ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗ ಏಳಬೇಕು ಎಂದು ಹಿರಿಯರು, ಆರೋಗ್ಯ ತಜ್ಞರು ಆಗಾಗ್ಗೆ ಸಲಹೆಗಳನ್ನು ನೀಡುತ್ತಿರುತ್ತಾರೆ. ಮುಂಜಾನೆ ಬೇಗ ಏಳುವ ಅಭ್ಯಾಸ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಅದರಲ್ಲೂ ಪ್ರತಿನಿತ್ಯ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಾಕಷ್ಟು ಪ್ರಯೋಜನಗಳು ಇವೆಯಂತೆ. ಅವುಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಬೇಕು (waking up) ಎನ್ನುವ ನಿಯಮವನ್ನು ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿದ್ದಾರೆ. ಈ ಅಭ್ಯಾಸ ದೈಹಿಕ, ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ ಇತರೆ ಕೆಲಸಕ್ಕೂ ತುಂಬಾನೇ ಒಳ್ಳೆಯದು. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಪ್ರಯೋಜನಗಳು ಇನ್ನೂ ಹೆಚ್ಚಂತೆ. ಹಿಂದೂ ಧರ್ಮದಲ್ಲಿ ಬ್ರಹ್ಮ ಮುಹೂರ್ತವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಬೆಳಿಗ್ಗೆ 4:00 ರಿಂದ 5:30 ರವರೆಗಿನ ಸಮಯವನ್ನು ಬ್ರಹ್ಮ ಮುಹೂರ್ತ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಏಳುವುದರಿಂದ ಶಕ್ತಿ, ಜ್ಞಾನ, ಬುದ್ಧಿವಂತಿಕೆ ಮತ್ತು ಆರೋಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ಹಾಗಿದ್ರೆ ಈ ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋನ ಬನ್ನಿ.
ಬ್ರಹ್ಮ ಮುಹೂರ್ತದಲ್ಲಿ ಏಳುವುದರ ಪ್ರಯೋಜನಗಳೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ, ಬ್ರಹ್ಮ ಮುಹೂರ್ತದ ಸಮಯದಲ್ಲಿ ಏಳುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ ಮತ್ತು ಈ ಸಮಯದಲ್ಲಿ ಎಚ್ಚರಗೊಳ್ಳುವ ವ್ಯಕ್ತಿಗೆ ದೇವರುಗಳು ಮತ್ತು ದೇವತೆಗಳು ಆಶೀರ್ವಾದ ನೀಡುತ್ತಾರೆ. ಇದಲ್ಲದೆ, ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳುವ ಅಭ್ಯಾಸವು ಜೀವನದಲ್ಲಿ ಅಪಾರ ಯಶಸ್ಸನ್ನು ತರಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ.
ವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡುವುದಾದರೆ, ಬ್ರಹ್ಮಮುಹೂರ್ತದಲ್ಲಿ ಆಮ್ಲಜನಕ ಹೆಚ್ಚಿನ ಮಟ್ಟದಲ್ಲಿರುತ್ತವೆ ಮತ್ತು ಮಾಲಿನ್ಯ ಕಡಿಮೆ ಇರುತ್ತದೆ. ಈ ವಾತಾವರಣವು ದೇಹವನ್ನು ಚೈತನ್ಯಗೊಳಿಸುತ್ತದೆ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಇದು ಮಾನಸಿಕ ಸ್ಪಷ್ಟತೆ, ಒತ್ತಡ ನಿವಾರಣೆ ಮತ್ತು ಬಲವಾದ ರೋಗನಿರೋಧಕ ವ್ಯವಸ್ಥೆಯಂತಹ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಇನ್ನೂ ಅನೇಕ ಪ್ರಯೋಜನಗಳೂ ಇವೆ. ಅವುಗಳೆಂದರೆ,
ಉತ್ತಮ ಜೀರ್ಣಕ್ರಿಯೆ: ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ದೇಹದ ಸಿರ್ಕಾಡಿಯನ್ ಲಯವು ನಿಯಂತ್ರಿಸಲ್ಪಡುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ಶಕ್ತಿ ಮತ್ತು ಚೈತನ್ಯ: ಬ್ರಹ್ಮ ಮುಹೂರ್ತದ ಸಮಯದಲ್ಲಿ ಗಾಳಿಯು ಆಮ್ಲಜನಕದಿಂದ ಸಮೃದ್ಧವಾಗಿದ್ದು, ಈ ಶುದ್ಧ ಗಾಳಿ ದೇಹವನ್ನು ಉಲ್ಲಾಸಗೊಳಿಸುತ್ತದೆ ಮತ್ತು ಚೈತನ್ಯಗೊಳಿಸುತ್ತದೆ. ಇದು ದಿನದ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉತ್ತಮ ನಿದ್ರೆ: ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ನಿದ್ರೆಯ ಮಾದರಿಗಳು ಕ್ರಮಬದ್ಧವಾಗುತ್ತವೆ, ಇದು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಉತ್ತಮ ರೋಗನಿರೋಧಕ ಶಕ್ತಿ: ಬ್ರಹ್ಮ ಮುಹೂರ್ತದ ಸಮಯದಲ್ಲಿ ನಿಯಮಿತವಾಗಿ ಏಳುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ವಾತಾವರಣವು ಶುದ್ಧ ಆಮ್ಲಜನಕದಿಂದ ಸಮೃದ್ಧವಾಗಿರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
ಮಾನಸಿಕ ಒತ್ತಡದಿಂದ ಮುಕ್ತಿ: ಬ್ರಹ್ಮ ಮುಹೂರ್ತದ ಸಮಯದಲ್ಲಿ ವಾತಾವರಣವು ಶಾಂತ ಮತ್ತು ಶುದ್ಧವಾಗಿದ್ದು, ಇದು ಮನಸ್ಸು ಶಾಂತವಾಗಿರಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಸಮಯ ಧ್ಯಾನ, ಯೋಗ ಮತ್ತು ಪ್ರಾಣಾಯಾಮಕ್ಕೆ ಸೂಕ್ತ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಈ 7 ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು ಎಚ್ಚರ!
ಬ್ರಹ್ಮ ಮುಹೂರ್ತದಲ್ಲಿ ಏಳಲು ಈ ಹಂತಗಳನ್ನು ಅನುಸರಿಸಿ:
- ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳಲು, ಬೇಗ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಪ್ರತಿದಿನ 7 ಗಂಟೆಗಳ ಕಾಲ ನಿದ್ರೆ ಮಾಡುವ ಗುರಿಯನ್ನು ಹೊಂದಿಸಿ.
- ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರಗೊಳ್ಳಲು, ಭಾರೀ ಭೋಜನವನ್ನು ತಪ್ಪಿಸಿ. ನಿಮ್ಮ ರಾತ್ರಿಯ ಭೋಜನ ಲಘುವಾಗಿರಲಿ.
- ಬ್ರಹ್ಮ ಮುಹೂರ್ತಕ್ಕೆ 15 ನಿಮಿಷಗಳ ಮೊದಲು ನಿಮ್ಮ ಅಲಾರಂ ಹೊಂದಿಸಿ. ಇದು ನಿಮಗೆ ತಕ್ಷಣ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ಮೊದಲಿಗೆ ಒಂದು ಅಥವಾ ಎರಡು ದಿನ ನೀವು ಆಲಸ್ಯ ಅನುಭವಿಸಬಹುದು, ಆದರೆ ನಂತರದ ದಿನಗಳಲ್ಲಿ ನೀವು ಬೇಗನೆ ಎಚ್ಚರಗೊಳ್ಳಲು ಒಗ್ಗಿಕೊಳ್ಳುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




