ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ಸಂಪುಟ ಸಭೆ; ಸಚಿವ ಎಂ.ಬಿ. ಪಾಟೀಲ್
ಮಲೆ ಮಹದೇಶ್ವರ ಹಾಗೂ ಕಲಬುರಗಿಯಲ್ಲಿ ನಡೆದ ಸಭೆಯಂತೆ ವಿಜಯಪುರದಲ್ಲಿಯೂ ಕ್ಯಾಬಿನೆಟ್ ಮೀಟಿಂಗ್ ಮಾಡುತ್ತೇವೆ. ಈ ಬಗ್ಗೆ ಎಲ್ಲ ಶಾಸಕರ ಮಾತನಾಡಿದ್ದೇನೆ. ಮುಂದಿನ ಎರಡು ತಿಂಗಳಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ವಿಜಯಪುರದಲ್ಲಿ ನಡೆಸಲಾಗುತ್ತದೆ. ನಮ್ಮ ಸರ್ಕಾರದಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ವಿಜಯಪುರ, ಏಪ್ರಿಲ್ 29: ಮುಂದಿನ ದಿನಗಳಲ್ಲಿ ವಿಜಯಪುರ ನಗರದಲ್ಲಿ ಸಚಿವ ಸಂಪುಟ ಸಭೆ (Cabinet Meeting) ನಡೆಸಲಾಗುತ್ತದೆ. ಮಲೆ ಮಹದೇಶ್ವರದಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ವಿಜಯಪುರದಲ್ಲಿ ಸಚಿವ ಸಂಪುಟ ನಡೆಯಬೇಕೆಂದು ಮನವಿ ಮಾಡಲಾಗಿದೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಕೂಡ ಖುಷಿಯಿಂದ ಸಮ್ಮತಿ ಸೂಚಿಸಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ವಿಜಯಪುರದಲ್ಲಿ ನಡೆಸಲಾಗುತ್ತದೆ. ನಮ್ಮ ಸರ್ಕಾರದಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಇಲ್ಲಿನ ಯೋಜನೆಗಳಿಗೆ ವೇಗ ಸಿಗುತ್ತದೆ ಎಂದು ವಿಜಯಪುರ ನಗರದಲ್ಲಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಮಲೆ ಮಹದೇಶ್ವರ ಹಾಗೂ ಕಲಬುರಗಿಯಲ್ಲಿ ನಡೆದ ಸಭೆಯಂತೆ ವಿಜಯಪುರದಲ್ಲಿಯೂ ಕ್ಯಾಬಿನೆಟ್ ಮೀಟಿಂಗ್ ಮಾಡುತ್ತೇವೆ. ಈ ಬಗ್ಗೆ ಎಲ್ಲ ಶಾಸಕರ ಮಾತನಾಡಿದ್ದೇನೆ. ಅವರು ಪ್ರಸ್ತಾವನೆಯನ್ನು ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಇದರಿಂದ ವಿಜಯಪುರ ಜಿಲ್ಲೆಯ ಎಲ್ಲ ಬೇಡಿಕೆಗಳ ಈಡೇರಿಕೆಗೆ ಅನುಕೂಲವಾಗಲಿದೆ. ಬಸವ ಜನ್ಮ ಭೂಮಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಜಯಪುರದಿಂದ ನೇರಪ್ರಸಾರ…https://t.co/YaIvaPTnA9
— M B Patil (@MBPatil) April 29, 2025
ಬಸವ ಜಯಂತಿ ಎಲ್ಲಿ?:
ಬಸವ ಜಯಂತಿಯನ್ನು ಬಸವಣ್ಣನವರ ಜನ್ಮ ಭೂಮಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆಸಬೇಕೆಂಬ ಒತ್ತಾಯದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಮುಂದಿನ ಬಾರಿ ಬಸವ ಜಯಂತಿ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಮಾಡಿದ್ದಕ್ಕೆ ಕೂಡಲಸಂಗಮದಲ್ಲಿ ನಾಳೆ ಕಾರ್ಯಕ್ರಮ ಮಾಡಲಾಗುತ್ತಿದೆ. ಬಸವ ಸಮಿತಿ ರಾಜ್ಯ ಮಟ್ಟದಲ್ಲಿ ಬಸವ ಜಯಂತಿಯನ್ನು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಕೆ ಮಾಡಲಿದ್ದಾರೆ. ಮುಂದಿನ ವರ್ಷ ಬಸವನಬಾಗೇವಾಡಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಮಾಡುತ್ತೇವೆ. ಬಸವ ಕಲ್ಯಾಣದಲ್ಲೂ ಬಸವ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕಾಲೇಜಿಗೆ ಬಾಂಬ್ ಬೆದರಿಕೆ, ಪ್ರಾಂಶುಪಾಲರನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಡುತ್ತೇವೆ ಎಂದ ದುಷ್ಕರ್ಮಿಗಳು
ಪಾಕಿಸ್ತಾನದ ವಿರುದ್ಧ ಆಕ್ರೋಶ:
ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ. ಪಾಟೀಲ್, ಸಿಎಂ ಬೇರೆ ಅರ್ಥದಲ್ಲಿ ಹೇಳಿದ್ದಾರೆ. ಸಿಎಂ ಯುದ್ಧವೊಂದೇ ಪರಿಹಾರವಲ್ಲ ಎಂದಿದ್ದಾರೆ. ಪಾಕಿಸ್ತಾನದ ಬಳಿ ನ್ಯೂಕ್ಲಿಯರ್ ಇದೆ. ಇತರೆ ಎಲ್ಲ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಯುದ್ಧ ಮಾಡಬೇಕು. ಪಾಕಿಸ್ತಾನದ ಜೊತೆ ಯುದ್ಧ ಆಗಲೇಬೇಕು. ಪಾಕ್ ಗೆ ತಕ್ಕ ಶಾಸ್ತಿ ಆಗಲೇ ಬೇಕು. ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕ್ರಮ ಕೈಗೊಂಡ ರೀತಿ ಕ್ರಮ ತೆಗೆದುಕೊಳ್ಳಬೇಕು. ಪಾಕಿಸ್ತಾನವನ್ನು ನಾವು ಸದೆಬಡಿಯಬೇಕು ಎಂದು ಹೇಳಿದ್ದಾರೆ.
ಯುದ್ಧಕ್ಕೆ ಹೆದರಿ ಪಾಕಿಸ್ತಾನದ ಸೈನಿಕರು, ಅಧಿಕಾರಿಗಳು ಓಡಿ ಹೋಗಿದ್ದಾರೆ. ಪಹಲ್ಗಾಮ್ ಘಟನೆ ಹೇಡಿಗಳ ಕೃತ್ಯ, ಹೇಯ ಕೃತ್ಯ. ಈಗ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಸೂಕ್ತ ಸೇನೆ ಪೊಲೀಸ್ ವ್ಯವಸ್ಥೆ ಬೇಕು. ಆಯಕಟ್ಟಿನ ಜಾಗದಲ್ಲಿ ಸೇನೆಯನ್ನು ನೇಮಿಸಬೇಕು. ಕಾಶ್ಮೀರದಲ್ಲಿ ಮತ್ತೆ ಪ್ರವಾಸೋದ್ಯಮ ಆರಂಭವಾಗಬೇಕು. ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಪೆಹಲ್ಗಾಮ್ ಘಟನೆ ಖಂಡಿಸಬೇಕು ಎಂದು ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಗ್ಗೆ ಎನ್ಐಎ ತನಿಖೆ ಚುರುಕು: ಭರತ್ ಭೂಷಣ್ ಪತ್ನಿಯಿಂದ ಮಹತ್ವದ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು
ಉಗ್ರರು ಮಾಡಿದ್ದು ಹೇಡಿತನದ ಕೃತ್ಯ. ಹುಡುಕಿ ಹುಡುಕಿ ಉಗ್ರರನ್ನ ಕೊಲ್ಲಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಬೇಕು. ಕಾಶ್ಮೀರದಲ್ಲಿಯೂ ಪಾಕಿಸ್ತಾನಕ್ಕೆ ಬೆಂಬಲ ಇಲ್ಲ. ಕೇಂದ್ರ ಸರ್ಕಾರದ ಜೊತೆಗೆ, ಮೋದಿ ಜೊತೆಗೆ ಎಲ್ಲ ರಾಜಕೀಯ ಪಕ್ಷಗಳಿವೆ. ಯುದ್ಧ ಬಹಳ ಎಚ್ಚರಿಕೆಯಿಂದ, ಪರಿಣಾಮಕಾರಿಯಾಗಿ ಆಗಬೇಕು. ಕೇಂದ್ರದ ಜೊತೆಗೆ ನಾವು ಇದ್ದೇವೆ. ಪಾಕಿಸ್ತಾನ ಅಣು ಬಾಂಬ್ ದಾಳಿಯ ಬೆದರಿಕೆ ಹಾಕುತ್ತಿದೆ. ಮುನ್ನೆಚ್ಚರಿಕೆ ತೆಗೆದುಕೊಂಡು ಭಾರತ ಯುದ್ಧ ಮಾಡಲಿ. ನಮ್ಮ ದೇಶದ ಜನರಿಗೆ ತೊಂದರೆಯಾದಂತೆ ಯುದ್ಧ ನಡೆಯಲಿ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Tue, 29 April 25







