ನಿಮ್ಮ ಕಾಲಿಗೆ ಬೇಕಾದ್ರೂ ಬೀಳ್ತೀನಿ, ಕಾಮಗಾರಿ ಬೇಗ ಮಾಡಿ ಬಿಡಿ: ಎಂಜಿನಿಯರ್‌ಗೆ ಮನವಿ ಮಾಡಿದ ನಿತೀಶ್ ಕುಮಾರ್

|

Updated on: Jul 10, 2024 | 8:13 PM

ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಸಮಾಧಾನಗೊಂಡ ನಿತೀಶ್ ಕುಮಾರ್ ,ಕೆಲಸವನ್ನು ವೇಗಗೊಳಿಸಲು ಎಂಜಿನಿಯರ್‌ಗಳನ್ನು ಒತ್ತಾಯಿಸಿ ನಿಮ್ಮ ಕಾಲಿಗೆ ಬೀಳ್ತೀನಿ, ಕೆಲಸ ಬೇಗ ಮಾಡಿ ಮುಗಿಸಿ ಎಂದು ಹೇಳಿ ಮುಂದೆ ಬರುತ್ತಿದ್ದಂತೆ ಹಾಗೆ ಮಾಡಬೇಡಿ ಎಂದು ಇಂಜಿನಿಯರ್​​ಗಳು ತಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ದೆಹಲಿ ಜುಲೈ 10: ಜೆಪಿ ಗಂಗಾ ಪಥದ ಉದ್ಘಾಟನೆ ವೇಳೆ ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಇಂಜಿಯರ್​​ಗಳಿಗೆ ಹೇಳಿ ತಮ್ಮ ಕುರ್ಚಿಯಿಂದ ಎದ್ದು ನಿಂತಿದ್ದಾರೆ. ಕಾರ್ಯಕ್ರಮದ ನಡುವೆ ನಿತೀಶ್ ಕುಮಾರ್ ಈ ರೀತಿ ದಿಢೀರನೆ ಎದ್ದು ನಿಂತಿದ್ದು ಕಂಡು ಅಲ್ಲಿ ಹಾಜರಿದ್ದ ಹಲವು ಅಧಿಕಾರಿಗಳು ಕಕ್ಕಾಬಿಕ್ಕಿ ಆಗಿದ್ದಾರೆ. ಇದೇನು ನಡೆಯುತ್ತಿದೆ ಎಂದು ಅವರಿಗೂ ಗೊತ್ತಾಗಲಿಲ್ಲ. ಅಲ್ಲಿ ನಡೆದಿದ್ದು ಏನು ಅಂದ್ರೆ, ಶೀಘ್ರದಲ್ಲೇ ಭಕ್ತಿಯಾರ್‌ಪುರದವರೆಗೆ ಪಥವನ್ನು ವಿಸ್ತರಿಸುವಂತೆ ಸಿಎಂ ಎಂಜಿನಿಯರ್‌ಗೆ ಒತ್ತಾಯಿಸುತ್ತಿದ್ದರು. ತಡವಾದ ಕೆಲಸದ ಬಗ್ಗೆ ಅತೃಪ್ತರಾದ ನಿತೀಶ್ ಎದ್ದು ಮುಂದೆ ಬಂದು, “ಕಹಿಯೇ ತೋ ಆಪ್ಕೆ ಪೇರ್ ಚು ಲೇ, ಲೇಕಿನ್ ಇಸ್ಕಾ ನಿರ್ಮಾಣ್ ತೇಜೀ ಸೆ ಕರೇ..(ಬೇಕಾದರೆ ನಿಮ್ಮ ಪಾದಕ್ಕೆ ನಮಸ್ಕರಿಸುತ್ತೇನೆ, ಆದರೆ ಇದರ ನಿರ್ಮಾಣವನ್ನು ಬೇಗ ಮಾಡಿ ಬಿಡಿ) ಎಂದು ಹೇಳಿದ್ದಾರೆ.

ನಿತೀಶ್ ಮುಂದೆ ಸಾಗಲು ಆರಂಭಿಸಿದಾಗ ಎಂಜಿನಿಯರ್ ಹಿಂದೆ ಸರಿದು ಹಾಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ನಿತೀಶ್ ಕುಮಾರ್ ಅವರ ಈ ವರ್ತನೆ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳಾದ ಪ್ರತ್ಯಯ ಅಮೃತ್, ಕುಮಾರ್ ರವಿ ಮತ್ತಿತರರು ನಿತೀಶ್ ಕುಮಾರ್ ಅವರನ್ನು ತಡೆದಿದ್ದಾರೆ.

ವಿಷಯ ಏನು?

ಪಾಟ್ನಾದ ಮೆರೈನ್ ಡ್ರೈವ್ ಎಂದೂ ಕರೆಯಲ್ಪಡುವ ಜೆಪಿ ಗಂಗಾ ಪಥದ ಮೂರನೇ ಹಂತದ ಉದ್ಘಾಟನೆಗೆ ನಿತೀಶ್ ಕುಮಾರ್ ಪಾಟ್ನಾಗೆ ತೆರಳಿದ್ದರು. ದಿಘಾದಿಂದ ಗೈಘಾಟ್‌ವರೆಗಿನ 12.5-ಕಿಮೀ ವ್ಯಾಪ್ತಿಯು ಕ್ರಿಯಾತ್ಮಕವಾಗಿದೆ ಮತ್ತು ಹೆಚ್ಚುವರಿ 4.5 ಕಿಮೀ ವಿಸ್ತರಣೆಯನ್ನು ನಿರ್ಮಿಸಲಾಗಿದೆ, ಇದನ್ನು ಪಾಟ್ನಾ ಘಾಟ್‌ಗೆ ವಿಸ್ತರಿಸಲಾಗಿದೆ.

ಯೋಜನೆಯ ನಿಧಾನಗತಿಯ ಪ್ರಗತಿಯ ಬಗ್ಗೆ ಅಸಮಾಧಾನಗೊಂಡ ನಿತೀಶ್ ಕುಮಾರ್ ,ಕೆಲಸವನ್ನು ವೇಗಗೊಳಿಸಲು ಎಂಜಿನಿಯರ್‌ಗಳನ್ನು ಒತ್ತಾಯಿಸಿ ನಿಮ್ಮ ಕಾಲಿಗೆ ಬೀಳ್ತೀನಿ, ಕೆಲಸ ಬೇಗ ಮಾಡಿ ಮುಗಿಸಿ ಎಂದು ಹೇಳಿ ಮುಂದೆ ಬರುತ್ತಿದ್ದಂತೆ ಹಾಗೆ ಮಾಡಬೇಡಿ ಎಂದು ಇಂಜಿನಿಯರ್​​ಗಳು ತಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಜತೆ ಉಕ್ರೇನ್, ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಮೋದಿ ಚರ್ಚೆ

ನಿತೀಶ್ ಕುಮಾರ್ ಈ ರೀತಿ ಮಾಡಿದ್ದು ಇದೇ ಮೊದಲಲ್ಲ. ಕೆಲ ಸಮಯದ ಹಿಂದೆ ಕಂದಾಯ ಮತ್ತು ಭೂಸುಧಾರಣಾ ಇಲಾಖೆಯ ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಯೊಬ್ಬರಿಗೆ ಕಾಮಗಾರಿ ಚುರುಕುಗೊಳಿಸುವಂತೆ ಹೇಳಿದ ಅವರು. “ನಾನು ನಿಮ್ಮ ಮುಂದೆ ಕೈ ಮುಗಿಯುತ್ತಿದ್ದೇನೆ ದಯವಿಟ್ಟು ಈ ಕೆಲಸವನ್ನು ವೇಗಗೊಳಿಸಿ” ಎಂದಿದ್ದರು. ಒಂದು ವಾರದ ಹಿಂದೆ, ಕಾರ್ಯಕ್ರಮವೊಂದರಲ್ಲಿ, ನಿತೀಶ್ ಕುಮಾರ್ ಅವರು ತಮ್ಮ ಅಧಿಕಾರಿ ಬ್ರಜೇಶ್ ಮೆಹ್ರೋತ್ರಾ ಅವರ ಪಾದಕ್ಕೆ ನಮಸ್ಕರಿಸುವುದಾಗಿ ಹೇ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Wed, 10 July 24