Indian Army Day 2026: ಭಾರತೀಯ ಸೇನೆಯ ಅದಮ್ಯ ಧೈರ್ಯ, ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನವಿದು
ಶತ್ರು ರಾಷ್ಟ್ರಗಳೊಂದಿಗಿನ ಯುದ್ಧ, ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಅಗತ್ಯವಿರುವ ಜನರ ರಕ್ಷಣೆ ಸೇರಿದಂತೆ ಭಾರತೀಯ ಯೋಧರು ಭಾರತಾಂಬೆಯ ರಕ್ಷಣೆಗಾಗಿ ತಮ್ಮ ಜೀವವನ್ನೇ ಸಮರ್ಪಿಸಿಕೊಂಡಿದ್ದಾರೆ. ಇಂತಹ ಮಹಾನ್ ವೀರರನ್ನು ಗೌರವಿಸಲು ಹಾಗೂ ಹುತಾತ್ಮರಾದ ಯೋಧರನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನಾವು ದೇಶದೊಳಗೆ ಸುರಕ್ಷಿತವಾಗಿ, ಭಯಮುಕ್ತವಾಗಿ ವಾಸಿಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ವೀರ ಯೋಧರು (Soldiers). ಎಂತಹ ಅಪಾಯ ಎದುರಾದರೂ ಸಹ, ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಹೆಮ್ಮೆಯ ಸೈನಿಕರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ. ಒಟ್ಟಾರೆಯಾಗಿ ಯೋಧರು ಮತ್ತು ಭಾರತೀಯ ಸೇನೆಯನ್ನು ದೇಶದ ಭದ್ರತೆಯ ಬೆನ್ನೆಲುಬು ಅಂತಾನೇ ಹೇಳಬಹುದು. ಭಾರತೀಯ ಸೇನೆಯ ಈ ಅದಮ್ಯ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರನ್ನು ಸ್ಮರಿಸಲು ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಭಾರತೀಯ ಸೇನಾ ದಿನದ ಇತಿಹಾಸವೇನು?
ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ 1895 ಏಪ್ರಿಲ್ 01 ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಯಿತು. ಆ ಸಮಯದಲ್ಲಿ ಈ ಸೇನೆಯನ್ನು ಬ್ರಿಟೀಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ಸೇನಾ ಕಮಾಂಡರ್ಗಳು ಬ್ರಿಟೀಷರೇ ಆಗಿದ್ದರು. ಬಳಿಕ ಭಾರತ ಸ್ವಾತಂತ್ರ್ಯ ಪಡೆದ ಎರಡು ವರ್ಷಗಳ ನಂತರ ಜನವರಿ 15, 1949 ರಲ್ಲಿ ಬ್ರಿಟೀಷ್ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ಅವರು ಕೆ.ಎಂ ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಈ ವಿಶೇಷ ದಿನದ ನೆನಪಿಗಾಗಿ ಹಾಗೂ ಭಾರತೀಯ ಸೇನೆಯ ಸೈನಿಕರ ಗೌರವಾರ್ಥವಾಗಿ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದೇ ಯುವ ದಿನವನ್ನು ಆಚರಿಸುವುದೇಕೆ ಗೊತ್ತಾ?
ಭಾರತೀಯ ಸೇನಾ ದಿನದ ಮಹತ್ವವೇನು?
- ಸ್ವತಂತ್ರ ಭಾರತದ ಘನತೆ ಗೌರವ ಹಾಗೂ ಸರಕ್ಷತೆಗಾಗಿ ತಮ್ಮನ್ನು ತಾವು ದೇಶ ಸೇವೆಗಾಗಿ ಸಮರ್ಪಿಸಿಕೊಂಡಿರುವ ಭಾರತೀಯ ಯೋಧರನ್ನು ಗೌರವಿಸುವ ಜೊತೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ಸ್ಮರಿಸಲು ಉದ್ದೇಶದಿಂದ ಪ್ರತಿವರ್ಷ ಜನವರಿ 15 ರಂದು ಕಮಾಂಡ್ ಹೆಡ್ಕ್ವಾರ್ಟರ್ಗಳು ಮತ್ತು ನವ ದೆಹಲಿಯ ಪ್ರಧಾನ ಸೇನಾ ಕಛೇರಿಯಲ್ಲಿ ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
- ಭಾರತೀಯ ಸೇನಾ ದಿನವು ಕೇವಲ ಆಚರಣೆಯಲ್ಲ, ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವೂ ಆಗಿದೆ. ಈ ದಿನದಂದು ಸೇನೆಯ ಶಕ್ತಿ, ಕಾರ್ಯತಂತ್ರ ಮತ್ತು ಶಿಸ್ತನ್ನು ಪ್ರದರ್ಶಿಸಲಾಗುತ್ತದೆ.
- ಈ ದಿನ ಸೇನಾ ಕಛೇರಿಗಳಲ್ಲಿ ಪರೇಡ್, ಫ್ಲೈ ಪಾಸ್ಟ್, ಸೇರಿದಂತೆ ವಿವಿಧ ಸಾಹಿಸಿ ಚಟುವಟಿಕೆಗಳ ಪ್ರದರ್ಶನವನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮುಖ್ಯವಾಗಿ ಈ ದಿನ ಕೆಚ್ಚೆದೆಯ ಸೈನಿಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
- ಈ ದಿನ ದೇಶ ಕಾಯುವ ಸೈನಿಕರಿಗೆ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಮಗೆ ಒಂದು ಅವಕಾಶವಾಗಿದ್ದು, ಇದು ನಮ್ಮ ದೇಶಭಕ್ತಿ, ಏಕತೆ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬಲಪಡಿಸಲು ನಮಗೆ ಸ್ಫೂರ್ತಿ ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 am, Thu, 15 January 26




