ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಳು. ಇದಾದ ಬಳಿಕವೇ 2023 ರಲ್ಲಿ ಅವವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು.

ಆರೋಪಿಗಳ ಹಿನ್ನೆಲೆ ಏನು?

ಈ ಹಿಂದೆ ಕಾರವಾರದ ಚೆಂಡ್ಯಾದಲ್ಲಿರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪೆನಿಯಲ್ಲಿ ವೇತನ್ ಹಾಗೂ ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ತೋಡೂರಿನ ಸುನೀಲ್ ಮಾತ್ರ ಹಿಂದೆ ಸೀಬರ್ಡ್ ಕ್ಯಾಂಟೀನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ಆಮೇಲೆ ಚಾಲಕ ವೃತ್ತಿ ಮಾಡುತ್ತಿದ್ದ.

ಇದನ್ನೂ ಓದಿ: ಕಾರವಾರ: ಸೀಬರ್ಡ್ ನೌಕಾನೆಲೆ ಫೋಟೋ, ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಮೂವರು ಎನ್​ಐಎ ವಶಕ್ಕೆ

ಈ ಹಿಂದೆ ವಶಕ್ಕೆ ಪಡೆದವರನ್ನು ಇದೀಗ ಮತ್ತೆ ವಿಚಾರಣೆಗೆ ಒಳಪಡಿಸಿ, ಹೊಸ ಲಿಂಕ್‌ನ ಬಗ್ಗೆ ತನಿಖೆ ನಡೆಸಲು ಎನ್​ಐಎ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ನೌಕಾ ನೆಲೆ ಮಾಹಿತಿ ಸೋರಿಕೆ ಸಂಬಂಧಿಸಿ ಇಂದು ನೌಕಾನೆಲೆ ಅಧಿಕಾರಿಗಳನ್ನು ಎನ್​ಐಎ ಅಧಿಕಾರಿಗಳ ತಂಡ ಭೇಟಿಯಾಗಲಿದೆ. ಪ್ರಕರಣದಲ್ಲಿ ಇನ್ನಷ್ಟು ಜನರು ಶಾಮೀಲಾಗಿರುವ ಅನುಮಾನದ ಕಾರಣ ಮತ್ತಷ್ಟು ತನಿಖೆ ನಡೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ