
ಕೊಲ್ಕತ್ತಾ, ಜುಲೈ 15: ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ಅಧಿಕಾರ ನಡೆಸಿದ್ದ ಟಿಎಂಸಿಯಲ್ಲಿ ಇದೀಗ ತೀವ್ರ ಬಿಕ್ಕಟ್ಟು ಎದುರಾಗಿದೆ. ಪಕ್ಷ ಈಗಾಗಲೇ ಎರಡು ಪಾಲಾಗಿದ್ದು, ರೆಬೆಲ್ ನಾಯಕರು ಮಮತಾ ಬ್ಯಾನರ್ಜಿಯನ್ನು (Mamata Banerjee) ದೂರವೇ ಇಟ್ಟಿದ್ದಾರೆ. ತೃಣಮೂಲ ಕಾಂಗ್ರೆಸ್ (TMC) ಹಿರಿಯ ನಾಯಕ ಮದನ್ ಮಿತ್ರ ಅವರು ಬಂಡಾಯ ಬಣ ಸೇರಿದ ಬೆನ್ನಲ್ಲೇ ತೀವ್ರ ಆಕ್ರೋಶ ಹೊರಹಾಕಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬಿಜೆಪಿ ಹಾಗೂ ಪಕ್ಷಾಂತರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಬಿಟ್ಟು ಹೋಗುವವರು ಹೋಗಬಹುದು ಎಂದು ಹೇಳಿರುವ ಅವರು, “ನನಗೆ ಹೃದಯಾಘಾತ ಆಗಲಿ ಎಂದು ಬಿಜೆಪಿ ಬಯಸುತ್ತಿದೆ. ಆದರೆ, ಅವರ ಅಂತ್ಯ ನೋಡುವವರೆಗೂ ನಾನು ಬದುಕಿರುತ್ತೇನೆ” ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಟಿಎಂಸಿ ನಾಯಕ ಮದನ್ ಮಿತ್ರ ಅತೃಪ್ತರ ಬಣ ಸೇರಿದ ನಂತರ ಫೇಸ್ಬುಕ್ ಲೈವ್ ಮೂಲಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶದಿಂದ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ನಾನು ಸುಲಭವಾಗಿ ಸಾಯೋದಿಲ್ಲ:
“ನನಗೆ ಹಾರ್ಟ್ ಅಟ್ಯಾಕ್ ಆಗಬೇಕು ಅಂತ ಬಿಜೆಪಿ ಬಯಸುತ್ತಿದೆ. ಆದರೆ ನಾನು ಬಿಜೆಪಿಯ ರಾಜಕೀಯ ಅಂತ್ಯವನ್ನು ಕಣ್ಣಾರೆ ನೋಡುವವರೆಗೂ ಜೀವಂತವಾಗಿ ಇರುತ್ತೇನೆ. ಈ ದ್ರೋಹಿಗಳ ಪರವಾಗಿ ನಾನು ಬಂಗಾಳದ ಜನತೆಯಲ್ಲಿ ಕ್ಷಮೆ ಯಾಚಿಸುತ್ತೇನೆ. ರಾಜಕೀಯ ಉಳಿವಿಗಾಗಿ ನಾನು ಎಂದಿಗೂ ನನ್ನ ವಿವೇಕವನ್ನು ಮಾರಿಕೊಂಡಿಲ್ಲ” ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ತಾಳ್ಮೆಗೆಟ್ಟು ತನ್ನದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಧೋರಣೆಯಿಂದಲೇ ತಾವು ಪಕ್ಷ ಬಿಟ್ಟಿರುವುದಾಗಿ ಮದನ್ ಮಿತ್ರ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ, ಅಭಿಷೇಕ್ ಅವರನ್ನು ಕೇವಲ ಒಂದು ನೆಪವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. “ಮದನ್ ಮಿತ್ರ ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಜಾರಿ ನಿರ್ದೇಶನಾಲಯ (ED) ಮಂಗಳವಾರ ಸಮನ್ಸ್ ಜಾರಿ ಮಾಡಿದೆ. ಆ ಭಯದಿಂದಲೇ ಅವರು ಪಕ್ಷ ತೊರೆದಿದ್ದಾರೆ. ಇದರಲ್ಲಿ ಅಭಿಷೇಕ್ ಬ್ಯಾನರ್ಜಿ ಅವರದ್ದೇನೂ ತಪ್ಪಿಲ್ಲ” ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
VIDEO | Kolkata, West Bengal: “We have been forcefully defeated in polls; remember ‘bhoy will in’ when they lose power from Centre,” says TMC chief Mamata Banerjee.
(Full video available on PTI Videos – https://t.co/n147TvrpG7)#Kolkata pic.twitter.com/pbDqfdqoQq
— Press Trust of India (@PTI_News) July 15, 2026
ಅಭಿಷೇಕ್ ಬಗ್ಗೆ ಶ್ಲಾಘನೆ:
“ಅಭಿಷೇಕ್ ಹಾಗೂ ಅವರ ಕುಟುಂಬದವರ ಮೇಲೂ ಸರಣಿ ಸಮನ್ಸ್ಗಳನ್ನು ಜಾರಿ ಮಾಡಲಾಗಿತ್ತು. ಅವರು ಮನಸ್ಸು ಮಾಡಿದ್ದರೆ ಕೇಂದ್ರದೊಂದಿಗೆ ರಾಜಿ ಮಾಡಿಕೊಂಡು ನೆಮ್ಮದಿ ಪಡೆಯಬಹುದಿತ್ತು. ಆದರೆ ಅವರು ರಣರಂಗದಿಂದ ಓಡಿಹೋಗಲಿಲ್ಲ, ಸತತವಾಗಿ ಹೋರಾಡುತ್ತಿದ್ದಾರೆ. ಅವರು ಹೋರಾಡುತ್ತಿರುವ ರೀತಿಯನ್ನು ನೋಡಿದರೆ, ಅವರ ಎಲ್ಲಾ ತಪ್ಪುಗಳನ್ನೂ ಕ್ಷಮಿಸಬಹುದಾಗಿದೆ” ಎಂದು ಅಭಿಷೇಕ್ ಪರವಾಗಿ ಮಮತಾ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆ; ಪಕ್ಷದ ಎಲ್ಲ ಹುದ್ದೆಗೂ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ
ಬಿಜೆಪಿಯು ತನಿಖಾ ಸಂಸ್ಥೆಗಳು ಮತ್ತು ಪೊಲೀಸರನ್ನು ದುರುಪಯೋಗಪಡಿಸಿಕೊಂಡು ಟಿಎಂಸಿ ನಾಯಕರನ್ನು ಹೆದರಿಸುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ. “ನಾವು ರಾಜಿ ಮಾಡಿಕೊಳ್ಳದ ಕಾರಣಕ್ಕಾಗಿಯೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ಇಷ್ಟು ರಾಜಕೀಯವಾಗಿ ಹಿಂಸಿಸಲಾಗುತ್ತಿದೆ. ಒಂದು ವೇಳೆ ನಾನು ರಾಜಿ ಮಾಡಿಕೊಂಡಿದ್ದರೆ ನಮಗೆ ಇಷ್ಟೊಂದು ತೊಂದರೆ ಇರುತ್ತಿರಲಿಲ್ಲ. ಯಾರು ಈಗ ಪಕ್ಷಾಂತರ ಮಾಡಿದವರೆಲ್ಲರೂ ಸಾಕಷ್ಟು ಕಪ್ಪುಹಣದ ಲಗೇಜುಗಳನ್ನು ಹೊತ್ತವರೇ. ನಮಗೆ ಇಂದಿಗೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 18 ಸಂಸದರ ಬಲವಿದೆ. ಬಿಜೆಪಿಯ ಕಡೆ ಸೇರಿರುವ ಸಂಸದರು ಕೇವಲ ಪೊಲೀಸರ ಭೀತಿಯಿಂದ ಅಲ್ಲಿಗೆ ಓಡಿ ಹೋಗಿದ್ದಾರೆ” ಎಂದು ದೀದಿ ವ್ಯಂಗ್ಯವಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ