Chanakya Niti: ಎಲ್ಲರೂ ನಿಮ್ಮನ್ನು ಇಷ್ಟ ಪಡಲು ನಿಮ್ಮಲ್ಲಿ ಈ ಗುಣಗಳಿರಲಿ ಎನ್ನುತ್ತಾರೆ ಚಾಣಕ್ಯ
ನಮ್ಮ ಸುತ್ತ ಮುತ್ತಲಿನಲ್ಲಿ ಕೆಲವು ವ್ಯಕ್ತಿಗಳನ್ನು ನೋಡಿದ ಕೂಡಲೇ ಆ ವ್ಯಕ್ತಿಗಳೂ ನಮ್ಮ ಮೇಲೆ ಏನೋ ಮೋಡಿ ಮಾಡಿ ಬಿಡುತ್ತಾರೆ. ತಮ್ಮ ನಡೆ ನುಡಿಗಳಿಂದಲೇ ಇಷ್ಟವಾಗುತ್ತಾರೆ. ಆದರೆ ಹಾಗಂತ ಎಲ್ಲರಿಗೂ ಎಲ್ಲರೂ ಇಷ್ಟ ಪಡುವ ವ್ಯಕ್ತಿಯಾಗಲು ಸಾಧ್ಯವಿಲ್ಲ, ಅದೊಂದು ಕಲೆ..ಆದರೆ ಆಚಾರ್ಯ ಚಾಣಕ್ಯನು ಎಲ್ಲರನ್ನು ತಮ್ಮತ್ತ ಸೆಳೆಯಲು ಕೆಲವು ಗುಣಗಳೂ ಹಾಗೂ ನಮ್ಮ ನಡವಳಿಕೆಗಳು ಹೇಗಿರಬೇಕು? ಎಂದು ತಿಳಿಸಿದ್ದಾರೆ. ಈ ಕೆಲವು ಸೂಕ್ಷ್ಮ ವಿಚಾರಗಳನ್ನು ಪರಿಗಣಿಸಿದ್ರೆ ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಲು ಸಾಧ್ಯ, ಹಾಗಾದ್ರೆ ಆ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಈಗಿನ ಕಾಲದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಕೆಲವರಿಗೆ ನಮ್ಮ ಗುಣ ಇಷ್ಟವಾದರೆ ಇನ್ನು ಕೆಲವರು ನಮ್ಮನ್ನು ನೋಡಿದ ಕೂಡಲೇ ಮುಖ ತಿರುಗಿಸಿಕೊಂಡು ಹೋಗಬಹುದು. ಆದರೆ ನಮ್ಮನ್ನು ಎಲ್ಲರೂ ಇಷ್ಟಪಡಬೇಕು, ನಮ್ಮ ಸುತ್ತಲೂ ಅನೇಕರು ನಿಂತುಕೊಂಡು ಅವರು ನಮ್ಮನ್ನು ಮಾತಾಡಿಸಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಹೀಗಾಗಿ ನಾವು ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಿಗೆ ನಿಜವಾಗಿಯೂ ಇಷ್ಟವಾಗುವಂತೆ ಮಾಡಿಕೊಳ್ಳುವುದು ಒಂದು ಕಲೆ. ಆದರೆ ಚಾಣಕ್ಯ (Chanakya) ನು ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿಸಿದ್ದು ಈ ಕೆಲವು ಗುಣಗಳಿದ್ದವರು ಮಾತ್ರ ಎಲ್ಲರನ್ನು ತನ್ನತ್ತ ಸೆಳೆಯುತ್ತಾರೆ. ಎಲ್ಲರೂ ಇಂತಹ ವ್ಯಕ್ತಿಗಳನ್ನು ಇಷ್ಟ ಪಡಲು ಎನ್ನುವುದನ್ನು ತಿಳಿಸಿದ್ದಾರೆ.
- ಉತ್ತಮ ಸಂವಹನವಿರಲಿ : ಹಿತವಾದ ಹಾಗೂ ಮೃದುವಾದ ಮಾತುಗಳನ್ನು ಕೇಳಲು ಯಾರು ಇಷ್ಟಪಡಲ್ಲ ಹೇಳಿ, ಒಳ್ಳೆಯ ಸಂವಹನ ನಡೆಸುವವನನ್ನು ಎಲ್ಲರೂ ಇಷ್ಟಪಡಲು ಸಾಧ್ಯ. ಆಚಾರ್ಯ ಚಾಣಕ್ಯರು ಪರಿಣಾಮಕಾರಿ ಸಂವಹನವು ಎಲ್ಲರ ನೆಚ್ಚಿನವರಾಗಲು ಅವಶ್ಯಕ ಎಂದಿದ್ದಾರೆ. ಹೀಗಾಗಿ ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಪರಿಣಾಮಕಾರಿಯಾಗಿ ತಿಳಿಸಲು ಸಂವಹನ ಮುಖ್ಯ. ಸ್ಪಷ್ಟ ನುಡಿಗಳು ತಪ್ಪು ತಿಳುವಳಿಕೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ.
- ಮುಂದಾಳತ್ವ ವಹಿಸಿ : ಆಚಾರ್ಯ ಚಾಣಕ್ಯರು ಹೇಳುವಂತೆ ಎಲ್ಲರಿಗೂ ಮಾದರಿಯಾಗಿ ಮುನ್ನಡೆಯುವುದು ಮುಖ್ಯ. ನಿಯಮಗಳು ಹಾಗೂ ನಿಬಂಧನೆಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಹೀಗೆ ಮಾಡಿದ್ರೆ ನೀವು ಎಲ್ಲರ ಗೌರವ ವಿಶ್ವಾಸವನ್ನು ಗಳಿಸಬಹುದು. ಹೀಗಾಗಿ ಸ್ವತಃ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಿ. ಹೀಗೆ ಮಾಡಿದ್ರೆ ಎಲ್ಲರಿಗೂ ಆಪ್ತರಾಗುತ್ತೀರಿ ಎನ್ನುವ ಸಲಹೆ ನೀಡುತ್ತಾರೆ ಚಾಣಕ್ಯ.
- ಯಾವಾಗಲೂ ಪ್ರಾಮಾಣಿಕವಾಗಿರಿ: ಈಗಿನ ಕಾಲದಲ್ಲಿ ಪ್ರಾಮಾಣಿಕರಾಗಿರುವ ವ್ಯಕ್ತಿಗಳನ್ನು ಕಾಣುವುದು ಕಷ್ಟ. ನೂರರಲ್ಲಿ ಒಬ್ಬರೋ ಇಬ್ಬರೋ ಪ್ರಾಮಾಣಿಕ ವ್ಯಕ್ತಿಗಳಿರುತ್ತಾರೆ. ಯಾವುದೇ ಸಂಬಂಧದ ಅಡಿಪಾಯವೇ ಈ ಪ್ರಾಮಾಣಿಕತೆ. ಹೀಗಾಗಿ ಯಾವಾಗಲೂ ಪ್ರಾಮಾಣಿಕರಾಗಿದ್ದು, ಪಾರದರ್ಶಕವಾಗಿ ವರ್ತಿಸಬೇಕು. ಇದು ಸಂಬಂಧದಲ್ಲಿ ವಿಶ್ವಾಸವು ಬೆಳೆಸಲು ಸಹಾಯ ಮಾಡುತ್ತದೆ.
- ವಿನಮ್ರರಾಗಿರಿ : ಪ್ರತಿಯೊಬ್ಬರಲ್ಲಿ ಇರಬೇಕಾದ ಮೊದಲ ಗುಣವೇ ವಿನಮ್ರತೆ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ವಿನಮ್ರ ಜನರು ಎಲ್ಲರೊಂದಿಗೆ ಬೇಗನೆ ಹೊಂದಿಕೊಳ್ಳುತ್ತಾರೆ. ಈ ಗುಣವಿರುವ ಜನರು ಇತರರು ಹೇಳುವ ಮಾತುಗಳನ್ನು ಗಮನವಿಟ್ಟು ಆಲಿಸುತ್ತಾರೆ. ಹಾಗೂ ತನ್ನ ಸುತ್ತಮುತ್ತಲಿನ ವ್ಯಕ್ತಿಗಳ ಅಭಿಪ್ರಾಯಗಳಿಗೆ ಆದ್ಯತೆ ನೀಡುತ್ತಾರೆ. ಈ ವ್ಯಕ್ತಿಗಳನ್ನು ಸಹಜವಾಗಿ ಎಲ್ಲರೂ ಇಷ್ಟ ಪಡುತ್ತಾರೆ.
- ಸಹಾನುಭೂತಿ ತೋರಿ : ಎಲ್ಲರೂ ಇಷ್ಟ ಪಡುವಂತಾಗಲು ಸುತ್ತಮುತ್ತಲಿನ ವ್ಯಕ್ತಿಗಳಿಗೆ ಕರುಣೆ ತೋರಿಸಬೇಕು ಎಂದು ಹೇಳುತ್ತಾರೆ ಚಾಣಕ್ಯ. ಹೌದು ತನ್ನವರ ಸಮಸ್ಯೆಗಳು ಮತ್ತು ಕಳವಳಗಳನ್ನು ಅರ್ಥಮಾಡಿಕೊಳ್ಳ ಬಲ್ಲವರು ಮಾತ್ರ ಎಲ್ಲರೂ ಹತ್ತಿರವಾಗಲು ಸಾಧ್ಯ. ಸಹಾಯಹಸ್ತ ಹಾಗೂ ಬೆಂಬಲ ನೀಡುವ ಮೂಲಕ ಸಂಬಂಧವು ಗಟ್ಟಿಗೊಳ್ಳುತ್ತದೆ. ಇದರಿಂದಲೇ ತಮ್ಮ ಆತ್ಮೀಯ ವಲಯದಲ್ಲಿ ಎಲ್ಲರೂ ಇಷ್ಟ ಪಡುವ ವ್ಯಕ್ತಿಯಾಗಲು ಸಾಧ್ಯ ಎಂದಿದ್ದಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ