ಪ್ರೇಮಿ ಜತೆ ಸೇರಿ ಗಂಡನ ಕೊಲೆಗೆ ಸುಪಾರಿ ಕೊಟ್ಟ ಪತ್ನಿ, ಚಲಿಸುವ ರೈಲಿನಲ್ಲೇ ಗುಂಡು ಹಾರಿಸಿ ಹತ್ಯೆ
ಬಿಹಾರದಲ್ಲಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲ್ಲಲು ಪತ್ನಿಯೇ ಪ್ರಿಯಕರನ ಜೊತೆ ಸೇರಿ ಸುಪಾರಿ ಹಂತಕನಿಂದ ಚಲಿಸುವ ರೈಲಿನಲ್ಲಿ ಹತ್ಯೆ ಮಾಡಿಸಿದ ಘಟನೆ ವರದಿಯಾಗಿದೆ. ಪೊಲೀಸರು ಪತ್ನಿ, ಪ್ರಿಯಕರ ಮತ್ತು ಹಂತಕನನ್ನು ಬಂಧಿಸಿದ್ದಾರೆ. ಪತ್ನಿಯ ಕ್ರೌರ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವು ಪುಣೆಯ ಇದೇ ಮಾದರಿಯ ಹತ್ಯಾ ಪ್ರಕರಣವನ್ನು ನೆನಪಿಸಿದೆ.

ಕತಿಹಾರ್, ಜುಲೈ 16:ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲ್ಲಲು ಸ್ವತಃ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಹಂತಕನನ್ನು ನೇಮಿಸಿ, ಚಲಿಸುವ ರೈಲಿನಲ್ಲಿಯೇ ಕೊಲೆ ಮಾಡಿಸಿರುವ ಘಟಮೆ ಬಿಹಾರದ ಕತಿಹಾರ್ನಲ್ಲಿ ನಡೆದಿದೆ. ಈ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮೃತನ ಪತ್ನಿ, ಆಕೆಯ ಪ್ರಿಯಕರ ಹಾಗೂ ಸುಪಾರಿ ಕಿಲ್ಲರ್ ಮೂವರನ್ನೂ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮೃತರನ್ನು ಜಮುಯಿ ಜಿಲ್ಲೆಯ ಬಿಹಾರ ವಿದ್ಯುತ್ ಇಲಾಖೆಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ದೇವ್ ಕುಮಾರ್ ಗುಂಜನ್ ಎಂದು ಗುರುತಿಸಲಾಗಿದೆ.
ರೈಲು ಪ್ರಯಾಣದ ವೇಳೆ ನಡೆದ ಭೀಕರ ಹತ್ಯೆ
ದೇವ್ ಕುಮಾರ್ ಗುಂಜನ್ ಮತ್ತು ಸಮಿತಾ ಕುಮಾರಿ ಅವರಿಗೆ 2018 ರಲ್ಲಿ ವಿವಾಹವಾಗಿದ್ದು, ಐದು ವರ್ಷದ ಮುದ್ದಾದ ಮಗಳಿದ್ದಾಳೆ. ಸಮಿತಾ ಕುಮಾರಿ ಸುಪೌಲ್ನಲ್ಲಿ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಆಗಿ ಸರ್ಕಾರಿ ಹುದ್ದೆಯಲ್ಲಿದ್ದಾಳೆ. ಜೂನ್ 11 ರಂದು ಗುಂಜನ್ ಅವರು ಖಗಾರಿಯಾ ಜಿಲ್ಲೆಯ ಬದ್ಲಾ ಘಾಟ್ ಬಳಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ತೀವ್ರ ರಕ್ತಸ್ರಾವದಿಂದ ಗುಂಜನ್ ಸಾವನ್ನಪ್ಪಿದ್ದರು.
ತನಿಖೆಯಲ್ಲಿ ಬಯಲಾಯ್ತು ಪತ್ನಿಯ ಅಸಲಿ ಮುಖ
ಮೊದಲಿಗೆ ಇದು ಸಾಮಾನ್ಯ ದರೋಡೆ ಅಥವಾ ವೈಷಮ್ಯದ ಕೊಲೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ಕತಿಹಾರ್ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (SP) ಹರಿಶಂಕರ್ ಕುಮಾರ್ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಾಗ ಪತ್ನಿಯ ರಹಸ್ಯ ಬಯಲಾಗಿದೆ.
ಮತ್ತಷ್ಟು ಓದಿ: ಪತ್ನಿಯ ಮುಗಿಸಲು ಮಚ್ಚು ಹಿಡಿದು ಅಟ್ಟಾಡಿಸಿದ ಪಿಎಸ್ಐ ಭೈರಪ್ಪ ಅರೆಸ್ಟ್
ಸಹೋದ್ಯೋಗಿ ಜೊತೆ ಸಂಬಂಧ: ಪತ್ನಿ ಸಮಿತಾ ಕುಮಾರಿಗೆ ನಳಂದದಲ್ಲಿ ಸರ್ಕಾರಿ ತಂತ್ರಜ್ಞನಾಗಿರುವ ಅಜಿತ್ ಕುಮಾರ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಇಬ್ಬರ ಪ್ರೀತಿಗೆ ಪತಿ ಗುಂಜನ್ ದೊಡ್ಡ ಅಡ್ಡಿಯಾಗಿದ್ದರು.
ರಾಜು ಕುಮಾರ್ ಅಲಿಯಾಸ್ ಧೀರಜ್ ಎಂಬ ಅಪರಾಧ ಹಿನ್ನೆಲೆಯುಳ್ಳ ಕೊಲೆಗಾರನಿಗೆ ಸುಪಾರಿ ನೀಡಿದ್ದರು. ಧೀರಜ್ 2025 ರ ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲು ಪಾಲಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ.
ರೈಲಿನಲ್ಲಿ ಸಂಚು: ಗುಂಜನ್ ರೈಲು ಹತ್ತಿದ ತಕ್ಷಣ ಆತನ ಬೆನ್ನಟ್ಟಿದ ಧೀರಜ್, ನಿರ್ಜನ ಜಾಗದಲ್ಲಿ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ.
ವಿಚಾರಣೆಯ ವೇಳೆ ಆರೋಪಿಗಳಾದ ಸಮಿತಾ ಮತ್ತು ಅಜಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೊಲೆಗೆ ಸ್ಕೆಚ್ ಹಾಕಲು ಬಳಸಲಾಗಿದ್ದ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪುಣೆಯ ಕೇಸ್ ನೆನಪಿಸಿದ ಬಿಹಾರದ ಘಟನೆ ಇದೇ ಮಾದರಿಯ ಘಟನೆ ಇತ್ತೀಚೆಗೆ ಪುಣೆಯಲ್ಲೂ ನಡೆದಿತ್ತು. ಅಲ್ಲಿ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ನಿಶ್ಚಿತಾರ್ಥವಾಗಿದ್ದ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಸೇರಿ ಕೊಲೆ ಮಾಡಿದ್ದರು. ಪ್ರೀತಿಯ ಹುಚ್ಚಿನಲ್ಲಿ ಐದು ವರ್ಷದ ಮಗಳನ್ನು ಅನಾಥ ಮಾಡಿ, ಗಂಡನನ್ನೇ ಕೊಲ್ಲಿಸಿದ ಈ ಮಹಿಳೆಯ ಕ್ರೌರ್ಯಕ್ಕೆ ಬಿಹಾರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




