ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆ; ಪಕ್ಷದ ಎಲ್ಲ ಹುದ್ದೆಗೂ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಚುನಾವಣಾ ಸೋಲಿನ ನಂತರ ಪಕ್ಷದ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದ ತೃಣಮೂಲ ಕಾಂಗ್ರೆಸ್ನ ಹಿರಿಯ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ವಿರುದ್ಧದ ಚುನಾವಣಾ ಸೋಲಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅಸ್ತಿತ್ವದಲ್ಲಿದ್ದ ಎಲ್ಲಾ ಪಕ್ಷದ ಸಮಿತಿಗಳನ್ನು ವಿಸರ್ಜಿಸಿ, ಸಂಘಟನೆಯನ್ನು ಪುನರ್ ರಚಿಸಿದ್ದರು. ಈ ವೇಳೆ ಜೂನ್ 3ರಂದು ಕಾಳೀಘಾಟ್ನಲ್ಲಿ ನಡೆದ ಸಭೆಯಲ್ಲಿ ಚಂದ್ರಿಮಾ ಭಟ್ಟಾಚಾರ್ಯ ಅವರು ಸುಬ್ರತಾ ಬಕ್ಷಿ ಅವರ ಬದಲಿಗೆ ಟಿಎಂಸಿ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಕೊಲ್ಕತ್ತಾ, ಜುಲೈ 4: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಆಂತರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಇಂದು ಟಿಎಂಸಿ ಹಿರಿಯ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದು, ಇದು ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಾಳಯಕ್ಕೆ ಮತ್ತೊಂದು ಭಾರಿ ಆಘಾತ ನೀಡಿದೆ. ಮಮತಾ ಬ್ಯಾನರ್ಜಿ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಪಕ್ಷದ ಅಧಿಕೃತ ಸಹಿದಾರರ ಜವಾಬ್ದಾರಿ ಸೇರಿದಂತೆ ಸಂಘಟನೆಯ ಎಲ್ಲಾ ಜವಾಬ್ದಾರಿಗಳಿಂದ ತಾವು ಕೆಳಗಿಳಿಯುತ್ತಿರುವುದಾಗಿ ಭಟ್ಟಾಚಾರ್ಯ ಖಚಿತಪಡಿಸಿದ್ದಾರೆ.
ಚುನಾವಣಾ ಸೋಲಿನ ನಂತರ ಟಿಎಂಸಿ ತೊರೆಯುತ್ತಿರುವ ಪ್ರಮುಖ ನಾಯಕರ ಪಟ್ಟಿ ದೊಡ್ಡದಾಗುತ್ತಲೇ ಇದ್ದು, ಪಕ್ಷದ ಮೇಲಿನ ಮಮತಾ ಬ್ಯಾನರ್ಜಿ ಅವರ ಹಿಡಿತದ ಬಗ್ಗೆ ಈಗ ದೊಡ್ಡ ಪ್ರಶ್ನೆಗಳು ಎದ್ದಿವೆ. ಚಂದ್ರಿಮಾ ಅವರು ಮಮತಾ ಬ್ಯಾನರ್ಜಿಯ ಅತ್ಯಂತ ನಿಕಟವರ್ತಿ ಹಾಗೂ ನಂಬಿಕಸ್ಥ ನಾಯಕಿಯಾಗಿದ್ದರಿಂದ ಈ ರಾಜೀನಾಮೆ ರಾಜಕೀಯವಾಗಿ ಮಮತಾಗೆ ದೊಡ್ಡ ಹೊಡೆತ ನೀಡಿದೆ.
#WATCH | Kolkata, West Bengal: Chandrima Bhattacharya arrives at the State Assembly.
Chandrima Bhattacharya, who was supporting Mamata Banerjee, has resigned from all posts of the TMC. pic.twitter.com/1Oi8Ipc4RZ
— ANI (@ANI) July 4, 2026
ದಮ್ ದಮ್ ಉತ್ತರ ಕ್ಷೇತ್ರದಲ್ಲಿ ಚಂದ್ರಿಮಾಗೆ ಸೋಲು:
ಉತ್ತರ 24 ಪರಗಣ ಜಿಲ್ಲೆಯ ದಮ್ ದಮ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚಂದ್ರಿಮಾ ಭಟ್ಟಾಚಾರ್ಯ ಅನುಭವಿಸಿದ ವೈಯಕ್ತಿಕ ಸೋಲಿನ ಕೆಲವು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಚುನಾವಣೆಯಲ್ಲಿ ಚಂದ್ರಿಮಾ ಅವರು 76,880 ಮತಗಳನ್ನು ಪಡೆದರೂ, ಬಿಜೆಪಿಯ ಸೌರವ್ ಸಿಕ್ದರ್ ವಿರುದ್ಧ 26,404 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಸೋಲು ರಾಜ್ಯದಲ್ಲಿ ಟಿಎಂಸಿಯ ಒಟ್ಟಾರೆ ಕುಸಿತದ ಪ್ರತಿಬಿಂಬವಾಗಿತ್ತು. ಈ ಬಾರಿ ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದ್ದರೆ, ಬಿಜೆಪಿ 207 ಸ್ಥಾನಗಳನ್ನು ಗೆದ್ದು ಭರ್ಜರಿಯಾಗಿ ಅಧಿಕಾರ ಹಿಡಿದಿದೆ.
ಇದನ್ನೂ ಓದಿ: ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ
ಬಂಡಾಯವೆದ್ದ ಶಾಸಕರು ಮತ್ತು ಸಂಸದರ ರಾಜೀನಾಮೆ ಪರ್ವ:
ಚುನಾವಣಾ ಫಲಿತಾಂಶದ ನಂತರ ಟಿಎಂಸಿಯಲ್ಲಿ ಅಭೂತಪೂರ್ವ ಪಕ್ಷಾಂತರದ ಅಲೆ ಎದ್ದಿದೆ. ಮೊದಲು ಶಾಸಕಾಂಗ ಪಕ್ಷದಲ್ಲಿ ಆರಂಭವಾದ ಈ ಬಂಡಾಯದಲ್ಲಿ, ಬಹುಪಾಲು ಟಿಎಂಸಿ ಶಾಸಕರು ರೆಬೆಲ್ ನಾಯಕ ರಿತಬ್ರತಾ ಬ್ಯಾನರ್ಜಿ ಹಿಂದೆ ಸಾಲುಗಟ್ಟಿ ನಿಂತಿದ್ದಾರೆ.
ಬಳಿಕ ಈ ಬಿಕ್ಕಟ್ಟು ಸಂಸತ್ತಿಗೂ ವ್ಯಾಪಿಸಿದ್ದು, ಹಿರಿಯ ರಾಜ್ಯಸಭಾ ಸದಸ್ಯರಾದ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ರಾಜ್ಯಸಭೆ ಹಾಗೂ ಪಕ್ಷ ಎರಡಕ್ಕೂ ರಾಜೀನಾಮೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಕೆಲವು ರಾಜ್ಯಸಭಾ ಸಂಸದರು ಹೊರಹೋಗುವ ಸಾಧ್ಯತೆಯಿದ್ದು, ಸಂಸತ್ತಿನಲ್ಲಿ ಟಿಎಂಸಿಯ ಬಲ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.
ಲೋಕಸಭೆಯಲ್ಲೂ ಬಿರುಕು:
ಲೋಕಸಭೆಯಲ್ಲೂ ತೃಣಮೂಲ ಕಾಂಗ್ರೆಸ್ಗೆ ಭಿನ್ನಮತದ ಬಿಸಿ ತಟ್ಟಿದೆ. ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಸಂಸದರ ಗುಂಪೊಂದು ಲೋಕಸಭೆಯಲ್ಲಿ ತಮಗೆ ಪ್ರತ್ಯೇಕ ಬಣವಾಗಿ ಮಾನ್ಯತೆ ನೀಡಬೇಕೆಂದು ಕೋರಿದ್ದು, ಎನ್ಡಿಎ (NDA) ಒಕ್ಕೂಟಕ್ಕೆ ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ. ಈ ಒಡೆದ ಸಂಸದರ ಗುಂಪಿನಲ್ಲಿ ಸಯೋನಿ ಘೋಷ್, ಯೂಸುಫ್ ಪಠಾಣ್ ಮತ್ತು ಮಾಜಿ ಫುಟ್ಬಾಲ್ ಆಟಗಾರ ಪ್ರಸೂನ್ ಬ್ಯಾನರ್ಜಿ ಕೂಡ ಇದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಭೂಮಿ ದುಂಡಗಿದೆ, ಎಲ್ಲರ ಲೆಕ್ಕ ಚುಕ್ತಾ ಆಗುತ್ತದೆ; ವಿಧಾನಸಭೆಯಲ್ಲಿ ಟಿಎಂಸಿ ವಿರುದ್ಧ ಗುಡುಗಿದ ಸುವೇಂದು ಅಧಿಕಾರಿ
ಪಕ್ಷದ ಸಾಂಘಿಕ ಮಟ್ಟದಲ್ಲೂ ಕುಸಿತ ಮುಂದುವರಿದಿದ್ದು, ಇತ್ತೀಚೆಗಷ್ಟೇ ಮಾಜಿ ಸಚಿವ ಜ್ಯೋತಿಪ್ರಿಯ ಮಲ್ಲಿಕ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ, ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ 100ಕ್ಕೂ ಹೆಚ್ಚು ಕೌನ್ಸಿಲರ್ಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಿರಿಯ ನಾಯಕರು, ಸಂಸದರು, ಶಾಸಕರು ಮತ್ತು ತಳಮಟ್ಟದ ಕಾರ್ಯಕರ್ತರು ಪಕ್ಷದಿಂದ ದೂರ ಸರಿಯುತ್ತಿರುವುದರಿಂದ, ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಜೀವನದಲ್ಲೇ ಅತ್ಯಂತ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮಮತಾ ನೇತೃತ್ವದ ನಾಯಕತ್ವವು ಈ ವಲಸೆಯನ್ನು ತಡೆದು ಪಕ್ಷವನ್ನು ಮತ್ತೆ ಹೇಗೆ ಕಟ್ಟಿ ನಿಲ್ಲಿಸಲಿದೆ ಎಂಬುದರ ಮೇಲೆ ಪಶ್ಚಿಮ ಬಂಗಾಳದ ವಿರೋಧ ಪಕ್ಷಗಳ ರಾಜಕಾರಣದ ಭವಿಷ್ಯ ನಿರ್ಧಾರವಾಗಲಿದೆ.
ಚಂದ್ರಿಮಾ ಭಟ್ಟಾಚಾರ್ಯ ಯಾರು?:
ಚಂದ್ರಿಮಾ ಭಟ್ಟಾಚಾರ್ಯ ಪಶ್ಚಿಮ ಬಂಗಾಳದ ಮಾಜಿ ಸಚಿವರಾಗಿದ್ದು, ಮಮತಾ ಬ್ಯಾನರ್ಜಿ ಅವರ ಆಪ್ತರಲ್ಲಿ ಒಬ್ಬರೆಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿದ್ದರು. ಅವರು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಗಳಲ್ಲಿ ಹಣಕಾಸು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಭೂ ಸುಧಾರಣೆ ಹಾಗೂ ನಿರಾಶ್ರಿತರ ಮತ್ತು ಪುನರ್ವಸತಿ ಇಲಾಖೆಗಳ ಮಾಜಿ ರಾಜ್ಯ ಸಚಿವರಾಗಿದ್ದರು. ಭಟ್ಟಾಚಾರ್ಯ ಅವರು ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದು, 2011ರ ಚುನಾವಣೆಯವರೆಗೆ ವಕೀಲರಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಅವರು ದಮ್ ದಮ್ ಉತ್ತರದ ವಿಧಾನಸಭಾ ಕ್ಷೇತ್ರದಿಂದ ಟಿಎಂಸಿ ಟಿಕೆಟ್ನಲ್ಲಿ ಸ್ಪರ್ಧಿಸಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




