
ವಿಜಯಪುರ, ಜನವರಿ 22: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು, ಅದೇ ರಾಮ ಮಂದಿರದಲ್ಲಿ ಇಂದು ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಈ ರಾಮ ಮಂದಿರ ಉದ್ಘಾಟನೆ ಪ್ರಯುಕ್ತವಾಗಿ ರಾಜ್ಯದಲ್ಲಿ ವಿಶೇಷ ಕಾರ್ಯಕ್ರಮಗಳು ಕಂಡುಬಂದಿವೆ. ಅದರಂತೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅಧ್ಯಕ್ಷತೆಯ ಶ್ರೀ ಸಿದ್ದೇಶ್ವರ ಸಂಸ್ಥೆಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ (JSS Hospital) ಯಲ್ಲಿ ಜನವರಿ 18 ರಿಂದ 22 ರವಗೆಗೂ ಉಚಿತ ಹೆರಿಗೆ ಘೋಷಣೆ ಮಾಡಲಾಗಿತ್ತು. ಹೀಗಾಗಿ ಆಸ್ಪತ್ರೆಯಲ್ಲಿ ಈವರೆಗೆ 61 ಮಕ್ಕಳ ಜನನವಾಗಿದ್ದು, ನಾಲ್ಕು ಮಕ್ಕಳಿಗೆ ಆಸ್ಪತ್ರೆಯಲ್ಲೇ ನಾಮಕರಣ ಮಾಡಲಾಗಿದೆ.
ಶ್ರೀ ಸಿದ್ದೇಶ್ವರ ಸಂಸ್ಥೆಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಯತ್ನಾಳ ಪುತ್ರ ರಾಮನಗೌಡ ಪಾಟೀಲ್ ಮತ್ತು ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮೂರು ಗಂಡು ಮಕ್ಕಳಿಗೆ ರಾಮ ಎಂದು ನಾಮಕರಣ ಮಾಡಿದರೇ, ಒಂದು ಹೆಣ್ಣು ಮಗುವಿಗೆ ಸೀತಾ ಎಂದು ನಾಮಕರಣ ಮಾಡಲಾಗಿದೆ. ಆಸ್ಪತ್ರೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಸಂಭ್ರಮಿಸಲಾಗಿದೆ.
ಮೈಸೂರಿನಲ್ಲಿ ರಾಮನಿಗಾಗಿ ಸೈಕಲ್ ಬ್ರ್ಯಾಂಡ್ನ 111 ಅಡಿ ಎತ್ತರದ ಅಪರೂಪದ ಅಗರಬತ್ತಿ ಹಚ್ಚಿ ಸಂಭ್ರಮಿಸಲಾಗಿದೆ. ಅರಮನೆ ಕೋಟೆ ಆಂಜನೇಯ ದೇಗುಲದ ಬಳಿ ಸೃಷ್ಟಿ, ಸ್ಥಿತಿ, ಲಯ, ಬ್ರಹ್ಮ, ವಿಷ್ಣು, ಮಹೇಶ್ವರ ಪ್ರತೀಕವಾಗಿ 111 ಅಡಿ ಅಗರಬತ್ತಿ ಮಾಡಲಾಗಿದೆ.
ಇದನ್ನೂ ಓದಿ: ಜ. 22ರಂದೇ ಹೆರಿಗೆ ಕ್ರೇಜ್: ಬೆಂಗಳೂರಿನಲ್ಲಿ ರಾಮಲಲ್ಲಾ ಪ್ರತಿಷ್ಠಾನೆ ದಿನವೇ 60ಕ್ಕೂ ಹೆಚ್ಚು ಮಕ್ಕಳ ಜನನ
ಇದ್ದಿಲು, ಜಿಗಟು ಬಿದಿರು, ಶ್ರೀಗಂಧದ ಪುಡಿ, ಜೇನು ತುಪ್ಪ, ಸಾಂಬ್ರಣಿ, ಬಿಳಿ ಸಾಸಿವೆ, ಬೆಲ್ಲ ಸೇರಿ ಹಲವು ಪದಾರ್ಥ ಬಳಕೆ ಮಾಡಲಾಗಿದೆ. ಪರಂಪರಾ ಹೆಸರಿನಲ್ಲಿ 18 ನುರಿತ ಕುಶಲಕರ್ಮಿಗಳಿಂದ, 23 ದಿನ ಕೆಲಸ ಮಾಡಿ ವಿಶೇಷ ಅಗರಬತ್ತಿ ತಯಾರಿಕೆ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚಿಂಚಖಂಡಿ ಗ್ರಾಮದಲ್ಲಿ ಪುಟಾಣಿ ಮಕ್ಕಳಿಂದ ರಾಮ, ಲಕ್ಷ್ಮಣ, ಶಬರಿ ದೃಶ್ಯ ರೂಪಕ ಮಾಡಿ ಗಮನ ಸೆಳೆದಿದ್ದಾರೆ. ಚಿಂಚಖಂಡಿ ಗ್ರಾಮದ ಸೀಮಾ ಹಾಗೂ ಸಂತೋಷ ಅವರ ಮಕ್ಕಳಾದ ಆದ್ಯಾ ಮತ್ತು ಐರಾ, ಆಶಾ-ಶಶಿಧರ ಅವರ ಮಕ್ಕಳಾದ ನರೇಂದ್ರಯಿಂದ ದೃಶ್ಯ ರೂಪಕ ಮಾಡಲಾಗಿದೆ. ರಾಮ ಶಬರಿ ದೃಶ್ಯ ಅಭಿನಯಿಸಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಇಂದು ಬೀದಿ ಬದಿ ವ್ಯಾಪಾರಸ್ಥರಿಂದ ಹಿಡಿದು ಶ್ರೀಮಂತರವರೆಗೆ ಶ್ರೀರಾಮನ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡಲಾಗಿದೆ. ಕೆಲವೆಡೆ ಪಟಾಕಿ ಸಿಡಿಸಿ, ಲಡ್ಡು ಹಂಚಿ ಸಂಭ್ರಮಾಚರಣೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.