New Play : ಯಾಕೆ ‘ಇಲ್ಲಿರುವುದು ಸುಮ್ಮನೆ’? ನಾಳೆ ರಂಗಶಂಕರದಲ್ಲಿ ವಿವೇಕ ಶಾನಭಾಗರನ್ನೇ ಕೇಳೋಣ

|

Updated on: Oct 16, 2021 | 5:41 PM

Vivek Shanbhag : ಹಿರಿಯ ಸಾಹಿತಿ ವಿವೇಕ ಶಾನಭಾಗ ಅವರ ಹೊಸ ನಾಟಕ ‘ಇಲ್ಲಿರುವುದು ಸುಮ್ಮನೆ’ ಇತ್ತೀಚೆಗಷ್ಟೇ ಅಕ್ಷರ ಪ್ರಕಾಶನದಿಂದ ಓದುಗರ ಕೈ ಸೇರಿದೆ. ಈಗಾಗಲೇ ಈ ನಾಟಕವನ್ನು ಓದಿರುವವರು, ಓದಬೇಕಿರುವವರೆಲ್ಲರೂ ಒಟ್ಟಿಗೆ ಸೇರುವ ಅವಕಾಶವೊಂದನ್ನು ರಂಗಶಂಕರದ ‘ಪುಸ್ತಕ ಸಂಭ್ರಮ’ ಸೃಷ್ಟಿಸಿದೆ.

New Play : ಯಾಕೆ ‘ಇಲ್ಲಿರುವುದು ಸುಮ್ಮನೆ’? ನಾಳೆ ರಂಗಶಂಕರದಲ್ಲಿ ವಿವೇಕ ಶಾನಭಾಗರನ್ನೇ ಕೇಳೋಣ
ಕಥೆಗಾರರಾದ ವಿವೇಕ ಶಾನಭಾಗ ಸುರೇಂದ್ರನಾಥ ಎಸ್ ಮತ್ತು ಜೋಗಿ
Follow us on

Vivek Shanbhag : ‘ವಿವೇಕ ಶಾನಭಾಗರ ನಾಟಕಗಳು Urban ನಾಟಕಗಳು, ಅಪ್ಪಟ ನಗರ ನಾಟಕಗಳು. ಇಷ್ಟು ಸಮರ್ಥವಾದ ನಗರ ಜೀವನವನ್ನು ಚಿತ್ರಿಸುವ ನಾಟಕಗಳು ಕನ್ನಡದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಇದಕ್ಕೆ ಕಾರಣ ವಿವೇಕರ ವೃತ್ತಿಯ ಹಿನ್ನೆಲೆಯೂ ಕಾರಣವಿರಬಹುದು. ಇವು ನಗರ ನಾಟಕಗಳು ಎನ್ನುವ ಹಿನ್ನೆಲೆಯಲ್ಲಿ ನೋಡಿದಾಗ ನಾಟಕ ವಿನ್ಯಾಸಕ್ಕೆ ಒಂದು ಸಹಾಯ ದೊರೆತುಬಿಡುತ್ತದೆ. ನಾಟಕ ಪ್ರಯೋಗದ ಗತಿ, Movement, ರಂಗಸಜ್ಜಿಕೆ ಎಲ್ಲವೂ ಒಂದೇ ಬಂಧದಲ್ಲಿ ಅಡಕವಾಗಿಬಿಡುತ್ತವೆ. ನಂತರ ಪಾತ್ರ ಪೋಷಣೆ ಹೆಚ್ಚು ಕಷ್ಟವಾಗುವುದಿಲ್ಲ. ಇದಕ್ಕೆ ವಿವೇಕರ ನಾಟಕದ ಸಂಭಾಷಣೆಯ ಸಹಾಯವೂ ಇರುತ್ತದಲ್ಲಾ? ಹೀಗೆ ನಾಟಕವನ್ನು ನೋಡುವ, ಒಂದು ಬಂಧದಲ್ಲಿ ಕೂಡಿಸುವ ಕೆಲಸ ನಿರ್ದೇಶಕನದ್ದಾಗಿರಬೇಕು.’
ಎಸ್. ಸುರೇಂದ್ರನಾಥ, ರಂಗನಿರ್ದೇಶಕ  

ಹಿರಿಯ ಸಾಹಿತಿ ವಿವೇಕ ಶಾನಭಾಗ ಅವರ ಹೊಸ ನಾಟಕ ‘ಇಲ್ಲಿರುವುದು ಸುಮ್ಮನೆ’ ಇತ್ತೀಚೆಗಷ್ಟೇ ಅಕ್ಷರ ಪ್ರಕಾಶನದಿಂದ ಓದುಗರ ಕೈ ಸೇರಿದೆ. ಈಗಾಗಲೇ ಈ ನಾಟಕವನ್ನು ಓದಿರುವವರು, ಓದಬೇಕಿರುವವರೆಲ್ಲರೂ ಒಟ್ಟಿಗೆ ಸೇರುವ ಅವಕಾಶವೊಂದನ್ನು ರಂಗಶಂಕರದ ‘ಪುಸ್ತಕ ಸಂಭ್ರಮ’ ಸೃಷ್ಟಿಸಿದೆ. ನಾಳೆ ಭಾನುವಾರ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗಶಂಕರದಲ್ಲಿ (ಅ. 17) ಮಧ್ಯಾಹ್ನ 12ಕ್ಕೆ ವಿವೇಕ ಅವರೊಂದಿಗೆ ಹಿರಿಯ ನಾಟಕಕಾರ, ನಿರ್ದೇಶಕ ಎಸ್​, ಸುರೇಂದ್ರನಾಥ ಮತ್ತು ಕಥೆಗಾರ, ಪರ್ತಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಸಂವಾದದಲ್ಲಿ ತೊಡಗಲಿದ್ದಾರೆ.

ಈಗಾಗಲೇ ವಿವೇಕ ಅವರ ಎರಡು ನಾಟಕಗಳನ್ನು ನಿರ್ದೇಶಿಸಿದ ಎಸ್. ಸುರೇಂದ್ರನಾಥ, ‘ಯಾವುದೇ ನಾಟಕದ ನಿರ್ದೇಶನಕ್ಕೆ ಕೈ ಹಾಕುವ ಮೊದಲು ಒಂದಿಷ್ಟು ತಯಾರಿ ಅಗತ್ಯ. ಒಂದು ನಾಟಕ ಏನೋ ಅಥವಾ ಯಾವುದೋ ಒಂದು ಹೊಳಹಿನ ಸುತ್ತ ಬೆಳೆಯುತ್ತದೆ ಅನ್ನುವುದಂತೂ ಖಂಡಿತ. ನಾಟಕದ ವಿನ್ಯಾಸ ಕೂಡ ಈ ಹೊಳಹನ್ನೆ ಆಧರಿಸಿ ತಯಾರಾಗಬೇಕಾಗುತ್ತದೆ. ಇದು ನಾಟಕಕಾರ ಹೇಳಿದ್ದೆ ಆಗಬಹುದು ಅಥವಾ ನಿರ್ದೇಶಕ ಈ ನಾಟಕದ ಪ್ರಯೋಗದಲ್ಲಿ ತೆಗೆದುಕೊಂಡ ಸ್ವಾತಂತ್ರ್ಯಕ್ಕೆ ತಕ್ಕಂತೆಯೂ ಆಗಬಹುದು.

‘ವಿವೇಕ ಶಾನಭಾಗರ ನಾಟಕಗಳು Urban ನಾಟಕಗಳು, ಅಪ್ಪಟ ನಗರ ನಾಟಕಗಳು. ಇಷ್ಟು ಸಮರ್ಥವಾದ ನಗರ ಜೀವನವನ್ನು ಚಿತ್ರಿಸುವ ನಾಟಕಗಳು ಕನ್ನಡದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಇದಕ್ಕೆ ಕಾರಣ ವಿವೇಕರ ವೃತ್ತಿಯ ಹಿನ್ನೆಲೆಯೂ ಕಾರಣವಿರಬಹುದು. ಇವು ನಗರ ನಾಟಕಗಳು ಎನ್ನುವ ಹಿನ್ನೆಲೆಯಲ್ಲಿ ನೋಡಿದಾಗ ನಾಟಕ ವಿನ್ಯಾಸಕ್ಕೆ ಒಂದು ಸಹಾಯ ದೊರೆತುಬಿಡುತ್ತದೆ. ನಾಟಕ ಪ್ರಯೋಗದ ಗತಿ, movement, ರಂಗಸಜ್ಜಿಕೆ ಎಲ್ಲವೂ ಒಂದೇ ಬಂಧದಲ್ಲಿ ಅಡಕವಾಗಿಬಿಡುತ್ತವೆ. ನಂತರ ಪಾತ್ರ ಪೋಷಣೆ ಹೆಚ್ಚು ಕಷ್ಟವಾಗುವುದಿಲ್ಲ. ಇದಕ್ಕೆ ವಿವೇಕರ ನಾಟಕದ ಸಂಭಾಷಣೆಯ ಸಹಾಯವೂ ಇರುತ್ತದಲ್ಲಾ? ಹೀಗೆ ನಾಟಕವನ್ನು ನೋಡುವ, ಒಂದು ಬಂಧದಲ್ಲಿ ಕೂಡಿಸುವ ಕೆಲಸ ನಿರ್ದೇಶಕನದ್ದಾಗಿರಬೇಕು’  ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಕೊರೊನಾ ಸಂದರ್ಭ ಹೊರತುಪಡಿಸಿ, ಇತ್ತೀಚಿನ ವರ್ಷಗಳ ರಂಗಪ್ರಸ್ತುತಿಗಳ ಹಿನ್ನೆಲೆಯಲ್ಲಿ ಕಥೆಗಾರ ಜೋಗಿ, ‘ಇತ್ತೀಚೆಗೆ ನಾಟಕದ ತಂಡಗಳು ಜಾಸ್ತಿಯಾಗಿವೆ. ಪ್ರೇಕ್ಷಕರನ್ನು ಸೆಳೆಯಬೇಕು ಎನ್ನುವ ಉದ್ದೇಶದಿಂದ, ಒಂದೋ ಕತೆಕಾದಂಬರಿಗಳನ್ನು ಇಟ್ಟುಕೊಂಡು ಅಥವಾ ಹಳೆಯ ನಾಟಕಗಳ ಹಂದರವನ್ನಷ್ಟೇ ಇಟ್ಟುಕೊಂಡು ಒಳಾವರಣಗಳಿಗೆ ಸಮಕಾಲೀನ ಸ್ಪರ್ಶ ಕೊಡುವ ಪ್ರಯತ್ನಗಳನ್ನು ಮುಂದುವರಿಸಿಕೊಂಡು ಬಂದಿವೆ. ಇಂಥ ಪ್ರಯೋಗಗಳು ಮನೋರಂಜನೆ ನೀಡಬಹುದು, ಸೈದ್ಧಾಂತಿಕ ಅಭಿಪ್ರಾಯಗಳನ್ನು ಎತ್ತಿ ಹಿಡಿಯಬಹುದು ಅಥವಾ ಎಲ್ಲಾ ವಯೋಮಾನದ ಪ್ರೇಕ್ಷಕರನ್ನೂ ಸೆಳೆದು ಯಶಸ್ವಿ ಪ್ರಯೋಗ ಎನ್ನಿಸಿಕೊಳ್ಳಬಹುದು. ಆದರೆ ನಾಟಕದ ಅಂತಃಸ್ಸತ್ವ, ಮತ್ತದರ ಆತ್ಮ? ಅದು ಪ್ರೇಕ್ಷಕರ ಮನಸಿನಲ್ಲಿ ತಾನಾಗೇ ಇಳಿಯುವಂತೆ ಮಾಡುವ ಕಥನಕ್ರಮದ ಹಿನ್ನೆಲೆಯಲ್ಲಿ ಹೊಸಹೊಸ ನಾಟಕಗಳು ರಚನೆಯಾಗಬೇಕಾದ ಅನಿವಾರ್ಯತೆ ಇದೆ. ಇದು ಬಹಳಷ್ಟು ತಾದಾತ್ಮ್ಯವನ್ನು ನಿರೀಕ್ಷಿಸುವಂಥದ್ದು. ‘ಇಲ್ಲಿರುವುದು ಸುಮ್ಮನೆ’ ಈ ವಿಷಯವಾಗಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ ಎನ್ನಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹೀಗೆ ಇಂಥ ವಿಚಾರಗಳನ್ನು, ಹೊಳಹುಗಳನ್ನು ಆಲಿಸಲು ಮತ್ತು ಸಂವಾದದಲ್ಲಿ ತೊಡಗಲು ಆಸಕ್ತರು ಕೋವಿಡ್ ನಿಯಮಗಳನ್ನು ಅನುಸರಿಸಿ ರಂಗಶಂಕರಕ್ಕೆ ಬರಬಹುದು.

ಈ ನಾಟಕದ ಆಯ್ದ ಭಾಗ ಇಲ್ಲಿದೆ : New Play : ಅಚ್ಚಿಗೂ ಮೊದಲು ; ‘ಮನಸಲ್ಲಿರೋ ಮನೆ ಹುಡುಕಬೇಡಿ ವಿಳಾಸ ಹಿಡಿದು ಹುಡುಕಿ’

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು : ವಾರದೊಪ್ಪತ್ತಿನಲ್ಲಿ ಓದುಗರ ಕೈಗೆ ವಿವೇಕ ಶಾನಭಾಗರ ‘ಸಕೀನಾಳ ಮುತ್ತು’