ಶಿರೂರು ಗುಡ್ಡ ಕುಸಿತದಲ್ಲಿ ಮೃತ ಕುಟುಂಬಗಳಿಗೆ ಹೆಚ್ಚಿನ ಪರಿಹಾರಕ್ಕೆ ಮೋದಿ ಅನುಮೋದನೆ

| Updated By: ರಮೇಶ್ ಬಿ. ಜವಳಗೇರಾ

Updated on: Aug 22, 2024 | 10:58 PM

ಉತ್ತರ ಕನ್ನಡ ಜಿಲ್ಲೆಯ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂದು ಇದುವರೆಗೂ ನಿಖರವಾಗಿ ತಿಳಿದುಬಂದಿಲ್ಲ. ದುರಂತದಲ್ಲಿ ಮೃತಪಟ್ಟಿದ್ದ 11 ಜನರ ಮೃತದೇಹಗಳು ಪತ್ತೆಯಾಗಿದ್ದು, ಇದೀಗ ಇವರ ಕುಟುಂಬಕ್ಕೆ ಪರಿಹಾರಕ್ಕಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬರೆದಿದ್ದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಂದಿಸಿದ್ದಾರೆ.

ಶಿರೂರು ಗುಡ್ಡ ಕುಸಿತದಲ್ಲಿ ಮೃತ ಕುಟುಂಬಗಳಿಗೆ ಹೆಚ್ಚಿನ ಪರಿಹಾರಕ್ಕೆ ಮೋದಿ ಅನುಮೋದನೆ
ಶಿರೂರು ಗುಡ್ಡ ಕುಸಿತ
Follow us on

ಕಾರವಾರ, (ಆಗಸ್ಟ್ 22): ಉತ್ತರ ಕನ್ನಡ ಜಿಲ್ಲೆಯ ಶಿರೂರು ಭೂ ಕುಸಿತ ಪ್ರಕರಣವನ್ನು ವಿಶೇಷ ಪ್ರಕರಣದಡಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಕೋರಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದಾರೆ. ಅಲ್ಲದೇ ಕಾಗೇರಿ ಪತ್ರಕ್ಕೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಂತ್ರಸ್ತರಿಗೆ ವಿಶೇಷ ಅನುದಾನ ಬಿಡುಗಡೆಗೆ ಮೋದಿ ಅನುಮತಿ ನೀಡಿದ್ದಾರೆ. ಶಿರೂರು ದುರಂತದಲ್ಲಿ ಸಾವನ್ನಪ್ಪಿದವರಿಗೆ ಕೇಂದ್ರ ಸರ್ಕಾರವು NDRF ರಿಲೀಫ್ ಫಂಡ್​​ನಿಂದ 5 ಲಕ್ಷ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ವಿಶೇಷ ಪ್ರಕರಣದಡಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ಗುಡ್ಡ ಕುಸಿತದಲ್ಲಿ ಆರಂಭದಲ್ಲಿ 9 ಜನರು ಬಲಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ನಂತರ ಈ ಸಂಖ್ಯೆ 10ಕ್ಕೆ ಏರಿಕೆ ಆಗಿತ್ತು. ಈಗ ಪುನಃ ಮತ್ತೊಬ್ಬ ಲಾರಿ ಚಾಲಕ ನಾಪತ್ತೆ ಆಗಿರುವ ದೂರು ಬಂದಿದ್ದು, ಒಟ್ಟು 11 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ; ತಿಂಗಳು ಕಳೆದರೂ ಸಂತ್ರಸ್ಥರಿಗೆ ಸಿಕ್ಕಿಲ್ಲ ಇನ್ನೂ ಪರಿಹಾರ

ಈ ಘಟನೆಯಲ್ಲಿ ರಸ್ತೆಯ ಪಕ್ಕದಲ್ಲಿದ್ದ ಟೀ ಅಂಗಡಿಯ ಮೇಲೆ ಗುಡ್ಡ ಕುಸಿದಿದ್ದು, ಒಂದೇ ಕುಟುಂಬದ 5 ಜನರು ಸಾವನ್ನಪ್ಪಿದ್ದರು. ಜೊತೆಗೆ, ಅಲ್ಲಿ ಟೀ ಕುಡಿಯಲು ಬಂದಿದ್ದ ಇಬ್ಬರು ಸೇರಿ ಒಟ್ಟು 7 ಜನರ ಮೃತದೇಹಗಳನ್ನು ಗುಡ್ಡ ಕುಸಿತದ ಸ್ಥಳದಿಂದ ಹೊರಗೆ ತೆಗೆಯಲಾಗಿದೆ. ಆದರೆ, ಕೇರಳ ಮೂಲದ ಅರ್ಜುನ್​ ಇದುವರೆಗೂ ಪತ್ತೆಯಾಗಿಲ್ಲ. ಪೊಲೀಸರು, ಮಿಲಿಟರಿ ಪಡೆ ಹಾಗೂ ವಿಪತ್ತು ನಿರ್ವಹಣಾ ಪಡೆ, ಮುಳುಗು ತಜ್ಞರು ಸೇರಿದಂತೆ ಡ್ರೋಣ್​ ಮೂಲಕ ಹುಡುಕಾಟ ನಡೆಸಲಾಗಿತ್ತು. ಆದರೂ ಸಹ ಅರ್ಜುನನ ಸುಳಿವು ಮಾತ್ರ ಸಿಕ್ಕಿಲ್ಲ.

ಇನ್ನು ಮೃತ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದ್ರೆ, ಈ ಪರಿಹಾರವನ್ನು ಇನ್ನಷ್ಟು ಹೆಚ್ಚು ನೀಡಬೇಕೆಂದು ಉತ್ತರ ಕನ್ನಡ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದೀಗ ಸಂಸದರ ಪತ್ರಕ್ಕೆ ಮೋದಿ ಸ್ಪಂದಿಸಿದ್ದು, ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಲು ಅನುಮೋದಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ