ವಾಲ್ಮೀಕಿ ನಿಗಮ ಹಗರಣ: ಆಂಧ್ರದ ಫಸ್ಟ್ ಫೈನಾನ್ಸ್ ಮೂಲಕವೂ ಅವ್ಯವಹಾರ, ನಾಗೇಂದ್ರಗೆ ಇ.ಡಿ ಗ್ರಿಲ್

| Updated By: ಗಣಪತಿ ಶರ್ಮ

Updated on: Jul 11, 2024 | 10:42 AM

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಆಂಧ್ರದ ಫಸ್ಟ್ ಫೈನಾನ್ಸ್ ಸೊಸೈಟಿಯನ್ನೂ ಬಳಸಿಕೊಳ್ಳಲಾಗಿದ್ದು, ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಫಸ್ಟ್ ಫೈನಾನ್ಸ್​ಗೆ ಹಣ ವರ್ಗಾವಣೆ ಮಾಡಿದ್ದ ವಿಚಾರ ಜಾರಿ ನಿರ್ದೇಶನಾಲಯದ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಮಾಜಿ ಸಚಿವ ನಾಗೇಂದ್ರರನ್ನು ಇ.ಡಿ ತೀವ್ರ ವಿಚಾರಣೆಗೆ ಒಳಪಡಿಸಿದೆ.

ವಾಲ್ಮೀಕಿ ನಿಗಮ ಹಗರಣ: ಆಂಧ್ರದ ಫಸ್ಟ್ ಫೈನಾನ್ಸ್ ಮೂಲಕವೂ ಅವ್ಯವಹಾರ, ನಾಗೇಂದ್ರಗೆ ಇ.ಡಿ ಗ್ರಿಲ್
ನಾಗೇಂದ್ರ
Follow us on

ಬೆಂಗಳೂರು, ಜುಲೈ 11: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ ನಾಗೇಂದ್ರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತೀವ್ರ ತಪಾಸಣೆ, ಕಡತಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ನಾಗೇಂದ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಆಂಧ್ರದ ಫಸ್ಟ್ ಫೈನಾನ್ಸ್ ಸೊಸೈಟಿಗೆ ಅಕ್ರಮವಾಗಿ ವರ್ಗಾವಣೆಯಾಗಿದ್ದರ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ.

ನಕಲಿ ಬ್ಯಾಂಕ್ ಖಾತೆ ತೆರೆದು ಆಂಧ್ರ ಪ್ರದೇಶದ ಫಸ್ಟ್ ಫೈನಾನ್ಸ್ ಸೊಸೈಟಿಗೆ ಹಣ ವರ್ಗಾವಣೆಯಾಗಿದ್ದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಫಸ್ಟ್ ಫೈನಾನ್ಸ್​ನಿಂದ 200ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು. ಬಾರ್, ಚಿನ್ನದ ಅಂಗಡಿ, ಐಟಿ ಕಂಪನಿ‌ ಖಾತೆಗಳಿಗೆ ಹಣ ವರ್ಗಾವಣೆಯಾಗಿತ್ತು. ಪ್ರತಿಯೊಂದು ಖಾತೆಗೆ 10ರಿಂದ 20 ಲಕ್ಷ ರೂಪಾಯಿ ವರ್ಗಾವಣೆಯಾಗಿತ್ತು. ನಕಲಿ ಖಾತೆ ಓಪನ್ ಮಾಡಿದ ವಿಚಾರವಾಗಿ ನಾಗೇಂದ್ರರನ್ನು ಇ.ಡಿ ಅಧಿಕಾರಿಗಳು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇ.ಡಿ ಅಧಿಕಾರಿಗಳು ನಾಗೇಂದ್ರಗೆ ಕೇಳಿದ ಪ್ರಶ್ನೆಗಳೇನು?

  • ನಿಮ್ಮ ಗಮನಕ್ಕೆ ಬಾರದೆ ಇಷ್ಟೆಲ್ಲ ಹಣ ವರ್ಗಾವಣೆಯಾಯಿತೇ?
  • ನಿಮ್ಮ ಆಪ್ತ ನೆಕ್ಕುಂಟಿ ನಾಗರಾಜ್ ಮೂಲಕ ಇದೆಲ್ಲ ಮಾಡಿಸಿದಿರೇ?
  • ಇಷ್ಟು ದೊಡ್ಡ ಮಟ್ಟದ ವ್ಯವಹಾರ ನಡೆದರೂ ಪ್ರಶ್ನೆ ಮಾಡಿಲ್ಲ ಯಾಕೆ?
  • ನಿಮ್ಮ ಗಮನಕ್ಕೆ ಬಾರದೆ ಇದೆ ನಡೆಯಲು ಸಾಧ್ಯವಾ?

ಇವಿಷ್ಟು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ನಾಗೇಂದ್ರಗೆ ಕೇಳಿದ್ದಾರೆ. ಆದರೆ, ಅಧಿಕಾರಿಗಳ ಈ ಪ್ರಶ್ನೆಗಳಿಗೆ ನಾಗೇಂದ್ರ ಸ್ಪಷ್ಟವಾಗಿ ಉತ್ತರ ನೀಡಿಲ್ಲ.

ನಾಗೇಂದ್ರರನ್ನು ವಶಕ್ಕೆ ಪಡೆಯುತ್ತಾ ಇ.ಡಿ?

ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಇ.ಡಿ ಇಕ್ಕಳಕ್ಕೆ ಸಿಲುಕಿದ್ದಾರೆ. ನಾಗೇಂದ್ರ ಪಿಎ ಹರೀಶ್‌ನನ್ನೂ ವಶಕ್ಕೆ ಪಡೆದು ಇಡಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮೊದಲಿಗೆ ನಾಗೇಂದ್ರ ಮನೆಯಲ್ಲಿ ಅವರ ಮುಂದೆಯೇ ಕೂರಿಸಿ ಇ.ಡಿ ಟೀಂ ಹರೀಶ್‌ಗೆ ಗ್ರಿಲ್ ಮಾಡಿತ್ತು. ಆದರೆ ನಾಗೇಂದ್ರ ಮುಖ ನೋಡಿ ಹೆದರಿಕೊಳ್ಳುತ್ತಿದ್ದ ಹರೀಶ್ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಹೀಗಾಗಿ ಆತನನ್ನು ಶಾಂತಿನಗರ ಕಚೇರಿಗೆ ಕರೆತಂದು ವಿಚಾರಣೆ ಮಾಡಲಾಯಿತು. ಹಲವು ಪ್ರಶ್ನೆಗಳನ್ನು ಕೇಳಿದ್ದು, ಹರೀಶ್ ಹೇಳಿಕೆ ಮೇಲೆಯೇ ಬಿ.ನಾಗೇಂದ್ರ ಭವಿಷ್ಯ ನಿಂತಿದೆ ಎನ್ನಲಾಗಿದೆ.

ಈ ಮಧ್ಯೆ, ವಾಲ್ಮೀಕಿ ನಿಗಮದ ಎಲ್ಲ ಅಧಿಕಾರಿಗಳ 19 ಮೊಬೈಲ್ ಸೀಜ್ ಮಾಡಿರೋ ಇಡಿ ಅಧಿಕಾರಿಗಳು, ಆಸ್ತಿ ದಾಖಲೆ ಪತ್ರಗಳನ್ನೂ ವಶಕ್ಕೆ ಪಡೆದಿದ್ದಾರೆ. ನಿಗಮದ ಸಿಸಿಕ್ಯಾಮರಾ ಡಿವಿಆರ್, ನಕಲಿ ಸೀಲ್, ನಿಗಮದ ಲೆಡ್ಜರ್ ಬುಕ್, ಬ್ಯಾಂಕ್ ಅಕೌಂಟ್ ಲೆಕ್ಕ ಪತ್ರ, ಪದ್ಮನಾಭ್, ಪರಶುರಾಮ್ ಸಹಿ ಇರುವ ಲೆಕ್ಕ ಪತ್ರ, ದದ್ದಲ್ ನಿವಾಸದಲ್ಲಿ ಹಗರಣ ಸಂಬಂಧ ದಾಖಲೆಗಳು ಹಾಗೂ ಈಗಾಗಲೇ ತನಿಖೆ ನಡೆಸ್ತಿರೋ ಎಸ್ಐಟಿ ಸಂಗ್ರಹಿಸಿದ್ದ ಸಾಕ್ಷ್ಯವನ್ನ ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಈವರೆಗೆ ಬಂಧನಕ್ಕೊಳಗಾದವರು ಯಾರೆಲ್ಲ? ವಿವರ ಇಲ್ಲಿದೆ ನೋಡಿ

ಹೈದರಾಬಾದ್‌ನಿಂದ ಬಳ್ಳಾರಿ ಅಕೌಂಟ್‌ಗಳಿಗೆ ಹಣ ವರ್ಗಾವಣೆ

ವಾಲ್ಮೀಕಿ ನಿಗಮದ ದುಡ್ಡಿನಿಂದ ಆಸ್ತಿ ಖರೀದಿಸಿರೋ ಶಂಕೆ ಇದ್ದು, ಆಸ್ತಿ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ. ವಾಲ್ಮೀಕಿ ನಿಗಮದ ಅಕೌಂಟ್‌ನಿಂದ, ನಕಲಿ ಖಾತೆ ಮೂಲಕ ಯಾಱರ ಆಕೌಂಟ್‌ಗೆ ದುಡ್ಡು ಹೋಗಿದೆ ಅನ್ನೋ ಬಗ್ಗೆ ತನಿಖೆ ನಡೆಸಲು ಸಂಬಂಧ ಪಟ್ಟ ಎಲ್ಲಾ ದಾಖಲೆಯನ್ನ ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದಕ್ಕಾಗಿ ಮನೆ, ಕಚೇರಿಯಲ್ಲಿದ್ದ ಕಂಪ್ಯೂಟರ್, ಲ್ಯಾಪ್‌ಗಳನ್ನ ಶೋಧಿಸಿದ್ದಾರೆ. ಹೈದರಾಬಾದ್‌ನಿಂದ ಬಳ್ಳಾರಿ ಅಕೌಂಟ್‌ಗಳಿಗೂ ಹಣ ವರ್ಗಾವಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದಂಗಡಿ, ಮದ್ಯದಂಗಡಿ ಮತ್ತಿತರ ಕಡೆ ಹಣ ವರ್ಗಾವಣೆ ಆಗಿರೋ ಅನುಮಾನ ಇದ್ದು ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ