AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ 2ನೇ ಮದುವೆಗೆ ಸಿದ್ಧತೆ ನಡೆಸಿದ್ದ ಆಯುರ್ವೇದ ವೈದ್ಯನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮೊದಲ ಪತ್ನಿ ನಿಧನದ ನಂತರ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದ ವೈದ್ಯರ ಮನೆಯಲ್ಲಿ ಈಗ ಮದುವೆಯ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿದೆ. ಸಂಬಂಧಿಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!
ಕೊಲೆಯಾದ ವೈದ್ಯImage Credit source: Tv9 Kannada
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Apr 20, 2026 | 8:17 AM

Share

ಶಿರಸಿ, ಏಪ್ರಿಲ್​ 20: 2ನೇ ಮದುವೆಗೆ ತಯಾರಿ ನಡೆಸಿದ್ದ ವೈದ್ಯನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ನ್ಯೂ KHB ಕಾಲೋನಿಯಲ್ಲಿ ನಡೆದಿದೆ. ವೈದ್ಯ ರಮೇಶ್ ಕಲಗುಟಕರ(51) ಕೊಲೆಯಾದ ವ್ಯಕ್ತಿಯಾಗಿದ್ದು, ಮನೆಗೆ ನುಗ್ಗಿರುವ ಆರೋಪಿಗಳು ಹತ್ಯೆಗೈದು ಎಸ್ಕೇಪ್​​ ಆಗಿದ್ದಾರೆ. ಪತ್ನಿಯ ಸಾವಿನಿಂದ ತೀವ್ರವಾಗಿ ನೊಂದಿದ್ದ ಇವರು ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದರು. ಅದರಂತೆ 45 ವರ್ಷದ ಅನ್ನಪೂರ್ಣ ಎಂಬ ಮಹಿಳೆಯ ಜೊತೆ ವಿವಾಹಕ್ಕೆ ಶಿರಸಿ ತಾಲೂಕಿನ ಮಂಜಗುಣಿಯ ವೆಂಕಟರಮಣ ದೇವಸ್ಥಾನದಲ್ಲಿ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಷ್ಟರೊಳಗೆ ಈ ದುರ್ಘಟನೆ ನಡೆದಿದೆ.

ಕೊಲೆಯಾಗಿರುವ ವೈದ್ಯ ರಮೇಶ್​​ ಅವರ ಪತ್ನಿ ಕಳೆದ 8 ತಿಂಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದು, ಓರ್ವ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ ಮತ್ತೊಬ್ಬ ಪಶ್ಚಿಮ ಬಂಗಾಳದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಶಿರಸಿಯ ನಿವಾಸದಲ್ಲಿ ರಮೇಶ್ ಒಬ್ಬರೇ ವಾಸಿಸುತ್ತಿದ್ದರು. ಶಿರಸಿ ನಗರದಲ್ಲಿ ಪ್ರಸಿದ್ಧ ಆಯುರ್ವೇದ ವೈದ್ಯರಾಗಿದ್ದ ಇವರು ಉತ್ತಮ ಜೀವನ‌ ಸಾಗಿಸುತ್ತಿದ್ದರು. ಮದುವೆಯ ಹಿನ್ನೆಲೆ ತನ್ನ ಮೊದಲ ಪತ್ನಿಯ ಎಲ್ಲ ಒಡವೆಗಳನ್ನ, ಎರಡನೇ ಪತ್ನಿಗೆ ಕೊಡಲೆಂದು ಬ್ಯಾಂಕಿನಿಂದ ತಂದು ಮನೆಯಲ್ಲಿಟ್ಟಿದ್ದರು ಎಂಬ ವಿಚಾರವೂ ಘಟನೆ ಬಳಿಕ ಗೊತ್ತಾಗಿದೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪರಲೋಕಕ್ಕೆ ಕಳುಹಿಸಿದ ಪತ್ನಿ!; ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ?

ಇನ್ನು ತಮ್ಮ ಎರಡನೇ ಮದುವೆಗೆಂದು ರಮೇಶ್​​ ತಮ್ಮ ಹಲವು ಸಂಬಂಧಿಕರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಮನೆ ಬಳಿ ಬಂದ ನೆಂಟರಿಷ್ಟರು ಎಷ್ಟೇ ಬಾಗಿಲು ತಟ್ಟಿದರೂ ರಮೇಶ್​​ ಡೋರ್​​ ಓಪನ್ ಮಾಡಿರಲಿಲ್ಲ.  ಹೀಗಾಗಿ ಅನುಮಾನಗೊಂಡು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಕೊಲೆ ನಡೆದಿರೋದು ಗೊತ್ತಾಗಿದೆ. ತಲೆಗೆ ತೀವ್ರ ಗಾಯವಾಗಿರುವ ಸ್ಥಿತಿಯಲ್ಲಿ ಬೆಡ್​​ ಮೇಲೆ ರಮೇಶ್​​ ಕಂಡುಬಂದಿದ್ದಾರೆ. ಆರೋಪಿ ಅಕ್ಕಪಕ್ಕದ ಮನೆಯ ಯಾರಿಗೂ ಅನುಮಾನ ಬಾರದಂತೆ ಎಸ್ಕೇಪ್​​ ಆಗಿದ್ದಾನೆ ಎನ್ನಲಾಗಿದ್ದು, ಶಿರಸಿ ಮಾರುಕಟ್ಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಎಸ್ಪಿ ದೀಪನ್, ಸಿಪಿಐ ಶಶಿಕಾಂತ ವರ್ಮಾ ಸೇರಿದಂತೆ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಕೊಲೆ ಬಳಿಕ ಚಿನ್ನಾಭಾರಣ ದೋಚಿದ್ದಾನಾ? ಇಲ್ಲವಾ? ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಸಿಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us