Summer Vacation: ಕಡಲತೀರಗಳ ಸೌಂದರ್ಯ ಸವಿಯಲು ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಇಲ್ಲಿಗೆ ಭೇಟಿ ನೀಡಿ
ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ನಿಮ್ಮ ಮಕ್ಕಳೊಂದಿಗೆ ಕಡಲತೀರಗಳ ಸೌಂದರ್ಯ ಸವಿಯಲು ನೀವು ಬಯಸಿದರೆ ಗೋಕರ್ಣ ಒಂದು ಉತ್ತಮ ಆಯ್ಕೆಯಾಗಿದೆ. ಇಲ್ಲಿ 5 ಬೀಚ್ ಟ್ರೆಕ್ಕಿಂಗ್, ಗೋಕರ್ಣದ ಮಹಾಬಲೇಶ್ವರ ದೇವಾಲಯ, ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮುಂತಾದ ಅನುಭವಗಳನ್ನು ನೀವು ಪಡೆಯಬಹುದು. ಬೆಂಗಳೂರಿನಿಂದ ರೈಲು, ಬಸ್ ಅಥವಾ ಕಾರಿನಲ್ಲಿ ತಲುಪಬಹುದು. ಕಡಲತೀರಗಳ ಸೌಂದರ್ಯ ಮತ್ತು ಆಧ್ಯಾತ್ಮಿಕ ಅನುಭವವನ್ನು ಒಂದೇ ಪ್ರವಾಸದಲ್ಲಿ ಪಡೆಯಬಹುದು.

ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ನಗರದ ಜಂಜಾಟದಿಂದ ಸ್ವಲ್ಪ ದೂರದಲ್ಲಿದ್ದು, ಕಡಲತೀರಗಳ ಸೌಂದರ್ಯವನ್ನು ಸವಿಯಬೇಕು ಎಂದು ಬಯಸಿದರೆ ತಪ್ಪದೇ ಈ ಬೀಚ್ಗಳನ್ನು ಆಯ್ಕೆ ಮಾಡಿಕೊಳ್ಳಿ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಶಾಂತ ಪಟ್ಟಣವಾದ ಗೋಕರ್ಣವು ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಗೋಕರ್ಣ ಮಾತ್ರವಲ್ಲದೇ ಸಮೀಪದಲ್ಲಿರುವ ಹೊನ್ನಾವರ ಮುರುಡೇಶ್ವರಕ್ಕೂ ಭೇಟಿ ನೀಡಬಹುದು. ಪುರಾತನ ದೇವಾಲಯಗಳ ಜೊತೆಗೆ, ಕಡಲತೀರಗಳ ಸೌಂದರ್ಯ ಹಾಗೂ ಸ್ಕೂಬಾ ಡೈವಿಂಗ್ನ ಉತ್ತಮ ಅನುಭವವನ್ನು ಪಡೆಯಬಹುದು.
ಪ್ರಮುಖ ಸ್ಥಳಗಳು:
ದೇವಾಲಯ:
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಶಿವನಿಗೆ ಸಮರ್ಪಿತವಾದ ಪಟ್ಟಣವಾಗಿದ್ದು ಅತಿ ಹೆಚ್ಚು ಭೇಟಿ ನೀಡುವ ಮತ್ತು ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಕ್ರಿ.ಶ 4 ನೇ ಶತಮಾನದಷ್ಟು ಹಳೆಯದಾಗಿದೆ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಜೊತೆಗೆ ನೀವು ಪಕ್ಕದಲೇ ಇರುವ ಮಹಾ ಗಣಪತಿಯ ‘ಸಿದ್ಧ ಗಣಪತಿ’ ದೇವಾಲಯಕ್ಕೂ ಭೇಟಿ ನೀಡಬಹುದು.
5 ಬೀಚ್ ಟ್ರೆಕ್ಕಿಂಗ್:
ಗೋಕರ್ಣವು ನಿಜವಾದ ಬೀಚ್ ಸ್ವರ್ಗವಾಗಿದೆ. ಅದ್ಭುತವಾದ ನೋಟಗಳು, ಶಾಂತ ಅಲೆಗಳನ್ನು ಕೇಳುತ್ತಾ ನೀವು ಮುಂಜಾನೆ ಅಥವಾ ಮುಸ್ಸಂಜೆಯ ಸಮಯದಲ್ಲಿ 5 ಬೀಚ್ ಟ್ರೆಕ್ಕಿಂಗ್ ಮಾಡಬಹುದು. ಕುಡ್ಲೆ ಬೀಚ್, ಗೋಕರ್ಣ ಮುಖ್ಯ ಬೀಚ್, ಹಾಫ್ ಮೂನ್ ಬೀಚ್, ಓಂ ಬೀಚ್ ಮತ್ತು ಪ್ಯಾರಡೈಸ್ ಬೀಚ್ ಎಂದು 5 ಜನಪ್ರಿಯ ಬೀಚ್ಗಳಿವೆ. ಇಲ್ಲಿ ನೀವು ಬೀಚ್ ಸಮೀಪದಲ್ಲಿ ಟ್ರೆಕ್ಕಿಂಗ್ ಮಾಡುತ್ತಾ ನಿಮ್ಮ ಕುಟುಂಬದೊಂದಿಗೆ ಸುಂದರ ಕ್ಷಣವನ್ನು ಕಳೆಯಬಹುದಾಗಿದೆ. ಸುಂದರವಾದ ಕಡಲತೀರ ಇರುವ ಹಿನ್ನೆಲೆಯಲ್ಲಿ ಯೋಗ ತರಗತಿಗೆ ಸೇರುವ ಮೂಲಕ ನೀವು ನಿಮ್ಮ ದಿನವನ್ನು ಪ್ರಾರಂಭಿಸಬಹುದು ಅಥವಾ ಕೊನೆಗೊಳಿಸಬಹುದು. ಇಲ್ಲಿ ಯೋಗದ ವಿವಿಧ ರೂಪಗಳನ್ನು ಹೇಳಿಕೊಡುವ ಒಂದೆರಡು ಯೋಗ ಶಾಲೆಗಳಿವೆ.
ನೇತ್ರಾಣಿ ಅಡ್ವೆಂಚರ್ಸ್ ಸ್ಕೂಬಾ ಡೈವಿಂಗ್:
ನೀವು ಗೋಕರ್ಣದಿಂದ ಮುರುಡೇಶ್ವರಕ್ಕೆ ಹೋಗಿ ಅಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ನೇತ್ರಾಣಿ ಅಡ್ವೆಂಚರ್ಸ್ ಸುಬಾ ಡೈವಿಂಗ್ ಟ್ರೈ ಮಾಡಲೇ ಬೇಕು. ಈ ಹೃದಯ ಆಕಾರದ ನೇತ್ರಾಣಿ ದ್ವೀಪವು ಮುರ್ಡೇಶ್ವರದ ಕರಾವಳಿಯಿಂದ ಕೇವಲ 19 ಕಿಮೀ ದೂರದಲ್ಲಿದೆ. ನಿಮಗೆ ಸಂಪೂರ್ಣ ತರಬೇತಿಯೊಂದಿಗೆ ಸ್ಕೂಬಾ ಡೈವಿಂಗ್ ಕರೆದುಕೊಂಡು ಹೋಗುತ್ತಾರೆ. ಒಬ್ಬರಿಗೆ 4ರಿಂದ 5 ಸಾವಿರದ ವರೆಗೆ ವೆಚ್ಚವಾಗುತ್ತದೆ. ಮುರುಡೇಶ್ವರದ ಸಾಕಷ್ಟು ವೆಬ್ಸೈಟ್ಗಳಲ್ಲಿ ಈ ಕುರಿತು ಮಾಹಿತಿ ಲಭ್ಯವಿದೆ.
ತಲುಪುವುದು ಹೇಗೆ?
ನೀವು ಬೆಂಗಳೂರಿನಿಂದ ಹೋಗುವವರಾದರೆ ಕಡಿಮೆ ಖರ್ಚಿನಲ್ಲಿ ರೈಲಿನಲ್ಲಿ ಪ್ರಯಾಣಿಸಬಹುದು. ಇದಲ್ಲದೇ ನಿಮಗೆ ಬಸ್ಸಿನಲ್ಲೂ ಪ್ರಯಾಣಿಸಬಹುದು. ಒಬ್ಬರಿಗೆ ಹೆಚ್ಚೆಂದರೆ 1000 ರೂ. ನಲ್ಲಿ ಬಸ್ ಟಿಕೆಟ್ ಲಭ್ಯವಿದೆ. ಇದಲ್ಲದೇ ನೀವು ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು. ಕ್ಯಾಬ್ಗಳು ಅಥವಾ ಬಸ್ಸುಗಳಂತಹ ಸಾರ್ವಜನಿಕ / ಖಾಸಗಿ ಸಾರಿಗೆಯನ್ನು ಆಯ್ದು ಕೊಳ್ಳಬಹುದು ಅಥವಾ ಸ್ವಂತ ವಾಹನದಲ್ಲಿಯೂ ಬರಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ