ಮೋದಿಯಿಂದಲೇ ವಿಜಯೇಂದ್ರ ಬಣಕ್ಕೆ ಟಕ್ಕರ್​ ಕೊಡಿಸಲು ಯತ್ನಾಳ್ ಮೆಗಾ ಪ್ಲ್ಯಾನ್!

ಕರ್ನಾಟಕ ಬಿಜೆಪಿಯಲ್ಲಿನ ಬಣ ಬಡಿದಾಟ ತಾರಕಕ್ಕೇರಿದೆ. ಯತ್ನಾಳ್ ಹಾಗೂ ವಿಜಯೇಂದ್ರ ಬಣದ ನಡುವಿನ ಜಂಗೀಕುಸ್ತಿ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ವಿಜಯೇಂದ್ರ ಬಣದ ದಾವಣಗೆರೆ ಸಮಾವೇಶಕ್ಕೆ ತಿರುಗೇಟು ನೀಡಲು ಯತ್ನಾಳ್ ಪ್ಲ್ಯಾನ್ ಮಾಡಿದ್ದಾರೆ.

ಮೋದಿಯಿಂದಲೇ ವಿಜಯೇಂದ್ರ ಬಣಕ್ಕೆ ಟಕ್ಕರ್​ ಕೊಡಿಸಲು ಯತ್ನಾಳ್ ಮೆಗಾ ಪ್ಲ್ಯಾನ್!

Updated on: Dec 01, 2024 | 5:51 PM

ಬೆಳಗಾವಿ, (ಡಿಸೆಂಬರ್ 01): ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಬಣ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಯತ್ನಾಳ್ ತಂಡದ​ ವಿರುದ್ಧ ಶಿಸ್ತು ಕ್ರಮ ಜರುಗಿಸವಂತೆ ಹೈಕಮಾಂಡ್​ಗೆ ಒತ್ತಾಯಿಸಲು ತೀರ್ಮಾನಿಸಿದೆ. ವಕ್ಫ್​ ವಿಚಾರ ಇಟ್ಟುಕೊಂಡೇ ವಿಜಯೇಂದ್ರ ವಿರುದ್ಧ ರಣಕಹಳೆ ಮೊಳಗಿಸಿರುವ ಯತ್ನಾಳ್ ತಂಡ, ಇದೀಗ ದಾವಣಗೆರೆ ಸಮಾವೇಶಕ್ಕೆ ತಿರುಗೇಟು ನೀಡಲು ತಯಾರಾಗಿದೆ. ಹೌಡು…ಅದೇ ದಾವಣಗೆರೆಯಲ್ಲಿ ಹಿಂದೂಗಳು ಸಮಾವೇಶ ಮಾಡಲು ಮುಂದಾಗಿದೆ. ಇದರೊಂದಿಗೆ ಮತ್ತಷ್ಟು ಬಣ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆಗಳಿವೆ.

ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮನ್ನ ಅಪರೇಷನ್ ಮಾಡಿದ್ರೆ ನಿಮ್ಮನ್ನ ಕಟ್ ಮಾಡುತ್ತೇವೆ. ದಾವಣಗೆರೆಯಲ್ಲಿ ನಾವು ಹಿಂದೂಗಳು ಸಮಾವೇಶ ಮಾಡುತ್ತೇವೆ. ಯಾರೂ ಮಾಡಿರದ ಸಮಾವೇಶವನ್ನು ಮಾಡಿ ತೋರಿಸುತ್ತೇವೆ. 25 ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಯೋಜನೆ ಇದ್ದು, ಕಾರ್ಯಕ್ರಮಕ್ಕೆ ಬೆಳಗಾವಿಯಿಂದ ಒಂದು ಲಕ್ಷ ಜನರು ಬರುತ್ತಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಪ್ಲ್ಯಾನ್ ಇದ್ದು, ನಮ್ಮ ಶಕ್ತಿ ಏನೆಂದು ದಾವಣಗೆರೆಯಲ್ಲಿ ತೋರಿಸುತ್ತೇವೆ ಎಂದು ವಿಜಯೇಂದ್ರ ಬಣಕ್ಕೆ ಸವಾಲುನ ಹಾಕಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ದಿನದಿಂದ ದಿನಕ್ಕೆ ತಾರಕಕ್ಕೇರಿದ ಬಣ ಬಡಿದಾಟ: ಎರಡೂ ಬಣಗಳ ರಹಸ್ಯ ಸಭೆ

ವಕ್ಫ್ ವಿರುದ್ಧ ಜನಜಾಗೃತಿ ಸಮಾವೇಶಕ್ಕೆ ಹಣ ನೀಡುವುದಾಗಿ ಹಲವರು ಘೋಷಣೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ 1 ಕೋಟಿ ರೂ, ಘೋಷಿಸಿದ್ದಾರೆ. ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ 1 ಕೋಟಿ ಹಣ ನೀಡುತ್ತೇವೆ. ರೈತರು, ಮಠ ಮಂದಿರ, ಸರ್ಕಾರಿ ಶಾಲೆ ಆಸ್ತಿ ಉಳಿಸಲು ನಮ್ಮ ಹೋರಾಟ. ದಾವಣಗೆರೆಯ ಸಮಾವೇಶಕ್ಕೆ ಪ್ರಧಾನಿ ಮೋದಿ ಕರೆಸುವ ಚಿಂತನೆಯಿದೆ.ದಾವಣಗೆರೆ ಸಮಾವೇಶಕ್ಕೆ 25 ಲಕ್ಷ ಜನರನ್ನು ಸೇರಿಸಲು ಚಿಂತಿಸಿದ್ದೇವೆ.ಜನರ ಹಣ ಲೂಟಿ ಮಾಡಿ ದುಬೈ, ಮಾರಿಷಸ್​ನಲ್ಲಿ ಆಸ್ತಿ ಮಾಡಿದ್ದಾರೆ. ಗುಟ್ಟಾಗಿ ಆಸ್ತಿ ಮಾಡಿದವರು ಮೃತಪಟ್ಟರೆ ಅದು ಕಂಡವರ ಪಾಲಾಗುತ್ತೆ ಎಂದರು.

ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಆದರೆ ಅಷ್ಟೇ. ನಿಮ್ಮ ಕಣ್ಮುಂದೆಯೇ ಜಮ್ಮು-ಕಾಶ್ಮೀರ ಮತ್ತು ಕೇರಳ ಇದೆ. ಯಾರನ್ನೋ ಸಿಎಂ ಮಾಡಲು ನಾವು ಹೋರಾಟ ಮಾಡುತ್ತಿಲ್ಲ. ನನ್ನ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಬಂದ್‌ ಮಾಡಿಸಿದ್ದಾರೆ. ನಾನು ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನನ್ನ ಮೇಲೆ ಈವರೆಗೆ 42 ಕೇಸ್‌ಗಳನ್ನು ಹಾಕಿದ್ದಾರೆ. ಇಷ್ಟೆಲ್ಲಾ ಇರುವಾಗ ಯಾರಾದ್ರು ಹೊಂದಾಣಿಕೆ ಎಂದು ಹೇಳ್ತಾರಾ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಬಳಿ ಹೋಗಿಲ್ಲ. ವಿಧಾನಸೌಧದಲ್ಲಿ ಹೇ ಯತ್ನಾಳ್‌ ಎಂದು ಡಿ.ಕೆ.ಶಿವಕುಮಾರ್ ಕರೆದ. ಅವತ್ತೇ ಯಾಕಲೇ ಮಗನೇ ಎಂದು ನಾನು ಡಿಕೆಗೆ ಕರೆದಿದ್ದೆ ಎಂದು ಗುಡುಗಿದರು. ಈ ಮೂಲಕ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ಟರು.

ಹೈಕಮಾಂಡ್​ ಭೇಟಿಗೆ ಯತ್ನಾಳ್ ತಂಡ ರೆಡಿ

ಅತ್ತ ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರೆ, ಇತ್ತ ಯತ್ನಾಳ್​ ತಂಡ ಬೆಳಗಾವಿಯಲ್ಲಿ ರಹಸ್ಯ ಸಭೆ ನಡೆಸಿದ್ದು, ಮುಂದಿನ ರಾಜಕೀಯ ಹೋರಾಟದ ಬಗ್ಗೆ ಚರ್ಚಿಸಿದೆ. ವಿಜಯೇಂದ್ರ ಹೊಂದಾಣಿಕೆ ದಾಖಲೆಗಳನ್ನು ಹೈಕಮಾಂಡ್​ ನೀಡುವ ಜವಾಬ್ದಾರಿಯನ್ನು ಯತ್ನಾಳ್​ ವಹಿಸಿಕೊಂಡಿದ್ದರೆ, ಮುಂದಿನ ರಾಜಕೀಯ ಹೋರಾಟದ ಹೊಣೆಯನ್ನು ರಮೇಶ್ ಜಾರಕಿಹೊಳಿ ಹೊತ್ತುಕೊಂಡಿದ್ದಾರೆ.

ವಕ್ಫ್ ಹೋರಾಟದ ವರದಿ ಹಿಡಿದು ದೆಹಲಿಗೆ ತೆರಳಲಿರುವ ಯತ್ನಾಳ್ ಬಣ, ನಾಳೆ (ಡಿಸೆಂಬರ್ 2) ಮಧ್ಯಾಹ್ನ ಮೇಲೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಜ್ಯ ರಾಜಕಾರಣದ ಬಗ್ಗೆ ಮಾತುಕತೆ ನಡೆಸಲಿದೆ. ಇದೇ ವೇಳೆ ವರಿಷ್ಠ ಎದುರು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಮಾತ್ರ ವಿಷಯ ಮಂಡನೆ ಮಾಡಲಿದ್ದು, ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಅಲ್ಲದೇ ಹೊಂದಾಣಿಕೆ ರಾಜಕಾರಣದ ದಾಖಲೆಗಳನ್ನು ವರಿಷ್ಠರಿಗೆ ಸಲ್ಲಿಸುವ ಪ್ಲ್ಯಾನ್ ಸಹ ಯತ್ನಾಳ್​ ತಂಡ ಮಾಡಿಕೊಂಡಿದೆ.

ವಿಜಯೇಂದ್ರ ಬಣದಿಂದ ದಾವಣಗೆರೆಯಲ್ಲಿ ಸಮಾವೇಶ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಕ್ಫ್​ ವಿಚಾರದಲ್ಲಿ ಪ್ರತ್ಯೇಕ ತಂಡ ಕಟ್ಟಿಕೊಂಡು ಹೋರಾಟ ನಡೆಸಿದ್ದಾರೆ. ಆದ್ರೆ, ಹೋರಾಟದ ಮಧ್ಯ ವಿಜಯೇಂದ್ರ, ಯಡಿಯೂರಪ್ಪ ಹಾಗೂ ಅವರ ಬಣದ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಇದು ವಿಜಯೇಂದ್ರ ಬಣದ ಆಕ್ರೋಶಕ್ಕೆ ಕಾರಣವಾಗಿದ್ದು, ಎಲ್ಲಾ ಮಾಜಿ ಶಾಸಕರು ಸೇರಿಸಿಕೊಂಡು ಯತ್ನಾಳ್​ ಟೀಂ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಎಂಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ, ಹಾಲಪ್ಪ ಸೇರಿದಂತೆ ಮಾಜಿ ಶಾಸಕರು ಒಟ್ಟಿಗೆ ಸೇರಿಕೊಂಡು ಯತ್ನಾಳ್​ ಟೀಂ ವಿರುದ್ಧ ತೊಡೆತಟ್ಟಿದ್ದು, ಪಕ್ಷದ ಅಧ್ಯಕ್ಷರ ವಿರುದ್ಧ ಹೇಳಿಕೆ ನೀಡುವ ಯತ್ನಾಳ್ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಬಿಗಿಪಟ್ಟು ಹಿಡಿದಿದೆ. ಈ ಸಂಬಂಧ ವಿಜಯೇಂದ್ರ ಬಣ ದೆಹಲಿಗೆ ತೆರಳಿ ಹೈಕಮಾಂಡ್​ಗೆ ದೂರು ನೀಡಲು ಮುಂದಾಗಿದೆ. ಅದಕ್ಕೂ ಮೊದಲು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಿ ಯತ್ನಾಳ್ ತಂಡದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳವಂತೆ ಹೈಕಮಾಂಡ್​ಗೆ ಸಂದೇಶ ರವಾನಿಸಲು ತೀರ್ಮಾನಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:13 pm, Sun, 1 December 24

Loading...
Unable to load recommendations.
Follow Us