YS Sharmila Joins Congress: ಆಂಧ್ರ ಸಿಎಂ ಜಗನ್​ ಸಹೋದರಿ ಶರ್ಮಿಳಾ ಕಾಂಗ್ರೆಸ್​ಗೆ ಸೇರ್ಪಡೆ

ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್​ ಜಗನ್​ಮೋಹನ್​ ರೆಡ್ಡಿ ಸಹೋದರಿ ವೈಎಸ್​ ಶರ್ಮಿಳಾ ಇಂದು ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದಾರೆ.

YS Sharmila Joins Congress: ಆಂಧ್ರ ಸಿಎಂ ಜಗನ್​ ಸಹೋದರಿ ಶರ್ಮಿಳಾ ಕಾಂಗ್ರೆಸ್​ಗೆ ಸೇರ್ಪಡೆ
ಶರ್ಮಿಳಾImage Credit source: Scroll.in
Follow us
| Updated By: Digi Tech Desk

Updated on:Feb 14, 2024 | 3:15 PM

ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್​ ಜಗನ್​ಮೋಹನ್​ ರೆಡ್ಡಿ ಸಹೋದರಿ ವೈಎಸ್​ ಶರ್ಮಿಳಾ(YS Sharmila) ಇಂದು ಕಾಂಗ್ರೆಸ್(Congress)​ಗೆ ಸೇರ್ಪಡೆಗೊಂಡಿದ್ದಾರೆ. ಪ್ರಸ್ತುತ ವೈಎಸ್ ಶರ್ಮಿಳಾ ತೆಲಂಗಾಣದಲ್ಲಿ ಸಕ್ರಿಯವಾಗಿರುವ ವೈಎಸ್ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷೆಯಾಗಿದ್ದಾರೆ. 49 ವರ್ಷದ ಶರ್ಮಿಳಾ ಅವರು ಹೈದರಾಬಾದ್‌ನ ಪುಲಿವೆಂದುಲಾದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಮತ್ತು ವಿಜಯಮ್ಮ ದಂಪತಿಗೆ ಜನಿಸಿದರು. ಅವರು ರಾಜಕೀಯ ವಾತಾವರಣದಲ್ಲಿ ಬೆಳೆದರು.

ಶರ್ಮಿಳಾ ಅವರ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರು ಅವಿಭಜಿತ ಆಂಧ್ರದ ಮುಖ್ಯಮಂತ್ರಿಯಾಗಿದ್ದರೆ, ಅವರ ಮಗ ಮತ್ತು ಶರ್ಮಿಳಾ ಅವರ ಹಿರಿಯ ಸಹೋದರ ಜಗನ್ ಮೋಹನ್ ಆಂಧ್ರಪ್ರದೇಶದ ಪ್ರಸ್ತುತ ಮುಖ್ಯಮಂತ್ರಿಯಾಗಿದ್ದಾರೆ.

ಶರ್ಮಿಳಾ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು. ವಾಸ್ತವವಾಗಿ, ಅವರ ಪತಿ ಎಂ.ಅನಿಲ್ ಕುಮಾರ್ ಉದ್ಯಮಿ ಮಾತ್ರವಲ್ಲದೆ ಕ್ರಿಶ್ಚಿಯನ್ ಧರ್ಮ ಪ್ರಚಾರಕರೂ ಹೌದು. ಇಬ್ಬರಿಗೂ ಪ್ರೇಮ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಮತ್ತಷ್ಟು ಓದಿ: ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ಜನವರಿ 4ರಂದು ಕಾಂಗ್ರೆಸ್​ ಸೇರ್ಪಡೆ ಸಾಧ್ಯತೆ

ಶರ್ಮಿಳಾ ತಮ್ಮ ರಾಜಕೀಯ ಪಯಣ ಆರಂಭಿಸಿದ್ದು ಸಂಕಷ್ಟದ ಪರಿಸ್ಥಿತಿಯಲ್ಲಿ, ಮೇ 2012 ರಲ್ಲಿ ಅವರ ಹಿರಿಯ ಸಹೋದರ ಜಗನ್ ಅವರನ್ನು ಸಿಬಿಐ ಬಂಧಿಸಿತ್ತು. ಸಹೋದರ ಜೈಲಿಗೆ ಹೋದ ನಂತರ ಸಹೋದರಿ ಶರ್ಮಿಳಾ ತಾಯಿ ವೈ.ಎಸ್.ವಿಜಯಮ್ಮ ಜೊತೆಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡರು. ಜಗನ್ ಬಂಧನದ ವೇಳೆ ಆಂಧ್ರಪ್ರದೇಶದ 18 ವಿಧಾನಸಭಾ ಸ್ಥಾನಗಳಿಗೆ ಮತ್ತು ಒಂದು ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿತ್ತು. YSRCP 18 ಸ್ಥಾನಗಳಲ್ಲಿ 15 ಮತ್ತು ಏಕೈಕ ಲೋಕಸಭಾ ಸ್ಥಾನವನ್ನು ಗೆದ್ದಿದೆ.

ಶರ್ಮಿಳಾ ಅವರು 2012 ರ ಅಕ್ಟೋಬರ್‌ನಲ್ಲಿ ಕಡಪಾ ಜಿಲ್ಲೆಯ ಇಡುಪುಲಪಾಯದಿಂದ 3,000 ಕಿ.ಮೀ ಪಾದಯಾತ್ರೆ ಆರಂಭಿಸಿದರು . ಅವರು ಅದನ್ನು ಆಗಸ್ಟ್ 2013 ರಲ್ಲಿ ಇಚ್ಚಾಪುರದಲ್ಲಿ ಪೂರ್ಣಗೊಳಿಸಿದರು.

2019ರ ಏಪ್ರಿಲ್‌ನಲ್ಲಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ವಿರುದ್ಧ ಬಸ್ ಯಾತ್ರೆ ನಡೆಸುವ ಮೂಲಕ ಶರ್ಮಿಳಾ ಮತ್ತೊಮ್ಮೆ ಗಮನ ಸೆಳೆದಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ತೆಲಂಗಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶರ್ಮಿಳಾ ಅವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಅಥವಾ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುತ್ತಾರೆ ಎಂಬ ಊಹಾಪೋಹ ಇತ್ತು.

2023ರ ಸೆಪ್ಟೆಂಬರ್‌ನಲ್ಲಿ ಶರ್ಮಿಳಾ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆಗ ವಿಲೀನದ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಕೇಳಿದಾಗ, ಇದು ಅತ್ಯಂತ ಸೌಹಾರ್ದಯುತ ಭೇಟಿಯಾಗಿತ್ತು. ಇದು ತುಂಬಾ ಒಳ್ಳೆಯ ಸಭೆಯಾಗಿತ್ತು. ಉಳಿದಂತೆ, ನೀವು ಕಾದು ನೋಡಿ ಎಂದು ಹಾರಿಕೆ ಉತ್ತರ ನೀಡಿದ್ದರು.

ವರ್ಷದ ಆರಂಭದಲ್ಲಿ, ಶರ್ಮಿಳಾ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ್ದಾರೆ. ಏತನ್ಮಧ್ಯೆ, ವೈಎಸ್ ಶರ್ಮಿಳಾ ಬುಧವಾರ ದೆಹಲಿಗೆ ತೆರಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:10 am, Thu, 4 January 24