ಯಾದಗಿರಿ PSI ಪರಶುರಾಮ ಸಾವು: ಸಿಐಡಿ ತನಿಖೆ ಹೇಗೆ ನಡೆದಿದೆ? ಇಲ್ಲಿದೆ ಸಂಪೂರ್ಣ ವಿವರ

ಯಾದಗಿರಿ ಪಿಎಸ್ಐ ಪರಶುರಾಮ ಸಾವನ್ನಪ್ಪಿ ಆರು ದಿನ ಕಳೆದಿದೆ. ಸಾವಿನ ತನಿಖೆ ಹೊತ್ತ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಕೇಸ್ ಫೈಲ್ ಪಡೆಯದೆ ಇದ್ದರೂ ಸಹ ತನಿಖೆ ಶುರು ಮಾಡಿದ್ದಾರೆ. ಇವತ್ತು ಪಿಎಸ್ಐ ಮರಣೋತ್ತರ ಪರೀಕ್ಷೆ ವರದಿಯನ್ನ ಅಧಿಕಾರಿಗಳು ಕೋರ್ಟ್​ಗೆ ಸಲ್ಲಿಸಿದ್ದಾರೆ.

ಯಾದಗಿರಿ PSI ಪರಶುರಾಮ ಸಾವು: ಸಿಐಡಿ ತನಿಖೆ ಹೇಗೆ ನಡೆದಿದೆ? ಇಲ್ಲಿದೆ ಸಂಪೂರ್ಣ ವಿವರ
ಯಾದಗಿರಿ PSI ಪರಶುರಾಮ ಸಾವು: ಸಿಐಡಿ ತನಿಖೆ ಹೇಗೆ ನಡೆದಿದೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 07, 2024 | 7:20 PM

ಯಾದಗಿರಿ, ಆ.07: ಯಾದಗಿರಿ ನಗರ ಠಾಣೆಯಿಂದ ಸೈಬರ್ ಠಾಣೆಗೆ ವರ್ಗಾವಣೆ ಆಗಿದ್ದ ಪಿಎಸ್ಐ ಪರಶುರಾಮ (PSI Parasurama) ಕಳೆದ ಆರು ದಿನಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಕುರಿತು ಯಾದಗಿರಿ‌ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದ ಬಳಿಕ ಸರ್ಕಾರ ಈ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಿದೆ. ಸದ್ಯ ಯಾದಗಿರಿ ನಗರಕ್ಕೆ ಎಂಟ್ರಿ ಕೊಟ್ಟ ಸಿಐಡಿ ತಂಡ ತನಿಖೆ ಶುರು ಮಾಡಿದೆ. ಕಳೆದ ಮೂರು ದಿನಗಳ ಹಿಂದೆ ಯಾದಗಿರಿ ಆಗಮಿಸಿದ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ.

ಯಾದಗಿರಿ ಡಿವೈಎಸ್ಪಿ ಕಚೇರಿಯಲ್ಲಿ ಅನೇಕ ಮಾಹಿತಿ ಕಲೆ‌ ಹಾಕಿರುವ ತಂಡ, ಇವತ್ತು ಪರಶುರಾಮ ಮರಣೋತ್ತರ ಪರೀಕ್ಷೆಯ ವರದಿಯನ್ನ ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸಿದೆ. ಶವ ಪರೀಕ್ಷೆ ನಡೆಸಿದ ಬಳಿ ಕೋರ್ಟ್​ಗೆ ಶವ ಪರೀಕ್ಷೆ ವರದಿಯನ್ನ ಸಲ್ಲಿಸಬೇಕು. ಆದರೂ ಆರು ದಿನಗಳ ಬಳಿಕ ಶವ ಪರೀಕ್ಷೆ ವರದಿಯನ್ನ ಸಿಐಡಿ ಅಧಿಕಾರಿಗಳು ಕೋರ್ಟ್​ಗೆ ಸಲ್ಲಿಸಿ ಸ್ವೀಕೃತ ಪತ್ರವನ್ನ ಪಡೆದಿದ್ದಾರೆ. ಇನ್ನು ಇವತ್ತು ಕಾರಟಗಿಯ ಸೋಮನಾಳ್ ಗ್ರಾಮಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ ನೀಡಿ ಪರಶುರಾಮ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದೆ ಕಾರಣಕ್ಕೆ ಸಿಐಡಿ ಅಧಿಕಾರಿಗಳು ಪರಶುರಾಮ ಕುಟುಂಬಸ್ಥರಿಗೆ ಯಾದಗಿರಿಗೆ ಕರೆಸಿಕೊಂಡಿಲ್ಲ. ಹೀಗಾಗಿ ನಾಳೆ ಅಥವಾ ನಾಡಿದ್ದು ಪರಶುರಾಮ ಪತ್ನಿ ಸೇರಿದಂತೆ ಕುಟುಂಬಸ್ಥರಿಗೆ ಕರೆಸುವ ಸಾಧ್ಯತೆಯಿದೆ.

ಇದನ್ನೂ ಓದಿ:ಯಾದಗಿರಿ ಪಿಎಸ್ಐ ಪರಶುರಾಮ ಕುಟುಂಬಕ್ಕೆ 50 ಲಕ್ಷ ರೂ.: ಪರಮೇಶ್ವರ್​ ಘೋಷಣೆ

ಪರಶುರಾಮ ಮೊಬೈಲ್​ನಲ್ಲಿದೆ ಸಾಕಷ್ಟು ಆಡಿಯೋಗಳು

ಇನ್ನು ಪರಶುರಾಮ ಮೊಬೈಲ್ ಪಡೆದ ಬಳಿಕ ಪರಶುರಾಮ ಸಾವನ್ನಪ್ಪಿರುವ ಪೊಲೀಸ್ ಕ್ವಾರ್ಟರ್ಸ್​ಗೆ ಹೋಗಿ ಸ್ಥಳ ಮಹಜರು ಮಾಡುವವರಿದ್ದಾರೆ. ಸ್ಥಳ ಮಹಜರು ಕುಟುಂಬಸ್ಥರ ಮುಂದೆ ಮಾಡಬೇಕಿದೆ. ‌ಜೊತೆಗೆ ಪರಶುರಾಮ ಸಾವನ್ನಪ್ಪಿದ್ದಾಗ ತಂದೆ ಜೊತೆಗೆ ಇದ್ದರೂ, ಹೀಗಾಗಿ ಪರಶುರಾಮ ತಂದೆಯ ಹೇಳಿಕೆ ಪಡೆಯಲಿದ್ದು, ಇದರ ಜೊತೆಗೆ ಪರಶುರಾಮ ಮೊಬೈಲ್​ನಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಬಗ್ಗೆ ಆಡಿಯೋ ಜೊತೆಗೆ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಾಕಷ್ಟು ಜನರ ಮುಂದೆ ಪರಶುರಾಮ ಪ್ರಸ್ತಾಪ ಮಾಡಿರುವ ಆಡಿಯೋಗಳು ಸಹ ಇವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಡಿಯೋನಲ್ಲೂ ಯಾರ ಜೊತೆ ಮಾತಾಡಿದ್ದಾರೆ ಅವರೆಲ್ಲರಿಗೂ ವಿಚಾರಣೆಗೆ ಕರೆಯೋ ಸಾಧ್ಯತೆಯಿದೆ.

ಪರಶುರಾಮ ಸಾವು ಖಂಡಿಸಿ ಪ್ರತಿಭಟನೆ

ಇದು ಒಂದು ಕಡೆಯಾದ್ರೆ ಇನ್ನೊಂದು ಕಡೆ ಪರಶುರಾಮ ಸಾವು ಖಂಡಿಸಿ ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಕರ್ನಾಟಕ ರಾಜ್ಯ ಎಸ್ಸಿ , ಎಸ್ಟಿ ಸರ್ಕಾರಿ ನೌಕರರ ಯಾದಗಿರಿ ಘಟಕದಿಂದ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರ ಪರಶುರಾಮ ಕುಟುಂಬಸ್ಥರಿಗೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದರ ಜೊತೆಗೆ ತನಿಖೆಯನ್ನ ಪಾರದರ್ಶಕತೆಯಿಂದ ನಡೆಸಬೇಕು, ಸದ್ಯ ಸಿಐಡಿ ತನಿಖೆ ನಡೆಸುತ್ತಿದೆ. ಆದ್ರೆ, ಇದರ ತನಿಖೆಯನ್ನ ಸಿಐಡಿಯಿಂದ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು. ಇದರ ಜೊತೆಗೆ ಪ್ರಕರಣದಲ್ಲಿ ಪರಶುರಾಮ ಪತ್ನಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪಣ್ಣಗೌಡ ಮೇಲೆ ಆರೋಪ ಮಾಡಿದ್ದರಿಂದ ಇಬ್ಬರಿಗೂ ಸಹ ಕರೆಸಿ ವಿಚಾರಣೆ ಮಾಡಬೇಕೆಂದು ಆಗ್ರಹಿಸಿದರು.

ಒಟ್ಟಿನಲ್ಲಿ ಯಾದಗಿರಿ ಪಿಎಸ್ಐ ಪರಶುರಾಮ ಸಾವಿನ ಸುತ್ತ ಅನುಮಾನಗಳ ಹುತ್ತ ಬೆಳೆದುಕೊಂಡಿದ್ದು, ತನಿಖೆ ನಡೆಯುತ್ತಿದೆ. ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖೆ ಯಾವ ದಿಕ್ಕಿಗೆ ಸಾಗುತ್ತದೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ