ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್​ ಕೋಡ್​, ಮೊಬೈಲ್​ ಬಳಕೆ ನಿಷೇಧ

|

Updated on: Jul 03, 2024 | 10:58 AM

ಇನ್ನುಮುಂದೆ ರಾಮ ಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದ್ದು, ಅರ್ಚಕರೆಲ್ಲರೂ ಒಂದೇ ಬಗೆಯ ಧಿರಿಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಈಗಾಗಲೇ ಭಕ್ತರಿಗೆ ರಾಮ ಮಂದಿರ ಆವರಣದಲ್ಲಿ ಮೊಬೈಲ್​ ಬಳಕೆಯನ್ನು ನಿಷೇಧಿಸಿದ್ದು, ಇನ್ನುಮುಂದೆ ಅರ್ಚಕರೂ ಕೂಡ ಮೊಬೈಲ್​ ಕೊಂಡೊಯ್ಯುವಂತಿಲ್ಲ.

ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್​ ಕೋಡ್​, ಮೊಬೈಲ್​ ಬಳಕೆ ನಿಷೇಧ
ರಾಮ ಮಂದಿರ
Image Credit source: news 9
Follow us on

ಅಯೋಧ್ಯೆಯ ರಾಮ ಮಂದಿರ(Ram Mandir)ಉದ್ಘಾಟನೆಗೊಂಡು ಸುಮಾರು 6 ತಿಂಗಳು ಕಳೆದಿವೆ, ಪ್ರತಿದಿನ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಈಗ ರಾಮಮಂದಿರ ಟ್ರಸ್ಟ್ ರಾಮನ ಗರ್ಭಗುಡಿಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇನ್ನು ರಾಮಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದೆ.

ಈ ಡ್ರೆಸ್​ ಕೋಡ್ ಅರ್ಚಕರಿಗೆ ಅನ್ವಯವಾಗಲಿದೆ, ದೇವಸ್ಥಾನದ ಅರ್ಚಕರು ಇನ್ನುಮುಂದೆ ಒಂದೇ ಬಗೆಯ ಉಡುಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಚಕರು ಚೌಬಂದಿ ಪೇಟ ಹಾಗೂ ಹಳದಿ ಬಣ್ಣದ ಧೋತಿ, ಕುರ್ತಾವನ್ನು ಧರಿಸಲಿದ್ದಾರೆ.

ರಾಮಲಲ್ಲಾ ಆವರಣದಲ್ಲಿ ಕೆಲಸ ಮಾಡುವವರಿಗೆ ಶೀಘ್ರ ಡ್ರೆಸ್​ ಕೋಡ್ ಶೀಘ್ರ ಜಾರಿಯಾಗಲಿದೆ. ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ಮೊಬೈಲ್​ ಫೋನ್ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಮತ್ತಷ್ಟು ಓದಿ: ಕನ್ನಡಿಗರಿಗೆ ಮತ್ತೊಂದು ಗರಿ; ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಹುಪಾಲು ಜವಾಬ್ದಾರಿ ಕರ್ನಾಟಕದವರದ್ದು

ಪ್ರಸ್ತುತ ಭಕ್ತರು ಅನುಸರಿಸುತ್ತಿರುವ ನಿರ್ಬಂಧವು ಇನ್ನು ಮುಂದೆ ಅರ್ಚಕರಿಗೂ ಅನ್ವಯವಾಗಲಿದೆ. 26 ಮಂದಿ ಅರ್ಚಕರು ವಿವಿಧ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ರಚಿಸಿರುವ ಧಾರ್ಮಿಕ ಸಮಿತಿಯು ಹೊಸದಾಗಿ ತರಬೇತಿ ಪಡೆದ 21 ಅರ್ಚಕರನ್ನು ಸೇರಿಸಲು ನಿರ್ಧರಿಸಿದೆ.

ಇದಕ್ಕಾಗಿ ಅರ್ಚಕರಿಗೆ ಗುರುತಿನ ಚೀಟಿಯನ್ನೂ ಟ್ರಸ್ಟ್​ ನೀಡಿದೆ. ಅವರ ನೇಮಕಾತಿ ಪತ್ರಗಳನ್ನು ಅವರ ಆರು ತಿಂಗಳ ತರಬೇತಿ ಪ್ರಮಾಣಪತ್ರಗಳೊಂದಿಗೆ ಜುಲೈ 3 ಅಥವಾ 5ರಂದು ಹಸ್ತಾಂತರಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಅರ್ಚಕರು ತಮ್ಮ ಆ್ಯಂಡ್ರಾಯ್ಡ್​ ಮೊಬೈಲ್​ನೊಂದಿಗೆ ದೇವಸ್ಥಾನಕ್ಕೆ ಬರುವುದನ್ನು ಟ್ರಸ್ಟ್​ ನಿಷೇಧಿಸಿದೆ. ಅಗತ್ಯವಿದ್ದರೆ ಸಂವಹನಕ್ಕಾಗಿ ಕೀಪ್ಯಾಡ್​ ಫೋನ್​ಗಳನ್ನು ಮಾತ್ರ ಬಳಸಬಹುದು. ರಾಮ ಮಂದಿರದಲ್ಲಿ ಬೆಳಗ್ಗೆ ರಾಮಲಲ್ಲಾ ಅವರ ಮಂಗಲ ಆರತಿ, ಶೃಂಗಾರ ಆರತಿ ಮತ್ತು ಶಯನ ಆರತಿ ಜತೆಗೆ ರಾಮರಕ್ಷಾ ಸ್ತೋತ್ರಗಳನ್ನು ಪಠಿಸಲಾಗುತ್ತದೆ.

ಈ ಕ್ರಮಗಳು ಅರ್ಚಕರ ನಡುವೆ ಏಕರೂಪತೆಯನ್ನು ಕಾಯ್ದುಕೊಳ್ಳುವ ಮತ್ತು ಆವರಣದಲ್ಲಿ ಇತರರಿಂದ ಭಿನ್ನವಾಗಿಸುವ ಪ್ರಯತ್ನದ ಭಾಗವಾಗಿದೆ. ಇದಕ್ಕೂ ಮುನ್ನ ದೇವಾಲಯದ ಬಹುತೇಕ ಅರ್ಚಕರು ಕೇಸರಿ ವಸ್ತ್ರ ಧರಿಸಿದ್ದರು. ಕೆಲವು ಪುರೋಹಿತರು ಹಳದಿ ಬಣ್ಣದ ಉಡುಪಿನಲ್ಲಿ ಬರುತ್ತಿದ್ದರು, ಆದರೆ ಇದು ಕಡ್ಡಾಯವಾಗಿರಲಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ