ಗ್ಯಾಂಗ್ಸ್ಟರ್ ಅಬು ಸಲೇಂಗೆ ಸುಪ್ರೀಂ ಶಾಕ್: ಅವಧಿಪೂರ್ವ ಬಿಡುಗಡೆ ಅರ್ಜಿ ವಜಾ, 2030ರವರೆಗೆ ಜೈಲೇ ಗತಿ
ಅಬು ಸಲೇಂ ಅವಧಿಪೂರ್ವ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮುಂಬೈ ಸ್ಫೋಟದ ಪ್ರಮುಖ ಆರೋಪಿಯಾಗಿರುವ ಸಲೇಂ 25 ವರ್ಷಗಳ ಶಿಕ್ಷೆ 2030ರಲ್ಲಿ ಪೂರ್ಣಗೊಳ್ಳಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪೋರ್ಚುಗಲ್ನೊಂದಿಗೆ ಮಾಡಿಕೊಂಡ ಹಸ್ತಾಂತರ ಒಪ್ಪಂದದ ಷರತ್ತುಗಳನ್ನು ಭಾರತ ಸರ್ಕಾರ ಗೌರವಿಸುವುದಾಗಿ ತಿಳಿಸಿದ್ದು, 2030ರ ನಂತರ ಬಿಡುಗಡೆಗೆ ಶಿಫಾರಸು ಮಾಡುವುದಾಗಿ ಹೇಳಿದೆ. ಸಲೇಂಗೆ ಸದ್ಯಕ್ಕೆ ಜೈಲೇ ಗತಿ.

ನವದೆಹಲಿ, ಸೆಪ್ಟೆಂಬರ್ 10: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ, ಕುಖ್ಯಾತ ಗ್ಯಾಂಗ್ಸ್ಟರ್ ಅಬು ಸಲೇಂಗೆ ಸುಪ್ರೀಂ ಕೋರ್ಟ್ನಲ್ಲಿ ಭಾರಿ ಹಿನ್ನಡೆಯಾಗಿದೆ. ಜೈಲಿನಲ್ಲಿ ತಾನು ಈಗಾಗಲೇ 25 ವರ್ಷಗಳ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದು, ತಕ್ಷಣವೇ ಬಿಡುಗಡೆ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, “ಸಲೇಂ ಅರ್ಜಿ ಅಕಾಲಿಕವಾಗಿದ್ದು, ಆತನ 25 ವರ್ಷಗಳ ಶಿಕ್ಷೆ 2030ರಲ್ಲಿ ಮಾತ್ರ ಪೂರ್ಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದೆ.
ಅರ್ಜಿ ವಜಾ ಮಾಡಿದ ಪೀಠ: ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠವು ಬಾಂಬೆ ಹೈಕೋರ್ಟ್ನ ಆದೇಶವನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ. ಸಲೇಂ ಜೈಲಿನಲ್ಲಿ ಕಳೆದ ದಿನಗಳು ಹಾಗೂ ಶಿಕ್ಷೆಯ ವಿನಾಯಿತಿಯನ್ನು ಸೇರಿಸಿ 25 ವರ್ಷಗಳಾಗಿವೆ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
25 ವರ್ಷಗಳ ಲೆಕ್ಕಾಚಾರದ ಗೊಂದಲ: ಅಬು ಸಲೇಂ ಪ್ರಕಾರ ತಾನು ಪೋರ್ಚುಗಲ್ನಲ್ಲಿ ಬಂಧನಕ್ಕೊಳಗಾದ ದಿನದಿಂದ 25 ವರ್ಷಗಳನ್ನು ಪೂರೈಸಿದ್ದೇನೆ ಎಂದು ವಾದಿಸಿದ್ದ. ಆದರೆ ಭಾರತೀಯ ನ್ಯಾಯಾಲಯಗಳ ಪ್ರಕಾರ, 2005ರಲ್ಲಿ ಭಾರತಕ್ಕೆ ಹಸ್ತಾಂತರವಾದ ದಿನದಿಂದ ಶಿಕ್ಷೆಯ ದಿನಗಳನ್ನು ಅಧಿಕೃತವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದು, ಈ ಗಡುವು 2030ರ ನವೆಂಬರ್ನಲ್ಲಿ ಮುಕ್ತಾಯವಾಗಲಿದೆ.
ಹಸ್ತಾಂತರ ಷರತ್ತುಗಳ ರಕ್ಷಣೆ: 2002ರಲ್ಲಿ ಪೋರ್ಚುಗಲ್ ರಾಜಧಾನಿ ಲಿಸ್ಬನ್ನಲ್ಲಿ ಸಲೇಂನನ್ನು ಬಂಧಿಸಲಾಗಿತ್ತು. ಭಾರತ ಮತ್ತು ಪೋರ್ಚುಗಲ್ ನಡುವಿನ ಹಸ್ತಾಂತರ ಒಪ್ಪಂದದ ಪ್ರಕಾರ, ಆತನಿಗೆ ಮರಣದಂಡನೆ ವಿಧಿಸುವಂತಿಲ್ಲ ಮತ್ತು 25 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇಡುವಂತಿಲ್ಲ ಎಂಬ ಷರತ್ತಿಗೆ ಭಾರತ ಸರ್ಕಾರ ಬದ್ಧವಾಗಿದೆ. ಆದರೆ ಆ 25 ವರ್ಷಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮತ್ತಷ್ಟು ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ
ಪ್ರದೀಪ್ ಜೈನ್ ಹತ್ಯೆ ಹಾಗೂ ಮುಂಬೈ ಸ್ಫೋಟ: 1993ರಲ್ಲಿ 257 ಜನರ ಸಾವಿಗೆ ಕಾರಣವಾದ ಮುಂಬೈ ಸರಣಿ ಸ್ಫೋಟದಲ್ಲಿ ಶಸ್ತ್ರಾಸ್ತ್ರ ಸರಬರಾಜು ಮಾಡಿದ ಆರೋಪ ಹಾಗೂ 1995ರಲ್ಲಿ ಮುಂಬೈನ ಬಿಲ್ಡರ್ ಪ್ರದೀಪ್ ಜೈನ್ ಹತ್ಯೆ ಪ್ರಕರಣದಲ್ಲಿ ಅಬು ಸಲೇಂ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಬಾಲಿವುಡ್ ನಟಿ ಮೋನಿಕಾ ಬೇಡಿ ನಂಟು: ಅಬು ಸಲೇಂ ತನ್ನ ಗ್ಯಾಂಗ್ಸ್ಟರ್ ದಿನಗಳಲ್ಲಿ ಬಾಲಿವುಡ್ನಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ. ನಟಿ ಮೋನಿಕಾ ಬೇಡಿ ಜೊತೆ ಪೋರ್ಚುಗಲ್ಗೆ ಪರಾರಿಯಾಗಿದ್ದಾಗ ನಕಲಿ ಪಾಸ್ಪೋರ್ಟ್ ಪ್ರಕರಣದಲ್ಲಿ ಇಬ್ಬರೂ ಸೆರೆಸಿಕ್ಕಿದ್ದರು.
ಕೇಂದ್ರ ಸರ್ಕಾರದ ಬದ್ಧತೆ: ಈ ಹಿಂದೆ ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಗೃಹ ಇಲಾಖೆ ಅಫಿಡವಿಟ್ ಸಲ್ಲಿಸಿ, “ಪೋರ್ಚುಗಲ್ ಸರ್ಕಾರಕ್ಕೆ ನೀಡಿದ ಮಾತಿನಂತೆ ಅಬು ಸಲೇಂ 25 ವರ್ಷ ಪೂರೈಸಿದ ನಂತರ (2030ರಲ್ಲಿ) ಆತನನ್ನು ಬಿಡುಗಡೆ ಮಾಡಲು ರಾಷ್ಟ್ರಪತಿಗೆ ಶಿಫಾರಸು ಮಾಡಲಾಗುವುದು, ಆದರೆ ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಬಿಡುಗಡೆ ಅಸಾಧ್ಯ ಎಂದು ಸ್ಪಷ್ಟಪಡಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Thu, 10 September 26




