ಪಾರ್ಕಿಂಗ್ ವಿಚಾರಕ್ಕೆ ಜಗಳ, ಡ್ರೈವರ್ ತಲೆ ಕತ್ತರಿಸಿದ ವ್ಯಕ್ತಿ, ಪೊಲೀಸರೆದುರೇ ಆರೋಪಿಯನ್ನು ಕೊಂದ ಜನ
ಬಿಹಾರದ ಅರಾರಿಯಾದಲ್ಲಿ ನಡೆದ ಪಾರ್ಕಿಂಗ್ ಜಗಳ ಭೀಕರ ಅವಳಿ ಕೊಲೆಗೆ ಕಾರಣವಾಗಿದೆ. ವಾಹನ ನಿಲ್ಲಿಸುವ ವಿಚಾರಕ್ಕೆ ಚಾಲಕನ ತಲೆ ಕತ್ತರಿಸಿದ ರವಿ ಚೌಹಾಣ್ನನ್ನು ನಂತರ ಆಕ್ರೋಶಗೊಂಡ ಜನಸಮೂಹ ಪೊಲೀಸರ ಎದುರೇ ಹೊಡೆದು ಕೊಂದಿದೆ. ಕಾನೂನು ಸುವ್ಯವಸ್ಥೆ ವೈಫಲ್ಯದ ಪ್ರತಿಬಿಂಬವಾಗಿ ಈ ಘಟನೆ ಇಡೀ ಪ್ರದೇಶವನ್ನು ಆತಂಕಕ್ಕೆ ತಳ್ಳಿದೆ.

ಪಾಟ್ನಾ, ಏಪ್ರಿಲ್ 10: ಕಾನೂನು ಕೈಗೆತ್ತಿಕೊಂಡರೆ ಆಗುವ ಅನಾಹುತಕ್ಕೆ ಬಿಹಾರದ ಅರಾರಿಯಾ ಜಿಲ್ಲೆಯ ಫೋರ್ಬ್ಸ್ಗಂಜ್ ಸಾಕ್ಷಿಯಾಗಿದೆ. ಗುರುವಾರ ಇಲ್ಲಿ ನಡೆದ ಅವಳಿ ಕೊಲೆ(Murder)ಗಳು ಕೇವಲ ಕ್ರೌರ್ಯದ ಪರಾಕಾಷ್ಠೆಯಲ್ಲ, ಬದಲಿಗೆ ಕಾನೂನು ಸುವ್ಯವಸ್ಥೆಯ ವೈಫಲ್ಯದ ಪ್ರತಿಬಿಂಬದಂತಿದೆ. ಘಟನೆಯ ಆರಂಭವಾಗಿದ್ದು ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ. ರಸ್ತೆಬದಿಯ ವ್ಯಾಪಾರಿ ರವಿ ಚೌಹಾಣ್ ಹಾಗೂ ಪಿಕಪ್ ಚಾಲಕ ಅಲಿ ಹುಸೇನ್ ನಡುವೆ ವಾಹನ ನಿಲ್ಲಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ‘ಈ ಸಣ್ಣ ಜಗಳ ವಿಕೋಪಕ್ಕೆ ತಿರುಗಿದಾಗ, ರವಿ ಚೌಹಾಣ್ ಅತ್ಯಂತ ಕ್ರೂರವಾಗಿ ಅಲಿ ಹುಸೇನ್ ಮೇಲೆ ಹಲ್ಲೆ ನಡೆಸಿ, ನೂರಾರು ಜನರ ಮುಂದೆಯೇ ಆತನ ಶಿರಚ್ಛೇದ ಮಾಡಿದ್ದಾನೆ.
ಅಷ್ಟಕ್ಕೇ ನಿಲ್ಲದ ಹಂತಕ, ಕತ್ತರಿಸಿದ ತಲೆಯನ್ನು ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ನಂತರ ಶವವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಘೋರ ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಅಲಿ ಹುಸೇನ್ ಸಂಬಂಧಿಕರು ಮತ್ತು ಸ್ಥಳೀಯರು ಆಕ್ರೋಶಗೊಂಡರು. ಚೌಹಾಣ್ ಅಡಗಿದ್ದ ಜಾಗಕ್ಕೆ ನುಗ್ಗಿದ ಜನಸಮೂಹ, ಆತನನ್ನು ಎಳೆದೊಯ್ದು ಅದೇ ಅಪರಾಧ ನಡೆದ ಸ್ಥಳಕ್ಕೆ ತಂದಿದೆ. ಪೊಲೀಸರು ಸ್ಥಳದಲ್ಲಿದ್ದರೂ ಸಹ, ಕೋಪಗೊಂಡ ಗುಂಪು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಪೊಲೀಸರ ಕಣ್ಣೆದುರೇ ರವಿ ಚೌಹಾಣ್ ಮೇಲೆ ಕೋಲು ಮತ್ತು ಕಬ್ಬಿಣದ ರಾಡ್ಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ರಕ್ತಪಿಪಾಸುಗಳಂತೆ ವರ್ತಿಸಿದ ಗುಂಪು ಆತನನ್ನು ಅಲ್ಲಿಯೇ ಹೊಡೆದು ಕೊಂದಿದೆ.
ಮತ್ತಷ್ಟು ಓದಿ: ಬೆಳಗಾವಿ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೊಕುಳಿ: ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ
ಒಂದೇ ದಿನ ನಡೆದ ಈ ಎರಡು ಭೀಕರ ಕೊಲೆಗಳಿಂದಾಗಿ ಇಡೀ ಪ್ರದೇಶ ಸ್ಮಶಾನ ಸದೃಶವಾಗಿದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಇಡೀ ಪ್ರದೇಶದಲ್ಲಿ ಗಸ್ತು ಚುರುಕುಗೊಳಿಸಲಾಗಿದ್ದು, ಎರಡು ಕಡೆಯ ಹತ್ಯೆಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ. ಒಂದು ಸಣ್ಣ ಪಾರ್ಕಿಂಗ್ ವಿವಾದವು ಎರಡು ಕುಟುಂಬಗಳನ್ನು ಬೀದಿಪಾಲು ಮಾಡಿದ್ದು, ಇಡೀ ಜಿಲ್ಲೆಯನ್ನು ಆತಂಕದ ಸುಳಿಯಲ್ಲಿ ಸಿಲುಕಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




