ಸಂಸತ್ ಭವನದಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿ: ನೀವೂ ಭಾಗವಹಿಸಬಹುದು
ಏಪ್ರಿಲ್ 30 ರಂದು ಬಸವೇಶ್ವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಬಾರಿ ನೂತನ ಸಂಸತ್ ಭವನದಲ್ಲಿ ಬಸವ ಜಯಂತಿ ಆಚರಿಸಲಾಗುತ್ತದೆ. ಕೇಂದ್ರ ಸಚಿವ ವಿ. ಸೋಮಣ್ಣ ಅವರು ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.ಸಂಸತ್ ಭವನದಲ್ಲಿ ಬಸವಣ್ಣನವರ ವಚನವನ್ನು ಕೆತ್ತಲಾಗಿದೆ ಎಂಬುದು ವಿಶೇಷ. ಈ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ.

ನವದೆಹಲಿ, ಏಪ್ರಿಲ್ 21: ನಡೆ-ನುಡಿಗಳ ಸಮನ್ವಯ ಜಗದ್ಗುರು ಬಸವೇಶ್ವರರ (Basaveshwar Jayanti) ಜಯಂತಿಯನ್ನು ಈ ಬಾರಿ ಏಪ್ರಿಲ್ 30 ರಂದು ಆಚರಿಸಲಾಗುತ್ತದೆ. ವಿಶ್ವಕ್ಕೆ ಸಂಸತ್ ಪರಿಚಯಿಸಿದ ಬಸವೇಶ್ವರರ ಜಯಂತಿಯನ್ನು (Basava Jayanti) ಮೊದಲ ಬಾರಿಗೆ ನೂತನ ಸಂಸತ್ ಭವನದ ಆವರಣದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಂಸತ್ ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಸಚಿವ ವಿ. ಸೋಮಣ್ಣನವರು, ಸಂಸತ್ ಆವರಣದಲ್ಲಿ ಬಸವ ಜಯಂತಿ ಆಚರಣೆಗೆ ಅವಕಾಶ ಸಿಕ್ಕಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಒಪ್ಪಿಗೆ ಕೊಟ್ಟಿದ್ದಾರೆ. ಬಸವ ಜಯಂತಿ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಬರಲಿದ್ದಾರೆ. ಏಪ್ರಿಲ್ 30ರಂದು ಬಸವ ಜಯಂತಿ ಆಯೋಜಿಸಲಾಗಿದೆ. ಕರ್ನಾಟಕದ ಬಸವ ಅಭಿಮಾನಿಗಳು, ಮಠಾಧಿಪತಿಗಳು ಬರಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಏಪ್ರಿಲ್ 25ರ ಒಳಗಾಗಿ ಮಾಹಿತಿ ನೀಡಬೇಕು. ಕಡ್ಡಾಯವಾಗಿ ಆಧಾರ್ ಕಾರ್ಡ್ ನೀಡಬೇಕು ಎಂದು ಹೇಳಿದರು.
ಸಂಸತ್ ಭವನದೊಳಗೆ ಬಸವಣ್ಣರ ವಚನ
2023ರಲ್ಲಿ ಲೋಕಾರ್ಪಣೆಗೊಂಡ ನೂತನ ಸಂಸತ್ ಭವನ ವೈಭವೋಪೇತವಾಗಿದೆ. ಈ ಸಂಸತ್ ಭವನ ಹಲವು ವಿಶೇಷತೆಗಳಿಂದ ಕೂಡಿದೆ. ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆಯೊಂದಿಗೆ ಭಾರತೀಯ ಪರಂಪರೆ ಸಂಸ್ಕೃತಿಯ ಅನಾವರಣಗೊಂಡಿದ್ದು, ಕನ್ನಡ ಕಂಪು ಪಸರಿಸಿದೆ.
ಸಂಸತ್ ಭವನದ ಗೋಡೆಯ ಮೇಲೆ ಹಂಪಿಯ ಕಲ್ಲಿನ ರಥದವನ್ನು ಕೆತ್ತಲಾಗಿದೆ. ಈ ಕಲ್ಲಿನ ರಥದ ಮೇಲೆ ಬಸವೇಶ್ವರರ ಚಿತ್ರ ಸೇರಿದಂತೆ ಮಹಾನ್ ದಾರ್ಶನಿಕರ ಚಿತ್ರಗಳನ್ನು ಹಾಕಲಾಗಿದೆ. ಇದರ ಪಕ್ಕದಲ್ಲೇ ಗೋಡೆಯ ಮೇಲೆ ಬಸವಣ್ಣನವರ ವಚನ ಬರೆಯಲಾಗಿದೆ.
ಇದನ್ನೂ ಓದಿ: ವೀರಪ್ಪನ್ ಸಹಚರರಿಗೂ ಕನ್ನಡದಲ್ಲಿ ಬಸವಣ್ಣನ ವಚನ ಕಲಿಸಿದ್ದ ಡಾ. ರಾಜ್ಕುಮಾರ್
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ ಎಂದು ಬರೆಯಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Mon, 21 April 25