AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Makar Sankranti 2024: ಮಕರ ಸಂಕ್ರಾಂತಿ ಹಬ್ಬದ ಆಚರಣೆ ಹೇಗಿರಬೇಕು ಗೊತ್ತಾ?

ಪುರಾಣಗಳಲ್ಲಿ ದಕ್ಷಿಣಾಯನಕ್ಕಿಂತ ಉತ್ತರಾಯಣ ಶ್ರೇಷ್ಠವಾದ ಕಾಲ ಎನ್ನಲಾಗುತ್ತದೆ. ಹಾಗಾಗಿಯೇ ಈ ಕಾಲವನ್ನು ಶುಭ ಕಾರ್ಯಗಳಿಗೆ ಪ್ರಶಸ್ತವಾದದ್ದು ಎನ್ನಲಾಗುತ್ತದೆ. ವಿವಾಹ, ಉಪನಯನ, ಗೃಹ ಪ್ರವೇಶ ಮೊದಲಾದ ಮಂಗಳ ಕಾರ್ಯಗಳು ಮಕರ ಸಂಕ್ರಾಂತಿಯ ನಂತರ ಪ್ರಾಶಸ್ತ್ಯವನ್ನು ಪಡೆಯುತ್ತವೆ. ಸಂಕ್ರಾಂತಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಸಂಪ್ರದಾಯ ಸಾರುತ್ತದೆ. ಹಾಗಾಗಿ ದೇವತೆಗಳಿಗೆ ಹಗಲಾಗಿರುವ ಉತ್ತರಾಯಣ ಕಾಲ ಎಲ್ಲರಿಗೂ ಶ್ರೇಷ್ಠವಾದದ್ದು.

Makar Sankranti 2024: ಮಕರ ಸಂಕ್ರಾಂತಿ ಹಬ್ಬದ ಆಚರಣೆ ಹೇಗಿರಬೇಕು ಗೊತ್ತಾ?
Makar Sankranti 2024
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 14, 2024 | 3:51 PM

Share

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಸಂಕ್ರಮಣ ಅಥವಾ ಮಕರ ಸಂಕ್ರಾಂತಿಯಿಂದ ಉತ್ತರಾಯಣ ಪ್ರಾರಂಭವಾಗುತ್ತದೆ. ಪುರಾಣಗಳಲ್ಲಿ ದಕ್ಷಿಣಾಯನಕ್ಕಿಂತ ಉತ್ತರಾಯಣ ಶ್ರೇಷ್ಠವಾದ ಕಾಲ ಎನ್ನಲಾಗುತ್ತದೆ. ಹಾಗಾಗಿಯೇ ಈ ಕಾಲವನ್ನು ಶುಭ ಕಾರ್ಯಗಳಿಗೆ ಪ್ರಶಸ್ತವಾದದ್ದು ಎನ್ನಲಾಗುತ್ತದೆ. ವಿವಾಹ, ಉಪನಯನ, ಗೃಹ ಪ್ರವೇಶ ಮೊದಲಾದ ಮಂಗಳ ಕಾರ್ಯಗಳು ಮಕರ ಸಂಕ್ರಾಂತಿಯ ನಂತರ ಪ್ರಾಶಸ್ತ್ಯವನ್ನು ಪಡೆಯುತ್ತವೆ. ಸಂಕ್ರಾಂತಿಯಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಸಂಪ್ರದಾಯ ಸಾರುತ್ತದೆ. ಹಾಗಾಗಿ ದೇವತೆಗಳಿಗೆ ಹಗಲಾಗಿರುವ ಉತ್ತರಾಯಣ ಕಾಲ ಎಲ್ಲರಿಗೂ ಶ್ರೇಷ್ಠವಾದದ್ದು.

ಇನ್ನು ನಮಗೆಲ್ಲರಿಗೂ ಗೊತ್ತಿರುವ ಹಾಗೇ ಸ್ವೇಚ್ಛಾಮರಣಿಯಾಗಿದ್ದ ಭೀಷ್ಮ ಪಿತಾಮಹರು ಕೂಡ ಸಾವನ್ನು ಬರ ಮಾಡಿಕೊಳ್ಳಲು ಉತ್ತರಾಯಣವನ್ನೇ ಕಾಯುತ್ತಿದ್ದರು. ಇನ್ನು ಈ ಸಮಯದಲ್ಲಿ ಮರಣ ಹೊಂದುವವರು ಸ್ವರ್ಗಕ್ಕೆ ಹೋಗುತ್ತಾರೆ ಎನ್ನಲಾಗುತ್ತದೆ. ಉತ್ತರಾಯಣದ ಪುಣ್ಯಕಾಲದಲ್ಲಿ ಮಕರ ಸಂಕ್ರಮಣದಂದು ಶ್ರದ್ಧಾ ಭಕ್ತಿಯಿಂದ ಧ್ಯಾನ, ದಾನ, ಪೂಜಾದಿಗಳನ್ನು ಮಾಡುವುದರಿಂದ ಅತ್ಯಂತ ಶ್ರೇಷ್ಠವಾದ ಫಲ ಲಭ್ಯವಾಗುತ್ತದೆ.

ಸಂಕ್ರಾಂತಿ ಮಹತ್ವದ ಬಗ್ಗೆ ಪುರಾಣಗಳಲ್ಲಿನ ಏನು ಹೇಳಲಾಗಿದೆ?

‘ಸಂಕ್ರಾಂತೌ ಯಾನಿ ದತ್ತಾನಿ ಹವ್ಯಕವ್ಯಾನಿ ಮಾನವೈಃ | ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ || ಸಂಕ್ರಾಂತಿಯ ದಿನದಂದು ದೇವತೆ ಹಾಗೂ ಪಿತೃ ಪ್ರೀತಿಗಾಗಿ ಯಾವ ವಸ್ತುಗಳು ಮನುಷ್ಯರಿಂದ ದಾನ ಮಾಡಲ್ಪಡುವುದೋ ಅವುಗಳನ್ನು ಜನ್ಮ ಜನ್ಮಾಂತರದಲ್ಲಿಯೂ ಸೂರ್ಯ ಭಗವಂತ ಒದಗಿಸುತ್ತಾನೆ’ ಎನ್ನಲಾಗಿದೆ.

ಇದನ್ನೂ ಓದಿ: ಸಂಕ್ರಾಂತಿಯಂದು ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನಗಳು ಇಲ್ಲಿವೆ

ಮಕರ ಸಂಕ್ರಾಂತಿಯ ಆಚರಣೆ ಹೇಗೆ?

ಪುಣ್ಯತೀರ್ಥಗಳಲ್ಲಿ ಅಂದರೆ ನದಿ, ಸಮುದ್ರ ಮುಂತಾದವುಗಳಲ್ಲಿ ಪವಿತ್ರ ಸ್ನಾನ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದು ಮನಸ್ಸು ಮತ್ತು ಶರೀರದ ಕೊಳೆಯನ್ನು ನಿವಾರಿಸುತ್ತದೆ ಎಂಬ ನಂಬಿಕೆ ಇದೆ. ನದಿ, ಸುಮುದ್ರ ಹತ್ತಿರದಲ್ಲಿ ಇರದವರು ಮನೆಯಲ್ಲಿ ಸ್ನಾನ ಮಾಡುವಾಗ ಆ ನೀರಿಗೆ ಎಳ್ಳನ್ನು ಬೆರೆಸಿ ಸ್ನಾನ ಮಾಡಬೇಕು. ಜೊತೆಗೆ ಇದು ಪರಮಾತ್ಮನ ಅಭಿಮುಖಕ್ಕೆ ಅತ್ಯಂತ ಪ್ರಶಸ್ತವಾದ ಕಾಲವಾದ್ದರಿಂದ ಈ ಸಮಯದಲ್ಲಿ ಪರಮಾತ್ಮನ ಧ್ಯಾನ ಮಾಡುವುದು ವಿಶೇಷ ಫಲದಾಯಕ.

ಇನ್ನು ಮಕರ ಸಂಕ್ರಾಂತಿ ಎಳ್ಳಿನ ಹಬ್ಬವೆಂದು ಪ್ರಸಿದ್ಧವಾಗಿದೆ. ಈ ದಿನ ಎಳ್ಳನ್ನು ವಿಶೇಷವಾಗಿ ಬಳಸಲಾಗುತ್ತದೆ. ಪೀಡಾ ಪರಿಹಾರಕ್ಕಾಗಿ ಎಳ್ಳು, ಬೆಲ್ಲ, ಕೊಬ್ಬರಿ ಇತ್ಯಾದಿಗಳನ್ನು ಹಂಚಬೇಕು ಎನ್ನಲಾಗುತ್ತದೆ. ಈ ದಿನ ಮಕ್ಕಳ ಮೇಲೆ ಎಳ್ಳನ್ನು ಸುರಿಯುವುದರಿಂದ ಬಾಲಾರಿಷ್ಟ ನಾಶವಾಗುತ್ತದೆಂಬ ನಂಬಿಕೆಯಿದೆ. ವಿಶೇಷವಾಗಿ ಎಳ್ಳೆಣ್ಣೆಯ ದೀಪವನ್ನು ಉರಿಸುವುದು, ಸೂರ್ಯ ನಮಸ್ಕಾರ ಇವುಗಳಿಂದ ಆಯುಷ್ಯ ಆರೋಗ್ಯವೃದ್ಧಿಯಾಗುತ್ತದೆ. ಈ ದಿನದಂದು ‘ಆದಿತ್ಯ ಹೃದಯ’ ಸ್ತೋತ್ರದ ಪಾರಾಯಣ ಮಾಡುವುದು ಕೂಡ ಅತ್ಯಂತ ಶ್ರೇಯಸ್ಕರವಾಗಿದೆ ಎಂದು ಪುರಾಣಗಳು ಹೇಳುತ್ತವೆ. ಮಾಡಿದ ಭಕ್ಷ್ಯ ಭೋಜನಗಳನ್ನು ನಾಲ್ಕು ಜನರಿಗೆ ಹಂಚುವುದರಿಂದ ಹಬ್ಬದ ಫಲ ಪ್ರಾಪ್ತಿಯಾಗುತ್ತದೆ. ಒಟ್ಟಿನಲ್ಲಿ ಮಕರ ಸಂಕ್ರಮಣದಂದು ದೇವರನ್ನು ಪೂಜಿಸುವುದರಿಂದ ಆಯುಷ್ಯ, ಆರೋಗ್ಯ, ಸಂಪತ್ತನ್ನು ಪಡೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More