ಹಾವು ಕಚ್ಚಿದರೆ ಜೀವ ಉಳಿಸಲು ಮೊದಲು ಏನು ಮಾಡಬೇಕು? ಏನು ಮಾಡಬಾರದು?
ಹಾವು ಕಚ್ಚಿದಾಗ ಎಲ್ಲರಿಗೂ ಆತಂಕವಾಗುವುದು ಸಹಜ. ಎಲ್ಲ ಹಾವುಗಳೂ ವಿಷಕಾರಿಯಾಗಿರುವುದಿಲ್ಲ. ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿದರೆ ವಿಷ ಮೈಗೆ ಏರದಂತೆ ನೋಡಿಕೊಳ್ಳಬಹುದು. ಹಾವು ಕಚ್ಚಿದ ಮೊದಲ 1 ಗಂಟೆ ಅತ್ಯಂತ ನಿರ್ಣಾಯಕವಾಗಿದ್ದು, ಅದನ್ನು 'ಗೋಲ್ಡನ್ ಅವರ್' ಎನ್ನಲಾಗುತ್ತದೆ. ಸಾಧ್ಯವಾದರೆ ಕಚ್ಚಿದ ಹಾವಿನ ಬಣ್ಣ ಅಥವಾ ಗುರುತನ್ನು ನೆನಪಿನಲ್ಲಿಟ್ಟುಕೊಳ್ಳಿ ಅಥವಾ ದೂರದಿಂದ ಫೋಟೋ ತೆಗೆದುಕೊಳ್ಳಿ. ಇದು ವೈದ್ಯರಿಗೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ಹಾವು ಕಚ್ಚಿದಾಗ ಏನು ಮಾಡಬೇಕು? ಏನು ಮಾಡಬಾರದು? ಎಂಬ ಮಾಹಿತಿ ಇಲ್ಲಿದೆ.

ನವದೆಹಲಿ, ಮೇ 22: ನಮ್ಮ ದೇಶದಲ್ಲಿ, ವಿಶೇಷವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಹಾವು ಕಡಿತದ (Snake Bite) ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಹಾವುಗಳ ವಿಷಯಕ್ಕೆ ಬಂದರೆ, ಹಲವರಿಗೆ ಮೊದಲು ನೆನಪಿಗೆ ಬರುವುದು ವಿಪರೀತ ಭಯ. ಆದರೆ, ಎಲ್ಲಾ ಹಾವುಗಳು ವಿಷಕಾರಿಯಲ್ಲ. ಹೆಚ್ಚಿನ ಜನರು ಅರಿವಿನ ಕೊರತೆ ಮತ್ತು ಸರಿಯಾದ ಸಮಯದಲ್ಲಿ ಪ್ರಥಮ ಚಿಕಿತ್ಸೆ ಪಡೆಯದ ಕಾರಣ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಹಾವು ಕಚ್ಚಿದರೆ ತಕ್ಷಣ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಏನು ಮಾಡಬಾರದು? ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.
ಹಾವು ಕಚ್ಚಿದಾಗ ಗಾಬರಿಯಾಗದೆ ತಕ್ಷಣವೇ ಸರಿಯಾದ ಪ್ರಥಮ ಚಿಕಿತ್ಸೆ ನೀಡುವುದು ಮತ್ತು ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸುವುದು ಅತ್ಯಂತ ಮುಖ್ಯ. ಹಾವು ಕಚ್ಚಿದ ತಕ್ಷಣ ಮಾಡಬೇಕಾದ ಮತ್ತು ಮಾಡಬಾರದ ಪ್ರಮುಖ ವಿಷಯಗಳು ಇಲ್ಲಿವೆ…
ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆಗಳು:
ಗಾಬರಿಯಾಗಬೇಡಿ:
ಹಾವು ಕಚ್ಚಿದರೆ ಹೆದರಬೇಡಿ. ಆತಂಕಗೊಂಡರೆ ಹೃದಯಬಡಿತ ಜಾಸ್ತಿಯಾಗಿ, ರಕ್ತದ ಮೂಲಕ ಹಾವಿನ ವಿಷ ಇಡೀ ದೇಹಕ್ಕೆ ವೇಗವಾಗಿ ಹರಡುತ್ತದೆ. ಆದ್ದರಿಂದ ರೋಗಿ ಧೈರ್ಯವಾಗಿರುವಂತೆ ನೋಡಿಕೊಳ್ಳಿ.
ಚಲನವಲನ ನಿಲ್ಲಿಸಿ:
ಹಾವು ಕಚ್ಚಿದ ಭಾಗವನ್ನು (ಕೈ ಅಥವಾ ಕಾಲು) ಅತಿಯಾಗಿ ಆಡಿಸಬೇಡಿ. ಪೆಟ್ಟಾದ ಕೈ-ಕಾಲಿಗೆ ಪಟ್ಟಿ ಕಟ್ಟುವಂತೆ ಒಂದು ಕೋಲನ್ನು ಇಟ್ಟು ಬಟ್ಟೆಯಿಂದ ಸಡಿಲವಾಗಿ ಕಟ್ಟಿ, ಆ ಅಂಗದ ಚಲನೆಯನ್ನು ನಿಲ್ಲಿಸಿ.
ಹೃದಯದ ಮಟ್ಟಕ್ಕಿಂತ ಕೆಳಗಿರಲಿ:
ಹಾವು ಕಚ್ಚಿದ ಭಾಗವು ಯಾವಾಗಲೂ ಹೃದಯದ ಮಟ್ಟಕ್ಕಿಂತ ಕೆಳಗಿರಬೇಕು. ಇದರಿಂದ ವಿಷ ಹೃದಯದ ಕಡೆಗೆ ವೇಗವಾಗಿ ಹರಿಯುವುದು ತಡೆಯಲ್ಪಡುತ್ತದೆ.
ಆಭರಣಗಳನ್ನು ತೆಗೆಯಿರಿ:
ಹಾವು ಕಚ್ಚಿದ ಜಾಗದಲ್ಲಿ ಬಾವು (ಊತ) ಬರುವ ಸಾಧ್ಯತೆ ಇರುವುದರಿಂದ, ತಕ್ಷಣವೇ ಆ ಕೈ ಅಥವಾ ಕಾಲಿನಲ್ಲಿರುವ ಉಂಗುರ, ಬಳೆ, ಕಾಲುಗೆಜ್ಜೆ ಅಥವಾ ಗಡಿಯಾರಗಳನ್ನು ತೆಗೆದುಬಿಡಿ.
ಗಾಯವನ್ನು ಸ್ವಚ್ಛಗೊಳಿಸಿ:
ಗಾಯದ ಮೇಲಿರುವ ಹಾವಿನ ಲಾಲಾರಸವನ್ನು ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಒರೆಸಿ. ಆದರೆ, ಗಾಯವನ್ನು ಅತಿಯಾಗಿ ಉಜ್ಜಬೇಡಿ.
ಹಾವು ಕಚ್ಚಿದಾಗ ಏನು ಮಾಡಬಾರದು?
ಗಾಯವನ್ನು ಬಾಯಿಯಿಂದ ಕಚ್ಚಬೇಡಿ ಅಥವಾ ನೆಕ್ಕಬೇಡಿ:
ಸಿನಿಮಾಗಳಲ್ಲಿ ತೋರಿಸುವಂತೆ ಗಾಯದಿಂದ ವಿಷವನ್ನು ಬಾಯಿಯಿಂದ ಹೀರಿ ಉಗುಳಲು ಪ್ರಯತ್ನಿಸಬೇಡಿ. ಇದರಿಂದ ಹೀರುವ ವ್ಯಕ್ತಿಗೂ ವಿಷ ತಗಲಬಹುದು.
ಕಟ್ಟುಗಳನ್ನು ಗಟ್ಟಿಯಾಗಿ ಕಟ್ಟಬೇಡಿ:
ರಕ್ತಸಂಚಾರ ಸಂಪೂರ್ಣ ನಿಲ್ಲುವಂತೆ ಹಗ್ಗ ಅಥವಾ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಬೇಡಿ. ಇದರಿಂದ ಆ ಅಂಗಕ್ಕೆ ರಕ್ತಸಂಚಾರ ನಿಂತು, ಗ್ಯಾಂಗ್ರಿನ್ ಆಗಿ ಆ ಕೈ ಅಥವಾ ಕಾಲನ್ನೇ ಕತ್ತರಿಸಬೇಕಾದ ಪರಿಸ್ಥಿತಿ ಬರಬಹುದು.
ಬ್ಲೇಡ್ನಿಂದ ಕಟ್ ಮಾಡಬೇಡಿ:
ವಿಷ ಹೊರಬರಲಿ ಎಂದು ಗಾಯದ ಜಾಗವನ್ನು ಬ್ಲೇಡ್ ಅಥವಾ ಚಾಕುವಿನಿಂದ ಕತ್ತರಿಸಬೇಡಿ. ಇದರಿಂದ ರಕ್ತಸ್ರಾವ ಹೆಚ್ಚಾಗಬಹುದು ಮತ್ತು ಇನ್ಫೆಕ್ಷನ್ ಆಗಬಹುದು.
ನಾಟಿ ವೈದ್ಯರ ಬಳಿ ಹೋಗಬೇಡಿ:
ಹಾವು ಕಚ್ಚಿದಾಗ ಮಂತ್ರ ಹಾಕುವುದು, ಬೇರು-ಎಲೆಗಳ ರಸ ಹಾಕುವುದು ಮುಂತಾದ ಮೂಢನಂಬಿಕೆಗಳಿಗೆ ಬಿದ್ದು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ. ನಾಟಿ ವೈದ್ಯರ ಬಳಿ ಹೋಗುವ ಬದಲು ಆಸ್ಪತ್ರೆಗೆ ಹೋಗಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





