ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆ ಕೊಲೆ ಕೇಸ್ಗೆ ಟ್ವಿಸ್ಟ್: ಆರೋಪಿ ಕೂಡ ನೇಣಿಗೆ ಶರಣು
ಮದುವೆಗೆ ಒಪ್ಪದ ಕಾರಣ ಮಹಿಳೆಯನ್ನು ನಡು ರಸ್ತೆಯಲ್ಲಿ ಇರಿದು ಕೊಂದಿದ್ದ ಆರೋಪಿ ಕೂಡ ಆತ್ಮಹತ್ಯೆಗ ಶರಣಾಗಿದ್ದಾನೆ. ಎಸ್ಕೇಪ್ ಆಗಿದ್ದ ಆತನಿಗೆ ಖಾಕಿ ಹುಡುಕಾಟ ನಡೆಸುವ ವೇಳೆ ಆತನ ಮೃತದೇಹ ಪತ್ತೆಯಾಗಿದ್ದ. ಮಹಿಳೆಯ ಹತ್ಯೆ ಖಂಡಿಸಿ ಇಂದು ಯಲ್ಲಾಪುರ ಬಂದ್ಗೆ ವಿಎಚ್ಪಿ ಕರೆ ಕೊಟ್ಟಿತ್ತು. ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಪ್ರತಿಭಟನೆಗೂ ಸಿದ್ಧತೆ ನಡೆದಿತ್ತು. ಆದ್ರೆ ಅದಾಗಲೆ ಆರೋಪಿಯೂ ಮೃತಪಟ್ಟಿರೋ ವಿಷಯ ಬಹಿರಂಗವಾಗಿದೆ.

ಯಲ್ಲಾಪುರ, ಜನವರಿ 04: ಮದುವೆಗೆ ಒಪ್ಪದಿದ್ದಕ್ಕೆ ವಿಚ್ಛೇದಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣ ಸಂಬಂಧ ಕೊಲೆ ಆರೋಪಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ರಂಜಿತಾ ಕೊಲೆಗೈದು ಅರಣ್ಯದಲ್ಲಿ ಪರಾರಿಯಾಗಿದ್ದ ರಫೀಕ್(30) ಮೃತದೇಹ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾಳಮ್ಮನಗರ ಅರಣ್ಯದಲ್ಲಿ ಪತ್ತೆಯಾಗಿದೆ. ಎಸ್ಕೇಪ್ ಆಗಿದ್ದ ಆರೋಪಿಗಾಗಿ ಇಂದು ಶ್ವಾನದಳದಿಂದ ಹುಡುಕಾಟ ನಡೆಸುವಾಗ ಘಟನೆ ಬೆಳಕಿಗೆ ಬಂದಿದೆ.
ಸುಮಾರು ಹತ್ತು ವರ್ಷಗಳ ಹಿಂದೆ ಗಂಡಿನಿಂದ ವಿಚ್ಛೇದನ ಪಡೆದಿದ್ದ ಮಹಿಳೆ ರಂಜಿತಾಳನ್ನು ರಫೀಕ್ ಪ್ರೀತಿಸುತ್ತಿದ್ದ. ಇಬ್ಬರ ಕುಟುಂಬಗಳ ನಡುವೆ ಒಳ್ಳೆಯ ಬಾಂಧವ್ಯ ಸಹ ಇದ್ದು, ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದ. ಒಂದು ಮಗು ಕೂಡ ಹೊಂದಿದ್ದ ರಂಜಿತಾ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದಳು. ಜೀವನೋಪಾಯಕ್ಕಾಗಿ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಈತ್ತೀಚೆಗೆ ಮದುವೆಯಾಗುವಂತೆ ರಂಜಿತಾಳನ್ನು ರಫೀಕ್ ಒತ್ತಾಯಿಸಿದ್ದ. ಆದರೆ ಇದಕ್ಕೆ ರಂಜಿತಾ ವಿರೋಧ ವ್ಯಕ್ತಪಡಿಸಿದ್ದಳು. ನಮ್ಮ ಸಂಬಂಧ ಹೀಗೆ ಇರಲಿ, ಆದರೆ ಮದುವೆ ಆಗುವುದಿಲ್ಲ ಎಂದು ಹೇಳಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ
ಇದರಿಂದ ಕೋಪಗೊಂಡಿದ್ದ ರಫೀಕ್ ಎಂದಿನಂತೆ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ, ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಆ ವೇಳೆಯೂ ರಂಜಿತಾ ನಿರಾಕರಿಸಿದ ಕಾರಣ ಆಕೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ. ಆರೋಪಿ ರಫೀಕ್ ಮತ್ತು ಮೃತ ರಂಜಿತಾಳ ಅಣ್ಣ ಸ್ನೇಹಿತರಾಗಿದ್ದು, ಘಟನೆ ನಡೆಯುವ ಮುನ್ನ ರಾತ್ರಿ ಇಬ್ಬರು ಪಾರ್ಟಿ ಕೂಡ ಮಾಡಿದ್ದರು ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು.
ಹಿಂದೂ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರೋದನ್ನು ಖಂಡಿಸಿ ಇಂದು ಯಲ್ಲಾಪುರ ಬಂದ್ಗೆ ವಿಎಚ್ಪಿ ಕರೆ ಕೂಡ ಕೊಟ್ಟಿತ್ತು.ಅಂಗಡಿ ಮುಂಗಟ್ಟು ಮುಚ್ಚಿ ಬಂದ್ಗೆ ಸ್ಪಂದಿಸುವಂತೆ ಮನವಿ ಮಾಡಿತ್ತು. ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಜೊತೆಗ ಆರೋಪಿ ಬಂಧಿಸೋವರೆಗೂ ರಂಜಿತಾಳ ಅಂತ್ಯಕ್ರಿಯೆ ಮಾಡಲ್ಲೆಂದು ಹಿಂದೂ ಸಂಘಟನೆಗಳ ಪಟ್ಟು ಹಿಡಿದಿದ್ದವು. ಆದ್ರೆ ಈ ನಡುವೆ ರಫೀಕ್ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.