ಹರಿಯಾಣಾ ವಿಧಾನಸಭೆ ಫಲಿತಾಂಶ- ಮುಡಾ ಹಗರಣಕ್ಕೆ ತಿರುವು, ಸಿದ್ದುಗೆ ಸಂಕಷ್ಟ

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2024 | 6:13 PM

ವಿರೋಧಿ ನಾಯಕನಿಗೆ ಹಿನ್ನಡೆ ಆದಾಗಲೇ ಪೆಟ್ಟು ಕೊಡುವ ಪಟ್ಟು ರಾಜಕೀಯದಲ್ಲಿ ಹೊಸದೇನಲ್ಲ. ಹರಿಯಾಣದಲ್ಲಿ ಮತ್ತೆ ಮುಗ್ಗರಿಸಿದ ಕಾಂಗ್ರೆಸ್ ಗೆ ಮತ್ತು ರಾಹುಲ್ ಗಾಂಧಿಗೆ ಮುಖಭಂಗ ಮಾಡಲು, ಮುಡಾ ಹಗರಣದ ಆರೋಪಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆಡೆ ಮುರಿ ಕಟ್ಟಲು ಇ ಡಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ಹರಿಯಾಣಾ ವಿಧಾನಸಭೆ ಫಲಿತಾಂಶ- ಮುಡಾ ಹಗರಣಕ್ಕೆ ತಿರುವು, ಸಿದ್ದುಗೆ ಸಂಕಷ್ಟ
ಸಿದ್ದರಾಮಯ್ಯ
Follow us on

ಭಾಸ್ಕರ ಹೆಗಡೆ

ಇಂದು ಮಂಗಳವಾರ. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮತ್ತು ಫಲಿತಾಂಶ ಇದೆ ಎನ್ನುವ ಕಾರಣಕ್ಕೋ ಏನೋ, ‘ಮುಡಾ’ ಹಗರಣದ ಬಗ್ಗೆ ಹೇಳಿಕೆ, ಮೀಟಿಂಗ್ ನಡೆಯಲಿಲ್ಲ. ಆದರೆ, ಸುಮಾರು ಎರಡುವರೆ ಸಾವಿರ ಕಿಮಿ ದೂರದಲ್ಲಿನ ಹರಿಯಾಣ ವಿಧಾನ ಸಭೆಯ ಫಲಿತಾಂಶ, ಕರ್ನಾಟಕದಲ್ಲಿನ ಮುಡಾ ಹಗರಣಕ್ಕೆ ಹೊಸ ತಿರುವು ನೀಡಿದರೆ ಆಶ್ಚರ್ಯ ಇಲ್ಲ.

ಒಂದು ಕ್ಷಣ ನಿಮಗೆ ಅನ್ನಿಸಬಹುದು-ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ಕರ್ನಾಟಕದ ಮುಡಾ ಹಗರಣಕ್ಕೂ ಏನು ಸಂಬಂಧ? ಅಥವಾ ಅದೇ ತರ್ಕದಲ್ಲಿ ವಿಚಾರ ಮಾಡಿದರೆ, ಜಮ್ಮು ಕಾಶ್ಮೀರ ಚುನಾವಣಾ ಫಲಿತಾಂಶ ಕೂಡ ಕರ್ನಾಟಕದ ಮೇಲೆ ಫರಿಣಾಮ ಬೀರಬಹುದಲ್ಲ? ಸಂವಿಧಾನದ 370 ನೇ ವಿಧಿ ನಿಷೇಧಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹ, ಭೂಮಿ ಮತ್ತು ಇನ್ನಿತರೆ ಕೆಲವು ಇಲಾಖೆಗಳ ಅಧಿಕಾರವನ್ನು ಕೇಂದ್ರ ತನ್ನ ಕೈಯಲ್ಲಿ ಅಂದರೆ, ಅಲ್ಲಿ ಇರುವ ಇರುವ ಲೆಫ್ಟಿನೆಂಟ್ ಜನರಲ್ ಅವರ ಕೈಗೆ ನೀಡಿದೆ. ಹಾಗಾಗಿ ಅಲ್ಲಿಯ ಫಲಿತಾಂಶವನ್ನು ಕರ್ನಾಟಕಕ್ಕೆ ತಳಕು ಹಾಕಲು ಸಾಧ್ಯವಿಲ್ಲ.

ಹರಿಯಾಣ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಡಾ ಹಗರಣವನ್ನು ಎತ್ತಿ ಕಾಂಗ್ರೆಸ್ ಗೆ ಮುಜುಗರ ಮಾಡಲು ಪ್ರಯತ್ನಿಸಿದ್ದರು. ಎರಡನೇಯದಾಗಿ, ಈಗಾಗಲೇ ಈ ಕೇಸಿಗೆ ಸಂಬಂಧಿಸಿದಂತೆ, ಎಫ್ ಐ ಆರ್ ಮಾಡಿರುವ ಇ ಡಿ, ಚುನಾವಣೆ ನಡೆಯುತ್ತಿದೆ ಎನ್ನುವ ಒಂದೇ ಕಾರಣಕ್ಕೆ ಸುಮ್ಮನಿತ್ತು. ಈಗ, ಹರಿಯಾಣದಲ್ಲಿ ಮೂರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಲಕ್ಷಣ ನಿಚ್ಚಳವಾಗಿರುವುದರಿಂದ ಮುಡಾ ಹಗರಣಕ್ಕೆ ಹೊಸ ತಿರುವು ಸಾಧ್ಯತೆ ಇದೆ. ಇಡಿ ತನ್ನ ತನಿಖೆಯ ಭಾಗವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮನೆ ಬಾಗಿಲಿಗೆ ಬರುವುದಷ್ಟೇ ಅಲ್ಲ, ಅವರನ್ನು money laundering ಆರೋಪದಲ್ಲಿ ಬಂಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಹರಿಯಾಣದ ಫಲಿತಾಂಶ ಕರ್ನಾಟಕದ ಮೇಲೆ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ. ಅದರಲ್ಲಿಯೂ, ಮೈಸೂರು ಭಾಗದ ಕ್ಷೇತ್ರಕ್ಕೆ 300 ಕೋಟಿಗೂ ಹೆಚ್ಚಿನ ಹಣ ಹರಿದು ಅಲ್ಲಿ ಏನು ನಡೆದಿದೆ ಎನ್ನುವ ವಿಚಾರಕ್ಕೆ ಚರ್ಚೆ ಆರಂಭ ಆಗಿರುವ ಹಿನ್ನೆಲೆಯಲ್ಲಿ, money laundering ಕೇಸು ಮುನ್ನಲೆಗೆ ಬರುವ ಎಲ್ಲ ಸಾಧ್ಯತೆ ಇದೆ.

ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಲೇಬೇಕು: ಜವಾನ್ ಅಂದರೆ ಸೈನಿಕ, ಪೆಹಲ್ವಾನ್ ಅಂದರೆ ಕುಸ್ತಿಪಟು ಮತ್ತು ಕಿಸಾನ್ ಅಂದರೆ ರೈತ –ಈ ಮೂರು ವರ್ಗದ ವಿಚಾರಗಳನ್ನಿಕೊಂಡು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ತಂತ್ರ ಫಲ ಕೊಟ್ಟಂತೆ ಕಾಣುತ್ತಿಲ್ಲ. ಹರಿಯಾಣದಲ್ಲಿ ಗೆದ್ದಿದ್ದರೆ, ರೈತರನ್ನು ಮತ್ತು ಸಮಾಜದ ಇನ್ನಿತರೆ ವರ್ಗದ ಜನರನ್ನು ಎತ್ತಿ ಕಟ್ಟುವ ರಾಜಕೀಯ ತಂತ್ರವನ್ನು ಮುಂದಿನ ದಿನಗಳಲ್ಲಿ ಕಾಣಬಹುದಿತ್ತು. ಆದರೆ ಈಗ ಹರಿಯಾಣ ಕೈ ತಪ್ಪಿದ್ದರಿಂದ, ಗಾಂಧಿ ಮುಂದಿನ ದಿನಗಳಲ್ಲಿ ಬೇರೆ ತಂತ್ರವನ್ನೇ ಉಪಯೋಗಿಸಬೇಕಾದೀತು. ಅಷ್ಟೇ ಅಲ್ಲ, ಹರಿಯಾಣ ಫಲಿತಾಂಶದ ನಂತರ ರಾಹುಲ್ ಗಾಂಧಿಗೆ ಹತ್ತಿರವಾಗಿರುವ ಸಿದ್ದರಾಮಯ್ಯ ಅವರಿಗೆ ಪೆಟ್ಟು ಕೊಟ್ಟರೆ, ಇಂಡಿ ಕೂಟದ ನಾಯಕರು ಈಗ ಕಾಂಗ್ರೆಸ್ ನೆರವಿಗೆ ಬರುವ ಸಾಧ್ಯತೆ ಕಡಿಮೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿಗೆ ಮುಖ ಭಂಗ ಆಗುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ, ಮುಡಾ ಹಗರಣದ ಮುಂದಿನ ಅಂಕ ಕನ್ನಡಿಗರ ಎದುರು ಈ ವಾರವೋ ಅಥವಾ ವಿಜಯ ದಶಮಿ ಮುಗಿದ ನಂತರ ತೆರೆದುಕೊಂಡರೆ ಆಶ್ಚರ್ಯ ಇಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ