ರಾಮನ ಪೂಜೆ ಮಾಡಿದ್ದಕ್ಕೆ ಜೈಲಿನಲ್ಲಿ ಹಲ್ಲೆ: ಪ್ರಧಾನಿ ಮೋದಿ ಸಹಾಯ ಕೋರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂತ್ರಸ್ತ ಆರೋಪಿ

ರಾಮನ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡಿದ್ದಕ್ಕೆ ಅನ್ಯಕೋಮಿನ ಆರೋಪಿ ಶೇಖ್ ಮೋದಿ ಹಾಗೂ ಇತರರರು ನಮ್ಮ ಮೇಲೆ ಹಲ್ಲೆ ಮಾಡಿದರು. ಆದರೆ ಜೈಲು ಅಧಿಕಾರಿ, ಸಿಬ್ಬಂದಿ ನಮ್ಮ ರಕ್ಷಣೆಗೆ ಬರಲಿಲ್ಲ. ಬದಲಾಗಿ ಈಗ ನಮ್ಮನ್ನು ಜೈಲು ಆವರಣದಲ್ಲಿ ಬಿಡದೇ ಸೆಲ್ ನಲ್ಲಿಟ್ಟಿದ್ದಾರೆ ಎಂದು ಸಂತ್ರಸ್ತ ಆರೋಪಿ ಮಹಾರಾಷ್ಟ್ರ ಮೂಲದ ಪರಮೇಶ್ವರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ.

ವಿಜಯಪುರ: ಜನವರಿ 22ರಂದು ಅತ್ತ ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಬಾಲರಾಮನ ಪ್ರತಿಷ್ಠಾಪನೆ ನಡೆದು ಕೋಟ್ಯಂತರ ಹಿಂದೂಗಳು ಧಾರ್ಮಿಕ ಪರಾಕಾಷ್ಠೆ ತಲುಪಿದ್ದ ಹೊತ್ತಿನಲ್ಲೇ ಇತ್ತ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನ ಪೂಜೆ ಮಾಡಿ ಪ್ರಸಾದ ಹಂಚಿದ್ದಕ್ಕೆ ಜೈಲಿನಲ್ಲಿ ಆರೋಪಿಯ ಮೇಲೆ ಹಲ್ಲೆ ನಡೆಸಿರುವ ಪ್ರಸಂಗ ನಡೆದಿದೆ. ಈ ಸಂಬಂಧ ಸಂತ್ರಸ್ತ ಆರೋಪಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ.

ರಾಮ ಮಂದಿರ ಉದ್ಘಾಟನೆಯಂದು ರಾಮನ ಪೂಜೆ ಮಾಡಿ ಪ್ರಸಾದ ಹಂಚಿದ್ದಕ್ಕೆ ಆರೋಪಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಮೂಲದ ಪರಮೇಶ್ವರ ಎಂಬ ಆರೋಪಿ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ಕಳೆದ 22 ರಂದು ರಾಮನ ಪೂಜೆಗೆ ಜೈಲು ಅಧಿಕಾರಿಗಳಿಗೆ ಅನುಮತಿಗಾಗಿ ಮನವಿ ಮಾಡಿದ್ದೆವು. ಆದರೆ ಅಧಿಕಾರಿಗಳು ಅನುಮತಿ‌ ನೀಡಿರಲಿಲ್ಲ. ಆದರೂ ಜನವರಿ 22 ರಂದು ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನ ಪೂಜೆ ಮಾಡಿ ಪ್ರಸಾದ ಹಂಚಿದೆವು ಎಂದಿರೋ ಆರೋಪಿ ಪರಮೇಶ್ವರ, ಅದಾದಮೇಲೆ ಜನವರಿ 23 ರಂದು ಸಹಾಯಕ ಜೈಲು ಅಧೀಕ್ಷಕ ಚೌಧರಿ ತಮ್ಮ ಚೇಂಬರ್ ಗೆ ನನ್ನನ್ನು ಹಾಗೂ ನನ್ನ ಜೊತೆಗೆ ಪೂಜೆ ಮಾಡಿದ ಇನ್ನೂ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿದರು.

ಇದನ್ನೂ ಓದಿ: ಉಚ್ಛ್ರಾಯ ಸ್ಥಿತಿ ತಲುಪಿದ ರಾಮ ಜಪ, ಜೈಲಿನಲ್ಲಿ ಕೈದಿಗಳಿಗೂ ಅಯೋಧ್ಯೆ ಮಂತ್ರಾಕ್ಷತೆ, ತುಳಸಿ ಮಾಲೆ

ಆಗ ಅನ್ಯಕೋಮಿನ ಆರೋಪಿ ಶೇಖ್ ಮೋದಿ ಹಾಗೂ ಇತರರರು ನಮ್ಮ ಮೇಲೆ ಹಲ್ಲೆ ಮಾಡಿದರು. ರಾಮನ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡಿದ್ದಕ್ಕೆ ಹಲ್ಲೆ ಮಾಡಿದರು. ನಮ್ಮ ಮೇಲೆ ಹಲ್ಲೆ ಮಾಡಿದರೂ ಜೈಲು ಅಧಿಕಾರಿ ಸಿಬ್ಬಂದಿ ನಮ್ಮ ರಕ್ಷಣೆ ಮಾಡಿಲ್ಲ. ಬದಲಾಗಿ ಈಗ ನಮ್ಮನ್ನು ಜೈಲು ಆವರಣದಲ್ಲಿ ಬಿಡದೇ ಸೆಲ್ ನಲ್ಲಿಟ್ಟಿದ್ದಾರೆ.

ಈ ವಿಷಯವಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಮಗೆ ಸಹಾಯ ಮಾಡಬೇಕು ಎಂದು ಆರೋಪಿ ಪರಮೇಶ್ವರ ಮನವಿ ಮಾಡಿದ್ದಾನೆ. ಆದರೆ ರಾಮನ‌ ವಿಚಾರ ಇಟ್ಟುಕೊಂಡು ಆರೋಪಿ ಸುಳ್ಳು ಹೇಳುತ್ತಿದ್ದಾನೆಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಐ ಜಿ ಮ್ಯಾಗೇರಿ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದ ಜೈಲಿನಿಂದ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಮೂವರು ಆರೋಪಿಗಳು ಬಂದಿದ್ದಾರೆ. ಮಹಾರಾಷ್ಟ್ರದ ಜೈಲಿನಲ್ಲಿ ಗಲಾಟೆ ಮಾಡಿದ ಕಾರಣ ಇಲ್ಲಿಗೆ ಕಳುಹಿಸಿದ್ದಾರೆ. ಈಗ ರಾಮ ಮಂದಿರ ಉದ್ಘಾಟನೆ ವಿಚಾರ ಮುಂದಿಟ್ಟು ಸುಳ್ಳು ಹೇಳುತ್ತಿದ್ದಾರೆ. ಜನವರಿ 23 ರಂದು ಜೈಲಲ್ಲಿ ಇತರ ಅಪರಾಧಿಗಳ ಜೊತೆಗೆ ಇವರು ಗಲಾಟೆ ಮಾಡಿದ್ದಾರೆ. ಆದ್ದರಿಂದ ಪ್ರತ್ಯೇಕ ಸೆಲ್ ನಲ್ಲಿಡಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ಆರೋಪಿ ವಿಡಿಯೋ ಹೇಳಿಕೆ ಬಿಡುಗಡೆ ಕುರಿತು ತನಿಖೆ ಮಾಡಲಾಗುತ್ತದೆ. ಜೈಲಲ್ಲಿ ಮೋಬೈಲ್ ಹೇಗೆ ಬಂತು? ಆರೋಪಿ ಪರಮೇಶ್ವರ ಮಾಡಿರುವ ಆರೋಪದ ಕುರಿತು ತನಿಖೆ ನಡೆಸೋದಾಗಿ ಜೈಲು ಅಧೀಕ್ಷಕ ಐ ಜಿ ಮ್ಯಾಗೇರಿ ಹೇಳಿದ್ದಾರೆ.

Published On - 10:32 am, Sat, 27 January 24

Loading...
Unable to load recommendations.
Follow Us