ಮದ್ವೆ ಒಂದು ದಿನ ಇರುವಾಗಲೇ ಹತ್ಯೆ: ಆ ವಿಷಯ ಹೇಳಿದ್ದಕ್ಕೆ ಸ್ನೇಹಿತನಿಂದಲೇ ಕೊಲೆಯಾದ ಡಾಕ್ಟರ್

ಎರಡನೇ ಮದುವೆಗೆ ಮುಂದಾಗಿದ್ದ ವೈದ್ಯನ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿಯ ನ್ಯೂ ಕೆಹೆಚ್​​ಬಿ ಕಾಲೂನಿಯಲ್ಲಿ ಭಾನವಾರ ವೈದ್ಯನ ಕೊಲೆ ನಡೆದಿತ್ತು. ನ್ಯೂ ಮಾರುಕಟ್ಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮದ್ವೆ ಒಂದು ದಿನ ಇರುವಾಗಲೇ ಹತ್ಯೆ: ಆ ವಿಷಯ ಹೇಳಿದ್ದಕ್ಕೆ ಸ್ನೇಹಿತನಿಂದಲೇ ಕೊಲೆಯಾದ ಡಾಕ್ಟರ್
ವೈದ್ಯ ರಮೇಶ್ ಕಲಗುಟಕರ
Image Credit source: tv9 kannada
Edited By:

Updated on: Apr 20, 2026 | 9:49 PM

ಕಾರವಾರ, ಏಪ್ರಿಲ್​ 20: ಶಿರಸಿಯಲ್ಲಿ ಸಂಚಲನ ಮೂಡಿಸಿದ್ದ ವೈದ್ಯ (Doctor) ರಮೇಶ್ ಕಲಗುಟಕರ ಕೊಲೆ (murder) ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದ ವೈದ್ಯನನ್ನು, ಹಣ ಮತ್ತು ಒಡವೆಯ ಆಸೆಗೆ ಬಿದ್ದು ಸ್ವತಃ ಗೆಳೆಯನೇ ರಾಡಿನಿಂದ ಹೊಡೆದು ಹತ್ಯೆ ಮಾಡಿದ್ದ. ಪ್ರಕರಣ ನಡೆದ ಕೇವಲ 24 ಗಂಟೆಯೊಳಗೆ ಶಿರಸಿ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಮಂಜುನಾಥ್ ನಾಯ್ಕ್(61) ಬಂಧಿತ ಆರೋಪಿ.

ನಡೆದಿದ್ದೇನು?

ಶಿರಸಿಯ ನ್ಯೂ ಕೆಹೆಚ್​ಬಿ ಕಾಲೋನಿಯಲ್ಲಿ ನಡೆದ ವೈದ್ಯ ಡಾ. ರಮೇಶ್ ಕಲಗುಟಕರ ಅವರ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪಡುಬೈಲ್ ಗ್ರಾಮದ ಮಂಜುನಾಥ್ ನಾಯ್ಕ್(61) ಎಂಬಾತನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಹಣದ ಆಸೆ ಮತ್ತು ಅತಿಯಾದ ಕುಡಿತವೇ ಈ ಬರ್ಬರ ಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: 2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!

ಅಸಲಿಗೆ ಅಲ್ಲಿ ನಡೆದಿದ್ದೇನು ಅಂದರೆ, ಡಾ. ರಮೇಶ್ ಇಂದು ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದರು. ಶನಿವಾರ ರಾತ್ರಿ ವೈದ್ಯನ ಮನೆಯಲ್ಲಿ ತಂಗಿದ್ದ ಗೆಳೆಯ ಮಂಜುನಾಥ್ ಜೊತೆಗೆ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ರಮೇಶ್, ತಾನು ಮದುವೆಗಾಗಿ ತಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಒಡವೆಗಳು ಮತ್ತು ಹಣವನ್ನ ಗೆಳೆಯನಿಗೆ ತೋರಿಸಿದ್ದಾರೆ. ಇದೇ ಡಾಕ್ಟರ್ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದೆ.

15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಸೇರಿ 50 ಸಾವಿರ ರೂ ದೋಚಿ ಪರಾರಿ

ಇಬ್ಬರೂ ರಾತ್ರಿ ಪಾರ್ಟಿ ಮಾಡಿ ಮನೆಯಲ್ಲಿ ಮಲಗಿದ್ದಾರೆ. ಆದರೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮಂಜುನಾಥ್, ನಿದ್ರೆಯಲ್ಲಿದ್ದ ವೈದ್ಯನ ತಲೆಗೆ ಕಬ್ಬಿಣದ ರಾಡಿನಿಂದ ಬಲವಾಗಿ ಹೊಡೆದಿದ್ದಾನೆ. ಬಳಿಕ ಮನೆಯಲ್ಲಿದ್ದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ನಗದನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಶಿರಸಿ ನ್ಯೂ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು, ಕೇವಲ ಒಂದೇ ದಿನದಲ್ಲಿ ಹಂತಕನನ್ನು ಸೆರೆಹಿಡಿದು ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us