ರಾಗಿ ಅಂಬಲಿಯಿಂದ ಪಾನಕದವರೆಗೆ; ಬೇಸಿಗೆಯಲ್ಲಿ ನೀವು ಸವಿಯಲೇಬೇಕಾದ ಭಾರತೀಯ ಭಕ್ಷ್ಯ, ಪಾನೀಯಗಳಿವು
ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ ಕಾಣಿಸಿಕೊಳ್ಳುವುದು, ಬಾಡಿ ಹೀಟ್ ಕಾಣಿಸಿಕೊಳ್ಳುವುದು ಸಾಮಾನ್ಯ. ಹೆಚ್ಚಿನ ಜನರು ಈ ಬೇಸಿಗೆ ಬಂತೆಂದರೆ ಸಾಕು ಉರಿ ಬಿಸಿಲಿನ ಶಾಖದಿಂದ ರಕ್ಷಿಸಿಕೊಳ್ಳಲು ಎಳನೀರು, ನೀರು, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಪಾನೀಯಗಳನ್ನು ಸೇವನೆ ಮಾಡುತ್ತಾರೆ. ಅದೇ ರೀತಿ ಈ ಬೇಸಿಗೆಯಲ್ಲಿ ಬಿಸಿಲ ಬೇಗೆಯಿಂದ ದೇಹವನ್ನು ತಂಪಾಗಿರಿಸಲು ಈ ಒಂದಷ್ಟು ಭಾರತೀಯ ಸಾಂಪ್ರದಾಯಿಕ ಭಕ್ಷ್ಯ ಮತ್ತು ಪಾನೀಯಗಳನ್ನು ನೀವು ಸವಿಯಲೇಬೇಕಂತೆ. ಅದು ಏನೆಂಬುದನ್ನು ನೋಡೋಣ ಬನ್ನಿ.

ಈ ಬಾರಿಯಂತೂ ಬಿಸಿಲಿನ ಅಬ್ಬರ ಬಲು ಜೋರಾಗಿದ್ದು, ಸೆಖೆ, ಉರಿ ಬಿಸಿಲಿನ ಶಾಖದಿಂದ ಜನ ಹೈರಾಣಾಗಿ ಹೋಗಿದ್ದಾರೆ. ಜೊತೆಗೆ ಜನ ಈ ಬೇಸಿಗೆಯಲ್ಲಿನ (Summer) ಅತಿಯಾದ ಬೆವರಿನಿಂದಾಗಿ ಉಂಟಾಗುವ ನಿರ್ಜಲೀಕರಣ ಹಾಗೂ ಬಾಡಿ ಹೀಟ್ ಸಮಸ್ಯೆಯಿಂದಲೂ ಕೂಡಾ ಬಳಲುತ್ತಿದ್ದಾರೆ. ಈ ನಿರ್ಜಲೀಕರಣದ ಸಮಸ್ಯೆಯಿಂದ ಮುಕ್ತಿ ಪಡೆಯಲು, ದೇಹವನ್ನು ತಂಪಾಗಿರಿಸಲು ಹೆಚ್ಚಿನವರು ನೀರು, ಎಳನೀರು, ಕಬ್ಬಿನ ಜ್ಯೂಸ್ ಕುಡಿಯುವುದರ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಪಾನೀಯಗಳನ್ನು ಕೂಡಾ ಗಟಗಟನೇ ಕುಡಿಯುತ್ತಿದ್ದಾರೆ. ಹೀಗಿರುವಾಗ ಈ ಕೃತಕ ಪಾನೀಯಗಳನ್ನು ಕುಡಿದು ಆರೋಗ್ಯವನ್ನು ಹಾಳು ಮಾಡುವುದರ ಬದಲು ನೀರು ಎಳನೀರಿನ ಜೊತೆಗೆ ಭಾರತದ ಈ ಕೆಲವೊಂದು ಸಾಂಪ್ರದಾಯಿಕ (Traditional) ಭಕ್ಷ್ಯಗಳನ್ನು (dishes) ಸವಿಯುವ ಮೂಲಕ ದೇಹವನ್ನು ನೀವು ತಂಪಾಗಿಸಬಹುದು. ಮತ್ತು ಉರಿ ಬೇಸಿಗೆಯಿಂದ ದೇಹವನ್ನು ಕಾಪಾಡಿಕೊಳ್ಳಬಹುದು.
ಬೇಸಿಗೆಯಲ್ಲಿ ನೀವು ಸವಿಯಲೇಬೇಕಾದ ಭಾರತದ ಸಾಂಪ್ರದಾಯಿಕ ಭಕ್ಷ್ಯಗಳಿವು:
ಪಾನಕ: ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಫೇಮಸ್ ಪಾನೀಯವಾಗಿರುವ ಪಾನಕವನ್ನು ಬೇಸಿಗೆಯಲ್ಲಿ ನೀವು ಸೇವಿಸಲೇಬೇಕು. ಬೆಲ್ಲ, ಒಣಶುಂಠಿ, ಏಲಕ್ಕಿ ಮತ್ತು ನಿಂಬೆಹಣ್ಣಿನಂತಹ ಹಲವಾರು ವಸ್ತುಗಳನ್ನು ಸೇರಿಸಿ ತಯಾರಿಸುವ ಈ ಪಾನೀಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹೌದು ಸಿಹಿ ಮತ್ತು ಮಸಾಲೆಯುಕ್ತ ಮಿಶ್ರಣದ ಈ ಪಾನೀಯವು ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಸಹಕಾರಿ. ಅಷ್ಟೇ ಅಲ್ಲದೆ ದೇಹ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ.
ರಾಗಿ ಅಂಬಲಿ: ಕರ್ನಾಟಕದಲ್ಲಿ ಹಾಗೂ ತಮಿಳುನಾಡಿನ, ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ತುಂಬಾನೇ ಜನಪ್ರಿಯವಾಗಿರುವ ರಾಗಿ ಅಂಬಲಿ ಬೇಸಿಗೆಗೆ ಹೇಳಿ ಮಾಡಿಸಿದ ಪಾನೀಯವಾಗಿದೆ. ರಾಗಿಯು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಧಾನ್ಯವಾಗಿದ್ದು, ಇದರಿಂದ ತಯಾರಿಸಿದ ರಾಗಿ ಅಂಬಲಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ರಿಫ್ರೆಶ್ ಪಾನೀಯ ಅಂತಾನೇ ಕರೆಯುವ ರಾಗಿ ಅಂಬಲಿ ದೇಹಕ್ಕೆ ಜಲಸಂಚಯನವನ್ನು ಒದಗಿಸುವುದು ಮಾತ್ರವಲ್ಲದೆ ಬೇಸಿಗೆಯಲ್ಲಿ ನಿಮ್ಮ ಶಕ್ತಿ ಕುಂದದ ಹಾಗೆ ನೋಡಿಕೊಳ್ಳುತ್ತದೆ ಮತ್ತು ದೇಹವನ್ನು ತಂಪಾಗಿರಿಸುತ್ತದೆ.
ಆಮ್ರಾಸ್ ಅಥವಾ ಮಾವಿನ ರಸ: ಬೇಸಿಗೆಯಲ್ಲಿ ಆಮ್ರಾಸ್ ಸವಿಯುವುದು ಕೂಡಾ ತುಂಬಾನೇ ಒಳ್ಳೆಯದು. ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದ ಕೆಲವು ಭಾಗಗಳ ಫೇಮಸ್ ಡಿಶ್ ಆಗಿರುವ ಆಮ್ರಸ್ ಬೇಸಿಗೆಗೆ ಹೇಳಿ ಮಾಡಿಸಿದಂತಹ ಡಿಶ್ ಆಗಿದೆ. ಮಾಗಿದ ಆಲ್ಫೋನ್ಸೋ ಮಾವಿನ ಹಣ್ಣನ್ನು ಏಲಕ್ಕಿ ಮತ್ತು ಹಾಲಿನ ಸ್ಪರ್ಶದೊಂದಿಗೆ ಬೆರೆಸಿ ತಯಾರಿಸುವ ಈ ಆಮ್ರಸವನ್ನು ಪೂರಿಯೊಂದಿಗೆ ಬಡಿಸಲಾಗುತ್ತದೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಇದು ದೇಹಕ್ಕೆ ಸಾಕಷ್ಟು ಜಲ ಸಂಚಯನವನ್ನು ಒದಗಿಸುತ್ತದೆ, ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಆದ ಕಾರಣ ಬೇಸಿಗೆಯಲ್ಲಿ ಈ ಡಿಶ್ ಅನ್ನು ಕೂಡಾ ನೀವು ತಪ್ಪದೆ ಸವಿಯಲೇಬೇಕು.
ಇದನ್ನೂ ಓದಿ: ತುಳಸಿ – ಶುಂಠಿ ಚಹಾ, ತಣ್ಣನೆಯ ಮಜ್ಜಿಗೆ ಈ ಬೇಸಿಗೆಯಲ್ಲಿ ಬರುವ ತಲೆನೋವಿಗೆ ರಾಮಬಾಣ
ಪಖಲಾ ಭಟ: ಒಡಿಶಾ ಮತ್ತು ಛತ್ತೀಸ್ಗಢದ ಸಾಂಪ್ರದಾಯಿಕ ಖಾದ್ಯವಾಗಿರುವ ಪಖಲಾ ಭಟ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಇದು ಬೇಸಿಗೆಯಲ್ಲಿ ಸವಿಯಲು ಹೇಳಿ ಮಾಡಿಸಿದ ಭಕ್ಷ್ಯವಾಗಿದೆ. ಪ್ರೋಬಯಾಟಿಕ್ ಮತ್ತು ಅಗತ್ಯ ಪೋಷಕಾಂಶಗಳಿಂದ ತುಂಬಿರುವ ಈ ಮೊಸರಿನೊಂದಿಗೆ ಕಲಸಿದ ಗಂಜಿಯ ಖಾದ್ಯ ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸುವುದು ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಮತ್ತು ಇದು ದೇಹವನ್ನು ಒಳಗಿನಿಂದ ತಂಪಾಗಿರಿಸುವ ಕಾರಣದಿಂದ ಇದು ಬೇಸಿಗೆಗೆ ಹೇಳಿ ಮಾಡಿಸಿದ ಭಕ್ಷ್ಯವಾಗಿದೆ.
ಸಟ್ಟು ಪರಾಠ: ಕಡಲೆ ಹಿಟ್ಟಿನಿಂದ ತಯಾರಿಸುವ ಸಟ್ಟು ಪರಾಠ ಬಿಹಾರ, ಜಾರ್ಖಂಡ್ನಲ್ಲಿ ಫೇಮಸ್ ಖಾದ್ಯವಾಗಿದೆ. ಸಾಸಿವೆ ಎಣ್ಣೆ, ಬೆಳ್ಳುಳ್ಳಿ, ಹಸಿ ಮೆಣಸು ನಿಂಬೆ ರಸ ಬೆರೆಸಿದ ಸ್ಟಫಿಂಗ್ನೊಂದಿಗೆ ತಯಾರಿಸಿದ ಈ ಸಟ್ಟು ಪರಾಠ ಪ್ರೊಟೀನ್ನ ಮೂಲ ಮಾತ್ರವಲ್ಲದೆ ಇದು ದೇಹವನ್ನು ತಂಪಾಗಿರಿಸುತ್ತದೆ. ಈ ಸುಡು ಬಿಸಿಲಿನಲ್ಲಿ ದೇಹ ತಂಪಾಗಿರಿಸಲು ನೀವು ಈ ಭಕ್ಷ್ಯವನ್ನು ಸವಿಯಬಹುದು.
ಖುಸ್ ಶರ್ಬತ್: ಲಾವಂಚ ಬೇರಿನ ಜ್ಯೂಸ್ ಅಥವಾ ಖುಸ್ ಶರ್ಬತ್ ಉತ್ತರ ಭಾರತದ ಅದರಲ್ಲೂ ವಿಶೇಷವಾಗಿ ಪಂಜಾಬ್ನ ಪ್ರಸಿದ್ಧ ಪಾನೀಯವಾಗಿದೆ. ಬೇಸಿಗೆಗೆ ಹೇಳಿ ಮಾಡಿಸಿದ ಈ ಪಾನೀಯ ದೇಹವನ್ನು ತಂಪಾಗಿರಿಸುವುದು, ದೇಹದ ಉಷ್ಣತೆಯನ್ನು ನಿವಾರಿಸುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ.
ಚಾಸ್ ಅಥವಾ ಮಸಾಲ ಮಜ್ಜಿಗೆ: ದಕ್ಷಿಣ ಭಾರತ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಫೇಮಸ್ ಆಗಿರುವ ಮಸಾಲ ಮಜ್ಜಿಗೆ ಬೇಸಿಗೆಗೆ ಹೇಳಿ ಮಾಡಿಸಿದ ಪಾನೀಯವಾಗಿದೆ. ಜೀರಿಗೆ, ಕರಿಬೇವು, ಪುದೀನಾ ಸೇರಿಸಿ ತಯಾರಿಸುವ ಈ ಪಾನೀಯ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಹಿತಕರ. ಜೀರ್ಣಕ್ರಿಯೆನ್ನು ಸುಧಾರಿಸುವುದರ ಜೊತೆಗೆ ಇದು ದೇಹವನ್ನು ತಂಪಾಗಿರಿಸುತ್ತದೆ ಆದ್ದರಿಂದ ನೀವು ಈ ಸುಡು ಬೇಸಿಗೆಯಲ್ಲಿ ತಪ್ಪದೆ ಮಸಾಲ ಮಜ್ಜಿಗೆಯನ್ನು ಸವಿಯಲೇಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ