ಬೆಂಗಳೂರು: ಶಾಸಕ ಜಮೀರ್ ಅಹಮದ್ ಖಾನ್ ಅವರು ಬಿಬಿಎಂಪಿಯ 300 ಕೋಟಿ ಆಸ್ತಿ ಕಬಳಿಸಲು ಪ್ಲಾನ್ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಕಾಟನ್ಪೇಟೆ ಮುಖ್ಯ ರಸ್ತೆಯಲ್ಲಿ ಸೂಪರ್ ಟಾಕೀಸ್ ಪಕ್ಕದಲ್ಲಿರೋ ಅಮೂಲ್ಯ ಎರಡೂ ಮುಕ್ಕಾಲು ಎಕರೆ ಜಾಗ ಇದೆ . ಈ ಜಾಗವನ್ನು ನ್ಯಾಯಾಲಯವು 6 ವರ್ಷಗಳ ಹಿಂದೆಯೇ ಪಾಲಿಕೆ ವಶಕ್ಕೆ ಪಡೆಯುವಂತೆ ತೀರ್ಪು ನೀಡಿದೆ. ಜೊತೆಗೆ ಈ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಬೇಕೆಂದು ಉಚ್ಛ ನ್ಯಾಯಾಲಯವು ಆದೇಶ ಹೊರಡಿಸಿತ್ತು.
ಒಟ್ಟು 1,19,894 ಚದರ ಅಡಿ ವಿಸ್ತೀರ್ಣದ ಈ ಜಾಗದಲ್ಲಿ ಈಶಾನ್ಯ ಭಾಗದಲ್ಲಿದ್ದ ಸುಮಾರು 18,900 ಚದರ ಅಡಿ ಜಾಗವನ್ನ ಲಡಾಕ್ ಶಾ ವಾಲಿ ಮಸೀದಿ ಗೆ ಒಪ್ಪಿಸುವಂತೆ ಆದೇಶ ನೀಡಲಾಗಿದೆ. ನ್ಯಾಯಾಲಯದ ಆದೇಶದಂತೆ ಮತ್ತು ಸರ್ಕಾರಿ ಆದೇಶದಂತೆ ಸದರಿ ಸ್ವತ್ತಿಗೆ ತಂತಿ ಬೇಲಿ ಹಾಕಲು ತೀರ್ಮಾನ ತೆಗೆದುಕೊಂಡ ಪಾಲಿಕೆಯು ಈ ಸಂಬಂಧ ಟೆಂಡರ್ ಆಹ್ವಾನಿಸಿತ್ತು.
C. S. ಜಗದೀಶ್ ಎಂಬ ಗುತ್ತಿಗೆದಾರನಿಗೆ 49 ಲಕ್ಷ ರೂಪಾಯಿಗಳ ವೆಚ್ಛದಲ್ಲಿ ಈ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಲು ದಿನಾಂಕ 19/05/2015 ರಂದು “ಕಾರ್ಯಾದೇಶ ಪತ್ರ”ವನ್ನು ನೀಡಿದೆ. ಆದರೆ, ಕಳೆದ ಐದಾರು ವರ್ಷಗಳಿಂದಲೂ ಪಾಲಿಕೆಯ ಈ ಸ್ವತ್ತಿಗೆ ಕಾಂಪೌಂಡ್ ಅನ್ನು ನಿರ್ಮಾಣ ಮಾಡಿಯೇ ಇಲ್ಲ. ಉಚ್ಛ ನ್ಯಾಯಾಲಯದ ಆದೇಶಕ್ಕೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿಲ್ಲ. ಪೀರ್ ಗ್ರೌಂಡ್ ಅಂತಲೇ ಈ ಜಾಗವನ್ನು ಕರೆಯುತ್ತಾರೆ.
ಪಾಲಿಕೆಯ ಚಾಮರಾಜಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ತನ್ವೀರ್ ಅಹಮದ್ ಆಗಿದ್ದು, ಶಾಸಕ ಜಮೀರ್ ಆಪ್ತವಲಯದಲ್ಲಿದ್ದಾರೆ ಎನ್ನಲಾದ ತನ್ವೀರ್ ಅಹಮದ್ ಕಳೆದ ಐದಾರು ವರ್ಷಗಳಿಂದಲೂ ಚಾಮರಾಜಪೇಟೆ ವಿಭಾಗದಲ್ಲಿಯೇ ಮುಂದುವರೆದಿದ್ದಾರೆ. ಹೀಗಾಗಿ ಪಾಲಿಕೆ ಸ್ವತ್ತನ್ನ ವಶಕ್ಕೆ ಪಡೆಯಬೇಕು ಎಂದು ಎಸಿಬಿ ಹಾಗೂ ಬಿಎಂಟಿಎಫ್ಗೆ ಎನ್.ಆರ್. ರಮೇಶ್ ದೂರು ನೀಡಿದ್ದಾರೆ. ಎನ್.ಆರ್ ರಮೇಶ್ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷರಾಗಿದ್ದಾರೆ.