ಚೀನಾ ಯುದ್ಧಕ್ಕೆ ಅಣಿಯಾಗುತ್ತಿದೆ, ಇಲ್ಲಿ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ: ರಾಹುಲ್ ಗಾಂಧಿ

Rahul Gandhi ಚೀನಾ ಬಗ್ಗೆ ಜಾಗರೂಕರಾಗಿರಿ ಎಂದು ನಾನು ಈ ಸರ್ಕಾರಕ್ಕೆ ಹೇಳಿದ್ದೆ. ಚೀನಾದ ರೀತಿಯನ್ನು ನೋಡಿ. ಅವರು ಲಡಾಖ್ ಮತ್ತು ಅರುಣಾಚಲ ಪ್ರದೇಶದ ಕಡೆಯಿಂದ ನುಗ್ಗಲು ಯತ್ನಿಸುತ್ತಿದ್ದಾರೆ. ಆದರೆ ಭಾರತ ಸರ್ಕಾರ ನಿದ್ದೆ ಮಾಡುತ್ತಿದೆ

ಚೀನಾ ಯುದ್ಧಕ್ಕೆ ಅಣಿಯಾಗುತ್ತಿದೆ, ಇಲ್ಲಿ ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Dec 16, 2022 | 6:22 PM

ಚೀನಾ (China) ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವಾಗ ಕೇಂದ್ರ ಸರ್ಕಾರ ಇಲ್ಲಿ ನಿದ್ದೆ ಮಾಡುತ್ತಿದೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಮುನ್ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ(Bharat Jodo Yatra) ಈಗ ರಾಜಸ್ಥಾನದಲ್ಲಿದೆ. ಯಾತ್ರೆಯ ಮಧ್ಯೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಈಗಿನ ಪರಿಸ್ಥಿತಿ ನೋಡಿ ನನಗೆ ಏನು ಅನಿಸುತ್ತಿದೆ ಎಂದರೆ ಚೀನಾ ನುಸುಳುವುದಕ್ಕಾಗಿ ಶ್ರಮಿಸುತ್ತಿಲ್ಲ, ಅವರು ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ. ಇಲ್ಲಿ ಬೆದರಿಕೆ ಇರುವುದು ಸ್ಪಷ್ಟವಾಗಿದ್ದರೂ, ಸರ್ಕಾರ ಅದನ್ನು ಕಡೆಗಣಿಸುತ್ತಿದೆ.ಸರ್ಕಾರ ನಮ್ಮಿಂದ ಸತ್ಯ ಮುಚ್ಚಿಡಲು ಯತ್ನಿಸುತ್ತಿದೆ. ಆದರೆ ಇಂಥಾ ವಿಷಯಗಳನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಚೀನಾ ಬಗ್ಗೆ ಜಾಗರೂಕರಾಗಿರಿ ಎಂದು ನಾನು ಈ ಸರ್ಕಾರಕ್ಕೆ ಹೇಳಿದ್ದೆ. ಚೀನಾದ ರೀತಿಯನ್ನು ನೋಡಿ. ಅವರು ಲಡಾಖ್ ಮತ್ತು ಅರುಣಾಚಲ ಪ್ರದೇಶದ ಕಡೆಯಿಂದ ನುಗ್ಗಲು ಯತ್ನಿಸುತ್ತಿದ್ದಾರೆ. ಆದರೆ ಭಾರತ ಸರ್ಕಾರ ನಿದ್ದೆ ಮಾಡುತ್ತಿದೆ ಎಂದಿದ್ದಾರೆ ರಾಹುಲ್. ತವಾಂಗ್ ವಲಯದ ಯಾಂಗ್ಸ್ಟೆ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಸೈನಿಕರು ಮುಖಾಮುಖಿಯಾದ ಹಿನ್ನಲೆಯಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ. 3300 ಕ್ಕೂ ಹೆಚ್ಚು ಚೀನೀ ಸೈನಿಕರು 17,000 ಅಡಿ ಎತ್ತರದ ಶಿಖರದ ತುದಿಗೆ ಪ್ರವೇಶಿಸಲು ಮತ್ತು ಭಾರತೀಯ ಪೋಸ್ಟ್ ಅನ್ನು ಬೇರುಸಹಿತ ಕಿತ್ತುಹಾಕಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನಗಳನ್ನು ಭಾರತೀಯ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿದವು ಎಂದು ಮೂಲಗಳು ತಿಳಿಸಿವೆ. ಘರ್ಷಣೆಯ ನಂತರ ಎರಡೂ ಕಡೆಯವರು ತಕ್ಷಣವೇ ಪ್ರದೇಶದಿಂದ ಹೊರಬಂದರು.

ಕಳೆದ ಕೆಲವು ದಿನಗಳಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವಿನ ಘರ್ಷಣೆಯ ಬಗ್ಗೆ ಹಲವಾರು ಸಚಿವರು ಕೇಂದ್ರವನ್ನು ಪ್ರಶ್ನಿಸಿದ್ದಾರೆ.

ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆಯಲ್ಲಿ ಸುಮಾರು 2,600 ಕಿಮೀ ಕ್ರಮಿಸಿದ ನಂತರ ಕಾಂಗ್ರೆಸ್ ಶುಕ್ರವಾರ ಭಾರತ್ ಜೋಡೋ ಯಾತ್ರೆಯ 100 ದಿನಗಳನ್ನು ಪೂರೈಸಿದೆ. ರಾಜಸ್ಥಾನವನ್ನು ಕವರ್ ಮಾಡಿದ ನಂತರ, ಯಾತ್ರೆಯು ಡಿಸೆಂಬರ್ 21 ರಂದು ಹರಿಯಾಣವನ್ನು ಪ್ರವೇಶಿಸಲಿದೆ.

ಇದನ್ನೂ ಓದಿ: Cambridge University: 2,500 ವರ್ಷಗಳ ಹಿಂದಿನ ಸಂಸ್ಕೃತದ ಒಗಟು ಬಿಡಿಸಿದ ಭಾರತೀಯ ವಿದ್ಯಾರ್ಥಿ

ಡಿಸೆಂಬರ್ 21 ರಂದು ಹರಿಯಾಣ ಪ್ರವೇಶಿಸುವ ಮೊದಲು ರಾಹುಲ್ ಗಾಂಧಿ ಮತ್ತು ಅವರ ಕಾಂಗ್ರೆಸ್ ನಾಯಕರು ಮತ್ತು ಅನುಯಾಯಿಗಳು 17 ದಿನಗಳ ಕಾಲ ರಾಜಸ್ಥಾನದಲ್ಲಿ ಸುಮಾರು 500 ಕಿ.ಮೀ ಕ್ರಮಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ