ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸುವಂತಾಗಬೇಕು; ಅಲಹಾಬಾದ್ ಹೈಕೋರ್ಟ್ ಟೀಕೆ

ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಹಣ ದುರುಪಯೋಗವಾಗಿರುವ ಆರೋಪದ ವಿಷಯವನ್ನು ಪ್ರಸ್ತಾಪಿಸಿದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶ್ರೀಧರನ್, ಈ ಘಟನೆಯಿಂದಲೂ ವಿಚಲಿತರಾದ ಜನರನ್ನು ಜಗತ್ತಿನಲ್ಲಿ ಯಾವುದೂ ನಾಚಿಕೆಪಡಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ಅಪರಾಧಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುವಂತೆಯೂ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ. ರಾಮಮಂದಿರದಲ್ಲಿ ನಡೆದ ಇತ್ತೀಚಿನ ದೇಣಿಗೆ ಕಳ್ಳತನ ಭಾರತೀಯರ ಪ್ರಾಮಾಣಿಕತೆಯ ಅಧಃಪತನಕ್ಕೆ ಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸುವಂತಾಗಬೇಕು; ಅಲಹಾಬಾದ್ ಹೈಕೋರ್ಟ್ ಟೀಕೆ
Allahabad High Court
Image Credit source: Getty Image

Updated on: Jul 22, 2026 | 5:01 PM

ಅಲಹಾಬಾದ್, ಜುಲೈ 22: ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ (Ram Mandir Donation Theft) ಮತ್ತು ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಲಹಾಬಾದ್ ಹೈಕೋರ್ಟ್ ದೇಶದಲ್ಲಿ ಭ್ರಷ್ಟಾಚಾರ ಸಾಮಾನ್ಯವಾಗಿಬಿಟ್ಟಿದೆ, ರಾಮ ಮಂದಿರಕ್ಕೆ ನೀಡಿದ ದೇಣಿಗೆಯ ಕಳ್ಳತನ ಕೂಡ ಜನರನ್ನು ನಾಚಿಕೆಪಡಿಸುತ್ತಿಲ್ಲ ಎಂದು ಟೀಕಿಸಿದೆ. ಇದು ಅತ್ಯಂತ ಕೆಳಮಟ್ಟದ ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತದೆ. ಸರ್ಕಾರ ನಿಜವಾಗಿಯೂ ಭ್ರಷ್ಟಾಚಾರವನ್ನು ನಿಗ್ರಹಿಸಲು ಬಯಸಿದರೆ, ಕಾನೂನನ್ನು ತಿದ್ದುಪಡಿ ಮಾಡುವ ಮತ್ತು ಇಂತಹ ಭ್ರಷ್ಟಾಚಾರದ ಗಂಭೀರ ಪ್ರಕರಣಗಳಲ್ಲಿ ಮರಣದಂಡನೆಯನ್ನು ವಿಧಿಸುವ ಬಗ್ಗೆ ಪರಿಗಣಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬುಲ್ಡೋಜರ್ ಕ್ರಮಕ್ಕೆ ತಡೆ ಕೋರಿ ಹಮೀರ್‌ಪುರ ನಿವಾಸಿ ಕೈಫುದ್ದೀನ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಅತುಲ್ ಶ್ರೀಧರನ್ ತಮ್ಮ ತೀರ್ಪಿನಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಪೀಠದಲ್ಲಿ ನ್ಯಾಯಮೂರ್ತಿ ಸಿದ್ಧಾರ್ಥಾನಂದ್ ಕೂಡ ಇದ್ದರು. ಅವರು ಕೆಲವು ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಿಲ್ಲಿಸಲಿದೆ ಎಸ್​ಐಟಿ

ಪುರಸಭೆಯ ಕೆಲವು ಭ್ರಷ್ಟ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಶಾಮೀಲಿನಿಂದ ಅಕ್ರಮ ನಿರ್ಮಾಣಗಳು ಉದ್ಭವಿಸುತ್ತವೆ ಎಂದು ಹೈಕೋರ್ಟ್ ಹೇಳಿದೆ. ಅಧಿಕಾರಿಗಳು ಲಂಚ ಸ್ವೀಕರಿಸಿ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುತ್ತಾರೆ ಮತ್ತು ಕ್ರಮ ಕೈಗೊಂಡಾಗ, ಸಾಮಾನ್ಯ ಖರೀದಿದಾರರು ಪರಿಣಾಮಗಳನ್ನು ಅನುಭವಿಸುತ್ತಾರೆ. ಅಕ್ರಮ ನಿರ್ಮಾಣಗಳನ್ನು ನಡೆಸುವ ಬಿಲ್ಡರ್‌ಗಳು ಮಾತ್ರವಲ್ಲದೆ ಅವರನ್ನು ರಕ್ಷಿಸುವ ಭ್ರಷ್ಟ ಅಧಿಕಾರಿಗಳನ್ನು ಸಹ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಭ್ರಷ್ಟಾಚಾರದಿಂದ ಅಸಮಾನತೆ ಹೆಚ್ಚಳ:

ಭ್ರಷ್ಟಾಚಾರದಿಂದ ಹೆಚ್ಚುತ್ತಿರುವ ಅಸಮಾನತೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ಭ್ರಷ್ಟಾಚಾರವು ಕೆಲವರ ಕೈಯಲ್ಲಿ ಅಕ್ರಮವಾಗಿ ಸಂಪತ್ತು ಸಂಗ್ರಹವಾಗಲು ಕಾರಣವಾಗುತ್ತಿದೆ. ಇದರಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದೆ ಎಂದು ಹೇಳಿದೆ. ಇದನ್ನು ಸಕಾಲದಲ್ಲಿ ಪರಿಣಾಮಕಾರಿಯಾಗಿ ನಿಗ್ರಹಿಸದಿದ್ದರೆ, ಅದು ಭವಿಷ್ಯದಲ್ಲಿ ಸಾಮಾಜಿಕ ಅಶಾಂತಿ ಮತ್ತು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ರಾಮ ಮಂದಿರದ ಕಾಣಿಕೆಗೆ ‘AI’ ಕಾವಲು: ಪ್ರತಿ ರೂಪಾಯಿಯನ್ನೂ ಟ್ರ್ಯಾಕ್ ಮಾಡಲು ಎಸ್‌ಐಟಿ ಮಾಸ್ಟರ್ ಪ್ಲ್ಯಾನ್

ರಾಮ ಮಂದಿರದ ಕಾಣಿಕೆಗಳ ಕಳ್ಳತನದ ಉಲ್ಲೇಖ:

ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರು ತಮ್ಮ 51 ಪುಟಗಳ ತೀರ್ಪಿನಲ್ಲಿ, ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದ ವಿವಾದದ ಬಗ್ಗೆಯೂ ಪ್ರಸ್ಥಾಪಿಸಿದ್ದಾರೆ. ಇಂತಹ ಸೂಕ್ಷ್ಮ ಧಾರ್ಮಿಕ ಸ್ಥಳದಲ್ಲಿ ದೇಣಿಗೆ ಕಳ್ಳತನದಿಂದ ಸಮಾಜವು ವಿಚಲಿತರಾಗದಿದ್ದರೆ, ಅದು ಸಮಗ್ರತೆಯ ಗುಣಮಟ್ಟ ಕುಸಿಯುತ್ತಿರುವುದರ ಗಂಭೀರ ಸೂಚನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ರಾಮ ಮಂದಿರದಲ್ಲಿ ಕಾಣಿಕೆಗಳ ಕಳ್ಳತನಕ್ಕೆ ಸಂಬಂಧಿಸಿದ ಇತ್ತೀಚಿನ ವಿವಾದವು ತಾಳ್ಮೆಯ ಪರೀಕ್ಷೆಯಾಗಿದೆ ಎಂದು ನ್ಯಾಯಮೂರ್ತಿ ಶ್ರೀಧರನ್ ಹೇಳಿದರು. ಭ್ರಷ್ಟಾಚಾರವು ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಸರ್ಕಾರವು 1988ರ ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತಂದು, ಅಂತಹ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರಿಗೆ ಮರಣದಂಡನೆ ವಿಧಿಸುವ ಬಗ್ಗೆ ಪರಿಗಣಿಸಬೇಕು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us