ರಾಜಕೀಯ ಲಾಭಕ್ಕಾಗಿ ಸರ್ದಾರ್ ಪಟೇಲ್ ಹೆಸರು ಬಳಕೆ; ಖರ್ಗೆಗೆ ಬಿಜೆಪಿ ತಿರುಗೇಟು

ಆರ್​ಎಸ್​ಎಸ್​ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಮೇಲೆ ನಿಷೇಧ ಹೇರಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಲೇ ಇದೆ. ಇಂದು ಮತ್ತೆ ಈ ವಿಚಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುನರುಚ್ಛರಿಸಿದ್ದಾರೆ. ಆರ್​ಎಸ್​ಎಸ್​ ನಿಷೇಧದ ಬಗ್ಗೆ ಸರ್ದಾರ್ ವಲ್ಲಭಭಾಯಿ ಕೂಡ ಪತ್ರ ಬರೆದಿದ್ದರು ಎಂದು ಖರ್ಗೆ ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್ ಬೂಟಾಟಿಕೆ ಮತ್ತು ರಾಜಕೀಯ ಲಾಭಕ್ಕಾಗಿ ಪಟೇಲ್ ಅವರ ಪರಂಪರೆಯನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ರಾಜಕೀಯ ಲಾಭಕ್ಕಾಗಿ ಸರ್ದಾರ್ ಪಟೇಲ್ ಹೆಸರು ಬಳಕೆ; ಖರ್ಗೆಗೆ ಬಿಜೆಪಿ ತಿರುಗೇಟು
Rss
Updated By: Digi Tech Desk

Updated on: Oct 31, 2025 | 6:26 PM

ನವದೆಹಲಿ, ಅಕ್ಟೋಬರ್ 31: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಭಾರತದಲ್ಲಿ ನಿಷೇಧಿಸಬೇಕು ಎಂಬ ತಮ್ಮ ದೀರ್ಘಕಾಲದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಕೂಡ ಒಮ್ಮೆ ಸರ್ಕಾರಿ ನೌಕರರು ಆರ್‌ಎಸ್‌ಎಸ್ (RSS) ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲು ಪತ್ರ ಬರೆದಿದ್ದರು ಎಂದು ಅವರು ವಾದಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.

“ಇದು ನನ್ನ ವೈಯಕ್ತಿಕ ಅಭಿಪ್ರಾಯ. ನನ್ನ ಪತ್ರಕಾರ ಆರ್​ಎಸ್​ಎಸ್​ ಅನ್ನು ನಿಷೇಧ ಮಾಡಬೇಕು” ಎಂದು ಖರ್ಗೆ ಹೇಳಿದ್ದರು. “ಭಾರತದಲ್ಲಿ ಹೆಚ್ಚಿನ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಬಿಜೆಪಿ-ಆರ್‌ಎಸ್‌ಎಸ್ ನಂಟುಗಳಿಂದ ಉಂಟಾಗುತ್ತಿವೆ ಎಂದು ಹೇಳಿದ್ದ ಅವರು ಸರ್ದಾರ್ ಪಟೇಲ್ ಅವರ ಅಧಿಕಾರಾವಧಿಯಲ್ಲಿ ವಿಧಿಸಲಾದ ಆರ್​ಎಸ್​ಎಸ್​ ಮೇಲಿನ ನಿಷೇಧವನ್ನು 2024ರಲ್ಲಿ ಬಿಜೆಪಿ ಸರ್ಕಾರ ತೆಗೆದುಹಾಕಿತು. ಮತ್ತೆ ಆ ನಿಷೇಧವನ್ನು ಜಾರಿಗೆ ತರಬೇಕು” ಎಂದು ಖರ್ಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸರ್ದಾರ್ ಪಟೇಲ್ ಮೇಲೆ ಮುಸ್ಲಿಂ ಲೀಗ್​ನಿಂದ ನಡೆದಿತ್ತು 2 ಮಾರಕ ದಾಳಿ; 86 ವರ್ಷದ ಹಿಂದಿನ ಕತೆ ಬಿಚ್ಚಿಟ್ಟ ಬಿಜೆಪಿ

ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಬೂಟಾಟಿಕೆ ಮಾಡುತ್ತಿದೆ ಎಂದು ಆರೋಪಿಸಿದೆ. ಖರ್ಗೆ ಅವರ ಹೇಳಿಕೆಗಳಿಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಸರ್ದಾರ್ ಪಟೇಲ್ ಹೆಸರನ್ನು ಬಳಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಹಲವು ದಶಕಗಳಿಂದ ಸರ್ದಾರ್ ಪಟೇಲ್ ಅವರ ಪರಂಪರೆಯನ್ನು ನಿರ್ಲಕ್ಷಿಸಿತ್ತು. ಈಗ ಆರ್‌ಎಸ್‌ಎಸ್ ಮೇಲೆ ದಾಳಿ ಮಾಡಲು ಸರ್ದಾರ್ ಙಟೇಲ್ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಆರೋಪಿಸಿದ್ದಾರೆ.

“ಐಎನ್‌ಸಿ ಎಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ. ಅದರರ್ಥ ಭಾರತೀಯ ನಾಜಿ ಕಾಂಗ್ರೆಸ್. ಅವರ ಎಲ್ಲಾ ಪಿತೂರಿಗಳ ಹೊರತಾಗಿಯೂ ನ್ಯಾಯಾಲಯವು ಆರ್‌ಎಸ್‌ಎಸ್ ಮೇಲಿನ ನಿಷೇಧವನ್ನು ತೆಗೆದುಹಾಕಿತು. ಆರ್‌ಎಸ್‌ಎಸ್ ರಾಜಕೀಯೇತರ ಸಂಘಟನೆಯಾಗಿದೆ. ಹೀಗಾಗಿ ಸರ್ಕಾರಿ ನೌಕರರು ಅವರ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಆದರೆ ಕಾಂಗ್ರೆಸ್ ಎಷ್ಟು ಅಸಹಿಷ್ಣುತೆಯಿಂದ ಕೂಡಿದೆಯೆಂದರೆ ಅವರು ಪಿಎಫ್‌ಐ, ಎಸ್‌ಡಿಪಿಐ ಮತ್ತು ಎಂಐಎಂನ ಗಲಭೆಕೋರರಿಗೆ ಬೆಂಬಲ ನೀಡುತ್ತಾರೆ. ಆದರೆ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ವಿರುದ್ಧ ವಿಷವನ್ನು ಕಾರುತ್ತಾರೆ” ಎಂದು ಪೂನವಾಲಾ ಹೇಳಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್​ ನಿಷೇಧಕ್ಕೆ ಸರ್ದಾರ್ ಪಟೇಲ್ ಪತ್ರ ಬರೆದಿದ್ದರು; ಮಲ್ಲಿಕಾರ್ಜುನ ಖರ್ಗೆ

ಸರ್ದಾರ್ ಪಟೇಲ್ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲು ಬಯಸಿದ್ದರು. ಆದರೆ ಆಗಿನ ಪ್ರಧಾನಿ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ ಒಂದು ದಿನದ ನಂತರ ಖರ್ಗೆ ಆರ್​ಎಸ್​ಎಸ್​ ಕುರಿತಾದ ಸರ್ದಾರ್ ಪತ್ರದ ಬಗ್ಗೆ ಈ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Fri, 31 October 25