ಕೊವಿಡ್ ಭಯ: ಪಾಲಿಕೆ ಪಶ್ಚಿಮ ವಲಯದಲ್ಲಿ ಅರ್ಧದಷ್ಟು ನೌಕರರು ಕೆಲಸಕ್ಕೆ ಗೈರು

ಕೊವಿಡ್ ಸೋಂಕಿನಿಂದ ಹೆದರಿ ಕರ್ತವ್ಯಕ್ಕೆ ಗೈರು ಹಾಜರಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯದ 3,000 ಕ್ಕೂ ಹೆಚ್ಚಿನ ಸಿಬ್ಬಂದಿ ವರ್ಗಕ್ಕೆ ವಲಯದ ಕೊವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ನೋಟಿಸ್ ನೀಡಿ, ಕರ್ತವ್ಯದಿಂದ ವಿಮುಖರಾಗಿರುವುದಕ್ಕೆ ಕಾರಣ ಕೇಳಿದ್ದಾರೆ. ಪಶ್ಚಿಮ ವಲಯವು ಸುಮಾರು 6,500 ರಷ್ಟು ಸಿಬ್ಬಂದಿ ವರ್ಗ ಹೊಂದಿದ್ದು, ಮೂಲಗಳ ಪ್ರಕಾರ ಕೇವಲ 3,500 ರಷ್ಟು ನೌಕರರು ಮಾತ್ರ ನಿಯಮಿತವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ನೋಟಿಸ್ ಪಡೆದವರ ಪೈಕಿ 700 ನೌಕರರು ಉತ್ತರಗಳನ್ನು ನೀಡಿದ್ದಾರಂತೆ. […]

ಕೊವಿಡ್ ಭಯ: ಪಾಲಿಕೆ ಪಶ್ಚಿಮ ವಲಯದಲ್ಲಿ ಅರ್ಧದಷ್ಟು ನೌಕರರು ಕೆಲಸಕ್ಕೆ ಗೈರು

Updated on: Aug 07, 2020 | 8:22 PM

ಕೊವಿಡ್ ಸೋಂಕಿನಿಂದ ಹೆದರಿ ಕರ್ತವ್ಯಕ್ಕೆ ಗೈರು ಹಾಜರಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯದ 3,000 ಕ್ಕೂ ಹೆಚ್ಚಿನ ಸಿಬ್ಬಂದಿ ವರ್ಗಕ್ಕೆ ವಲಯದ ಕೊವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ನೋಟಿಸ್ ನೀಡಿ, ಕರ್ತವ್ಯದಿಂದ ವಿಮುಖರಾಗಿರುವುದಕ್ಕೆ ಕಾರಣ ಕೇಳಿದ್ದಾರೆ.

ಪಶ್ಚಿಮ ವಲಯವು ಸುಮಾರು 6,500 ರಷ್ಟು ಸಿಬ್ಬಂದಿ ವರ್ಗ ಹೊಂದಿದ್ದು, ಮೂಲಗಳ ಪ್ರಕಾರ ಕೇವಲ 3,500 ರಷ್ಟು ನೌಕರರು ಮಾತ್ರ ನಿಯಮಿತವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ನೋಟಿಸ್ ಪಡೆದವರ ಪೈಕಿ 700 ನೌಕರರು ಉತ್ತರಗಳನ್ನು ನೀಡಿದ್ದಾರಂತೆ.

ಕೆಲಸಕ್ಕೆ ಗೈರು ಹಾಜರಾದವರಲ್ಲಿ ಕೇಂದ್ರ ಸರಕಾರದ ನೌಕರರು ಸಹ ಸೇರಿದ್ದು ಅವರಿಗೂ ನೋಟಿಸ್ ನೀಡಲಾಗಿದೆ. ಈ ವಲಯದ ಉಸ್ತುವಾರಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ, ಸೋಂಕು ಶಂಕಿತರ ಗಂಟಲು ದ್ರವದ ಮಾದರಿ ಸಂಗ್ರಹ ಪ್ರಮಾಣ ಹೆಚ್ಚಿಸಲು ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸಿಬ್ಬಂದಿಯನ್ನು ಒದಗಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್ ಅವರಿಗೆ ಸೂಚನೆ ನೀಡಿದ್ದಾರೆ.

ಈ ವಲಯದಲ್ಲಿ ಲ್ಯಾಬ್ ಟೆಕ್ನಿಶಿಯನ್​ಗಳ ಸಹ ಕೊರತೆ ಎದುರಾಗಿದ್ದು ಪರ್ಯಾಯ ವ್ಯವಸ್ಥೆ ಮಾಡುವಂತೆ ಉಪ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿರುವ ಪ್ರಕಾರ ಬೆಡ್​ಗಳನ್ನು ನೀಡುತ್ತಿಲ್ಲವೆಂಬ ದೂರುಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿಷಯವನ್ನು ಪರಿಶೀಲಿಸುವಂತೆ ಅಶ್ವಥ್ ನಾರಾಯಣ, ಉಸ್ತುವಾರಿ ಅಧಿಕಾರಿ ಘೋಷ್​ಗೆ ಸೂಚಿಸಿದ್ದಾರೆ.