ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಶಿಕ್ಷಕಿಯ ಮೃತದೇಹ ಸುಟ್ಟ ದುಷ್ಟ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ನಡೆದಿದ್ದು ಭೀಕರ ಕೊಲೆ
ಕಲಬುರಗಿಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕೊಲೆಯಾದ ಮಹಿಳೆ ಶಾಲಾ ಶಿಕ್ಷಕಿಯಾಗಿದ್ದು, ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಪರಿಚಯಸ್ಥ ವ್ಯಕ್ತಿಯಿಂದಲೇ ಶಿಕ್ಷಕಿಯ ಕೊಲೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು, ನಂತರ ಮೃತ ದೇಹವನ್ನು ಆರೋಪಿ ಸುಟ್ಟು ಹಾಕಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಕಲಬುರಗಿ, ಏಪ್ರಿಲ್ 07: ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಕೊಲೆಯಾದ ಮಹಿಳೆ ಶಾಲಾ ಶಿಕ್ಷಕಿ (Teacher) ಜ್ಯೋತಿ ಕಪಾಳೆ ಹಿರೇಮಠ(57) ಎಂಬುದು ಗೊತ್ತಾಗಿದ್ದು, ಕೊಟ್ಟ ಹಣ (Money) ವಾಪಸ್ ಕೇಳಿದ್ದಕ್ಕೆ ಪರಿಚಯಸ್ಥ ವ್ಯಕ್ತಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಶಿಕ್ಷಕಿಯ ಮೃತ ದೇಹವನ್ನು ಸುಟ್ಟು ಹಾಕಿರೋದು ಹೊತ್ತಾಗಿದೆ. ಪ್ರಕರಣ ಸಂಬಂಧ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಜ್ಯೋತಿ ಕಪಾಳೆ ಹಿರೇಮಠ ಕೆಲಸ ಮಾಡುತ್ತಿದ್ದರು. ಹೀಗಾಗಿ ಬೀದರ್ನಲ್ಲಿಯೇ ಮನೆ ಮಾಡಿಕೊಂಡು ಶಾಲೆಗೆ ಹೋಗಿ ಬರುತ್ತಿದ್ದರು. ಆದರೆ ವಾರಕೊಮ್ಮೆ ಕಲಬುರಗಿಗೆ ಬಂದು ವಾಪಸ್ ತೆರಳುವ ಅಭ್ಯಾಸ ಅವರಿಗೆ ಇತ್ತು. ಹೀಗೆ ಬಂದವರು ಕಲಬುರಗಿಯಿಂದ ಬೀದರ್ಗೆ ತೆರಳುವಾಗ ಆರೋಪಿ ಕೊಲೆಗೈದಿದ್ದಾನೆ. ಶಿಕ್ಷಕಿ ಜ್ಯೋತಿಗೆ ಪರಿಚಯಸ್ಥನಾಗಿದ್ದ ಆರೊಪಿ, ಅವರಿಂದ 14 ಲಕ್ಷ ಹಣ ಪಡೆದಿದ್ದ. ಕೊಟ್ಟ ಈ ಹಣವನ್ನು ಜ್ಯೋತಿ ವಾಪಸ್ ಕೇಳಿರುವುದೇ ಕೊಲೆಗೆ ಕಾರಣವಾಗಿದೆ.
ಇದನ್ನೂ ಓದಿ: ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಗೆಳೆಯರು ಸಾವು; ದೇವರಿಗೆ ಹರಕೆ ತೀರಿಸಲು ಹೋಗಿದ್ದ ಮತ್ತಿಬ್ಬರು ನದಿ ಪಾಲು
ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಮಹಿಳೆಯೋರ್ವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ ಹಿನ್ನೆಲೆ ಬೇರೆಡೆ ಕೊಲೆ ಮಾಡಿ ಶವ ತಂದು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಇಡೀ ದೇಹ ಸುಟ್ಟು ಕೇವಲ ಕಾಲು ಮಾತ್ರ ಉಳಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಎಸ್ಪಿ, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ತನಿಖೆಗಿಳಿದಾಗ ಕೊಲೆ ಹಿಂದಿನ ಸತ್ಯ ಬಯಲಾಗಿದೆ. ಸದ್ಯ ಆರೋಪಿ ಆನಂದ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




