
ಬೆಂಗಳೂರು, ಮೇ 21: ಕರುನಾಡಿನ ಹೆಮ್ಮೆಯ ಲೇಖಕಿ ಹಾಸನದ ಬಾನು ಮುಷ್ತಾಕ್ (Banu Mushtaq) ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು (Booker Award) ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ “ಹಸೀನಾ ಮತ್ತು ಇತರೆ ಕತೆಗಳು” ಕೃತಿಯ ಇಂಗ್ಲಿಷ್ ಅನುವಾದ “ಹಾರ್ಟ್ ಲ್ಯಾಂಪ್” ಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಇದು ನಿಜಕ್ಕೂ ದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸಾಮಾಜಿಕ ಕಾರ್ಯಕರ್ತೆ, ವಕೀಲೆಯಾಗಿರುವ ಇವರು ಸಾಹಿತ್ಯ ಕ್ಷೇತ್ರಕ್ಕೆ ಬಂದಿದ್ದೇ ಅಚ್ಚರಿ ಹಾಗಾದರೆ, ಈ ಬಾನು ಮುಷ್ತಾಕ್ ಯಾರು?
ಮೂಲತಃ ಹಾಸನದವರೇ ಆದ ಬಾನು ಮುಷ್ತಾಕ್ ಬೆಳೆದದ್ದು ಹಾಸನದಲ್ಲಿಯೇ. ಅರಸೀಕೆರೆಯಲ್ಲಿ ಶಾಲೆಗೆ ಸೇರಿದ ಬಾನುಗೆ ಉರ್ದು ಮಾತ್ರ ತಲೆಗೆ ಹೋಗಲಿಲ್ಲ. ಹೀಗಾಗಿ ಅವರ ಪೋಷಕರು ಕನ್ನಡವನ್ನಾದರೂ ಕಲಿಯಲಿ ಎಂದು ಆಕೆಯನ್ನು ಶಿವಮೊಗ್ಗದ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗೆ ಸೇರಿಸುತ್ತಾರೆ. ಬಳಿಕ ಪದವಿವರೆಗೂ ವ್ಯಾಸಂಗ ಮಾಡುತ್ತಾರೆ.
ಇದನ್ನೂ ಓದಿ: ಕನ್ನಡ ನಾಡಿನ ಮೊಟ್ಟಮೊದಲ ಕೃತಿಗೆ ಬೂಕರ್ ಪ್ರಶಸ್ತಿ ಗರಿ: ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಹಿತಿ ಬಾನು ಮುಷ್ತಾಕ್
ಮುಂದೆ ವೃತ್ತಿಯಲ್ಲಿ ವಕೀಲೆಯಾದ ಬಾನು ಮುಷ್ತಾಕ್ ಅವರು, ಮುಸ್ಮಿಂ ಮಹಿಳೆಯ ಪರವಾಗಿ ತಮ್ಮ ಧ್ವನಿ ಎತ್ತುತ್ತಾರೆ. ಸಾಕಷ್ಟು ಮುಸ್ಮಿಂ ಮಹಿಳೆ ಕೇಸ್ಗಳನ್ನು ವಾದಿಸುತ್ತಾರೆ. ಓರ್ವ ಮುಸ್ಮಿಂ ಯುವತಿ ಸಿನಿಮಾ ನೋಡಿದ್ದಕ್ಕೆ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಇದನ್ನು ಖಂಡಿಸುವುದು ಮಾತ್ರವಲ್ಲದೇ ಲಂಕೇಶ್ ಪತ್ರಿಕೆಗೆ ಬರೆಯುವ ಮೂಲಕ ಮಾಧ್ಯಮ ಲೋಕಕ್ಕೂ ಪಾದಾರ್ಪಣೆ ಮಾಡುತ್ತಾರೆ.
ಬಾನು ಮುಷ್ತಾಕ್ ಅವರು ಒಂದು ರೀತಿ ಬಹುಮುಖ ಪ್ರತಿಭೆ ಎಂದೇ ಹೇಳಬಹುದು. ಏಕೆಂದರೆ ಸಾಮಾಜಿಕ ಕಾರ್ಯಕರ್ತೆ, ಮಹಿಳಾಪರ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಪತ್ರಕರ್ತೆಯಾಗಿ ಗಮನ ಸೆಳೆದಿದ್ದಾರೆ. ಇಂತವರು ಮಾತ್ರ ಸಾಹಿತಿಗಳಾಗುವುದಕ್ಕೆ ಸಾಧ್ಯ ಎನ್ನುವ ಸಂದರ್ಭದಲ್ಲಿ ಅದೆಲ್ಲವನ್ನು ಮೀರಿ ಬಾನು ಮುಷ್ತಾಕ್ ಸಾಹಿತ್ಯ ಲೋಕಕ್ಕೆ ಎಂಟ್ರಿ ಕೊಡುತ್ತಾರೆ.
ಬಾಲ್ಯದಲ್ಲೇ ಬಾನು ಮುಷ್ತಾಕ್ ಅವರು ಬರೆವಣಿಗೆಯನ್ನು ರೂಢಿಸಿಕೊಂಡಿದ್ದರು. ಇದೇ ಅವರಿಗೆ ಸಾಹಿತ್ಯ ಲೋಕಕ್ಕೆ ಬರಲು ಸಾಧ್ಯವಾಯಿತು. ತಮ್ಮ ವೃತ್ತಿ ಬದುಕಿನ ಜೊತೆಜೊತೆಗೆ ಸಾಹಿತ್ಯಿಕವಾಗಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಕಥೆ, ಕಾದಂಬರಿಗಳು, ಪ್ರಬಂಧಗಳನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: Booker Prize 2025: ಬೂಕರ್ ಅವಾರ್ಡ್ ಪಟ್ಟಿಯಲ್ಲಿ ಕನ್ನಡ ಲೇಖಕಿ ಬಾನು ಮುಷ್ತಾಕ್ ಕೃತಿ
ಇನ್ನು ಇವರಿಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಒಲಿದು ಬಂದಿವೆ. ಬಾನು ಮುಷ್ತಾಕ್ ಅವರ ‘ಹಸೀನ ಮತ್ತು ಇತರೆ ಕತೆಗಳು’ ಕೃತಿಯನ್ನು ಪತ್ರಕರ್ತೆ ದೀಪಾ ಭಕ್ತಿಯವರು ‘ಹಾರ್ಟ್ ಲ್ಯಾಂಪ್’ ಎಂದು ಇಂಗ್ಲಿಷ್ಗೆ ಅನುವಾದಿಸಿದ್ದಾರೆ.
ಬೂಕರ್ ಪ್ರಶಸ್ತಿ ಹಿನ್ನಲೆ ಸಾಹಿತಿ ಬಾನು ಮುಷ್ತಾಕ್ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರ ಪುತ್ರ, ಪ್ರಶಸ್ತಿ ಬರುವವರೆಗೂ ತುಂಬಾ ಕುತೂಹಲವಿತ್ತು. ಇನ್ನೂ ಆ ಗುಂಗಿನಿಂದ ಹೊರಬರಲು ಆಗಿಲ್ಲ. ಈ ಹಿಂದೆ ಸಿಕ್ಕ ಎಲ್ಲಾ ಬೂಕರ್ ಪ್ರಶಸ್ತಿಗಳು ಕಾದಂಬರಿಗೆ ಹೆಚ್ಚು ಸಿಕ್ಕಿದ್ದವು. ಆದರೆ ಈ ಬಾರಿ ಆಯ್ದ ಕತೆಗಳಿಗೆ ಸಿಗುತ್ತೋ ಇಲ್ಲವೋ ಎಂಬ ಅನುಮಾನ ಇತ್ತು. ಆ ಅನುಮಾನ ಮೀರಿ ನನ್ನ ತಾಯಿಯ ಕೃತಿಗೆ ಪ್ರಶಸ್ತಿ ಸಿಕ್ಕಿದೆ. ಇದು ನಮ್ಮ ನಾಡಿಗೆ ಹೆಮ್ಮೆಯ ವಿಚಾರ. ಅವರು ಮೊದಲಿನಿಂದಲೂ ಸಾಹಿತ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಈ ಪ್ರಶಸ್ತಿ ಸಿಕ್ಕಿರುವುದು ನಮಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Wed, 21 May 25