ಪಂಜಾಬ್ನಲ್ಲಿ ಎಸ್ಎಡಿ ಜೊತೆ ಮೈತ್ರಿ ವದಂತಿಗೆ ತೆರೆ: ಎಲ್ಲಾ 117 ಸ್ಥಾನಗಳಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ ಎಂದ ಬಿಎಲ್ ಸಂತೋಷ್
ಪಂಜಾಬ್ನಲ್ಲಿ ಶಿರೋಮಣಿ ಅಕಾಲಿ ದಳದ ಜೊತೆ ಮೈತ್ರಿಯಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಬಿ.ಎಲ್. ಸಂತೋಷ್ ಅವರು ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣಾ ಸಿದ್ಧತೆ, ಆಂತರಿಕ ಸಮನ್ವಯ ಮತ್ತು ಕೇಂದ್ರ ಯೋಜನೆಗಳ ಪ್ರಚಾರಕ್ಕಾಗಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಚಂಡೀಗಢ, ಆಗಸ್ಟ್ 25: ಪಂಜಾಬ್ನಲ್ಲಿ ಶಿರೋಮಣಿ ಅಕಾಲಿ ದಳ (SAD) ಜೊತೆ ಭಾರತೀಯ ಜನತಾ ಪಕ್ಷವು (BJP) ಮತ್ತೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಂಪೂರ್ಣ ತೆರೆ ಎಳೆದಿದ್ದಾರೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲಾ 117 ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸಲಿದೆ ಮತ್ತು ಸ್ವಂತ ಬಲದ ಮೇಲೆ ಗೆದ್ದು ಸರ್ಕಾರ ರಚಿಸಲಿದೆ ಎಂದು ಅವರು ಪಟಿಯಾಲದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ನ ಎರಡು ದಿನಗಳ ಸಾಂಸ್ಥಿಕ ಪ್ರವಾಸದಲ್ಲಿರುವ ಬಿ.ಎಲ್. ಸಂತೋಷ್, ರಾಜ್ಯದ ವಿವಿಧ ವಲಯಗಳಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ.
ಪಂಜಾಬ್ ರಾಜ್ಯವು ರಾಜಕೀಯ ಬದಲಾವಣೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಈ ಬದಲಾವಣೆಯನ್ನು ಸಾಕಾರಗೊಳಿಸಲು ಬಿಜೆಪಿ ಸಜ್ಜಾಗಿದೆ. ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಲಿದೆ ಎಂದು ಪಟಿಯಾಲ ವಲಯ ಸಭೆಯಲ್ಲಿ ಸಂತೋಷ್ ಘೋಷಿಸಿದರು.
ಮತ್ತಷ್ಟು ಓದಿ:
ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟ: ಆ.28ರಂದು ದಾವಣೆಗೆರೆಯಲ್ಲಿ ಬೃಹತ್ ಹೋರಾಟಕ್ಕೆ ಕರೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಸಾಧನೆಗಳನ್ನು ತಳಮಟ್ಟದ ಮತದಾರರಿಗೆ ತಲುಪಿಸಲು ಬೂತ್ ಮಟ್ಟದ ಕಾರ್ಯಕರ್ತರಿಗೆ ಕರೆ ನೀಡಲಾಯಿತು.
ವಲಯವಾರು ಪರಿಶೀಲನೆ: ಪಟಿಯಾಲ ಮತ್ತು ಬಟಿಂಡಾ ಸಭೆಗಳ ಬಳಿಕ, ಲುಧಿಯಾನ, ಜಲಂಧರ್ ಮತ್ತು ಅಮೃತಸರದಲ್ಲಿ ಪ್ರಮುಖ ನಾಯಕರು ಮತ್ತು ಜಿಲ್ಲಾ ಪ್ರತಿನಿಧಿಗಳೊಂದಿಗೆ ಸಾಂಸ್ಥಿಕ ಸಭೆಗಳು ನಡೆಯುತ್ತಿವೆ
ಆಂತರಿಕ ಸಮನ್ವಯ: ಇತ್ತೀಚಿನ ಸಾಂಸ್ಥಿಕ ಪುನರ್ರಚನೆಯಿಂದ ರಾಜ್ಯ ಘಟಕದಲ್ಲಿ ಹಿರಿಯ ಕಾರ್ಯಕರ್ತರಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಶಮನಗೊಳಿಸಿ, ಎಲ್ಲರನ್ನೂ ಒಗ್ಗೂಡಿಸಿ ಚುನಾವಣೆಗೆ ಅಣಿಗೊಳಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆದ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ದಶಕಗಳ ಕಾಲ ಎನ್ಡಿಎ ಮಿತ್ರಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳವು ಸೆಪ್ಟೆಂಬರ್ 2020 ರಲ್ಲಿ ಮೈತ್ರಿ ಕಡಿದುಕೊಂಡಿತ್ತು. ಇತ್ತೀಚೆಗೆ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.
ಹಿರಿಯ ನಾಯಕರಾದ ಹರ್ಸಿಮ್ರತ್ ಕೌರ್ ಬಾದಲ್ ಹಾಗೂ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಹೇಳಿಕೆಗಳು ಮೈತ್ರಿ ಮರುಸ್ಥಾಪನೆಯ ಚರ್ಚೆಯನ್ನು ಹುಟ್ಟುಹಾಕಿದ್ದವು. ಆದರೆ, ಬಿಜೆಪಿ ವರಿಷ್ಠರು ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




