ಪರಂದೂರು ರದ್ದಾದ ಬೆನ್ನಲ್ಲೇ ಚೆನ್ನೈ ಬಳಿ ಹೊಸ ವಿಮಾನ ನಿಲ್ದಾಣಕ್ಕೆ ಸ್ಥಳ ಶೋಧ: ತಮಿಳುನಾಡು ಸರ್ಕಾರದ ಮಹತ್ವದ ಹೆಜ್ಜೆ

ಪರಂದೂರಿನಲ್ಲಿ ಉದ್ದೇಶಿತ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ರದ್ದುಗೊಂಡ ನಂತರ, ತಮಿಳುನಾಡು ಸರ್ಕಾರವು ಚೆನ್ನೈ ಸಮೀಪ ಹೊಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಪರ್ಯಾಯ ಸ್ಥಳಗಳನ್ನು ಹುಡುಕುತ್ತಿದೆ. ಭವಿಷ್ಯದ ನಾಗರಿಕ ವಿಮಾನಯಾನ ಮತ್ತು ಸರಕು ಸಾಗಣೆ ಅಗತ್ಯಗಳನ್ನು ಪೂರೈಸಲು ಈ ಹೆಜ್ಜೆ ಇಡಲಾಗಿದೆ. ಸದ್ಯದ ಚೆನ್ನೈ ವಿಮಾನ ನಿಲ್ದಾಣದ ಸಾಮರ್ಥ್ಯ ವೃದ್ಧಿ ಹಾಗೂ ಪರಂದೂರಿಗೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕೂ ಸರ್ಕಾರ ಯೋಜನೆ ರೂಪಿಸಿದೆ.

ಪರಂದೂರು ರದ್ದಾದ ಬೆನ್ನಲ್ಲೇ ಚೆನ್ನೈ ಬಳಿ ಹೊಸ ವಿಮಾನ ನಿಲ್ದಾಣಕ್ಕೆ ಸ್ಥಳ ಶೋಧ: ತಮಿಳುನಾಡು ಸರ್ಕಾರದ ಮಹತ್ವದ ಹೆಜ್ಜೆ
ವಿಜಯ್

Updated on: Aug 25, 2026 | 3:34 PM

ಚೆನ್ನೈ, ಆಗಸ್ಟ್​ 25: ಕಾಂಚೀಪುರಂ ಜಿಲ್ಲೆಯ ಪರಂದೂರಿನಲ್ಲಿ ಉದ್ದೇಶಿಸಲಾಗಿದ್ದ ವಿವಾದಿತ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಟ್ಟ ಬೆನ್ನಲ್ಲೇ, ತಮಿಳುನಾಡು(Tamil Nadu) ಸರ್ಕಾರವು ಚೆನ್ನೈ ನಗರದ ಭವಿಷ್ಯದ ನಾಗರಿಕ ವಿಮಾನಯಾನ ಮತ್ತು ಸರಕು ಸಾಗಣೆ ಅಗತ್ಯಗಳನ್ನು ಪೂರೈಸಲು ಹೊಸ ಪರ್ಯಾಯ ಸ್ಥಳದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸಿದ್ಧತೆ ಆರಂಭಿಸಿದೆ.

ರಾಜ್ಯ ಸರ್ಕಾರದ ಕೈಗಾರಿಕಾ ನೀತಿಯ ಅನ್ವಯ, ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ಕೃಷಿಭೂಮಿ ಮತ್ತು ಜಲಮೂಲಗಳಿಗೆ ಕನಿಷ್ಠ ಹಾನಿಯಾಗುವಂತಹ ನೂತನ ಜಾಗಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಅವುಗಳ ಕಾರ್ಯಸಾಧ್ಯತೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಮೂಲಕ ಮೌಲ್ಯಮಾಪನ ಮಾಡಲಾಗುವುದು.

ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುವವರೆಗೂ ಚೆನ್ನೈನ ಹಾಲಿ ಮೀನಂಬಕ್ಕಂ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಹೆಚ್ಚಿಸಲು ಎಎಐ ಜೊತೆ ಸರ್ಕಾರ ಕೈಜೋಡಿಸಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ ಟರ್ಮಿನಲ್ 3 ವಾರ್ಷಿಕ ಪ್ರಯಾಣಿಕರ ನಿರ್ವಹಣೆಯನ್ನು 35 ಮಿಲಿಯನ್‌ಗೆ ಹೆಚ್ಚಿಸಲಿದೆ. ಜೊತೆಗೆ ವಾಯುವ್ಯ ಭಾಗದಲ್ಲಿ ಪ್ರಸ್ತಾಪಿಸಲಾಗಿರುವ ಟರ್ಮಿನಲ್ 5 ಮೂಲಕ ಒಟ್ಟು ನಿರ್ವಹಣಾ ಸಾಮರ್ಥ್ಯವನ್ನು ವಾರ್ಷಿಕ 55 ಮಿಲಿಯನ್ (5.5 ಕೋಟಿ) ಪ್ರಯಾಣಿಕರಿಗೆ ಹೆಚ್ಚಿಸಲು ಯೋಜಿಸಲಾಗಿದೆ.

ಮತ್ತಷ್ಟು ಓದಿ: “ತಮಿಳುನಾಡು 1 ಕೋಟಿ ಬೇಕಾದ್ರೆ ಕೊಡಲಿ, ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ”: ಸಚಿವ ಶಿವಲಿಂಗೇಗೌಡ

ಹೆದ್ದಾರಿ ಸಂಪರ್ಕ: ವಿಮಾನ ನಿಲ್ದಾಣಕ್ಕೆ ಸುಗಮ ಸಂಚಾರ ಕಲ್ಪಿಸಲು ಹೊಸ ಫ್ಲೈಓವರ್‌ಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗೆ ನೇರ ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ತಮಿಳುನಾಡು ಸರ್ಕಾರ ಅಗತ್ಯ ಭೂಮಿ ಮತ್ತು ಅನುಮತಿ ನೀಡಲಿದೆ.

ಕೈಗಾರಿಕಾ ಪಾರ್ಕ್ ನಿರ್ಮಾಣ: ಪರಂದೂರು ಯೋಜನೆಗಾಗಿ ಈಗಾಗಲೇ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಸುಮಾರು 1,700 ಎಕರೆ ಜಮೀನನ್ನು ವಾಪಸ್ ಪಡೆಯುವುದಿಲ್ಲ ಹಾಗೂ ರೈತರಿಗೆ ನೀಡಲಾದ ಪರಿಹಾರವನ್ನೂ ಹಿಂಪಡೆಯುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಭೂಮಿಯನ್ನು ಕೃಷಿ-ಸಂಸ್ಕರಣಾ ಘಟಕಗಳು, ಪರಿಸರ ಸ್ನೇಹಿ ಉದ್ಯಮಗಳು ಮತ್ತು ಸಿಪ್ಕಾಟ್ ಕೈಗಾರಿಕಾ ಎಸ್ಟೇಟ್ ನಿರ್ಮಾಣಕ್ಕೆ ಬಳಸಿಕೊಳ್ಳಲು ಕೈಗಾರಿಕಾ ಇಲಾಖೆ ನೀಲಿ ನಕ್ಷೆ ಸಿದ್ಧಪಡಿಸುತ್ತಿದೆ.

ಪರಂದೂರು ಪ್ರಾಜೆಕ್ಟ್ ಹಿನ್ನೆಲೆ: ಸುಮಾರು 5,300 ಎಕರೆ ವಿಸ್ತೀರ್ಣದಲ್ಲಿ 20 ಸಾವಿರ ಕೋಟಿಗೂ ಅಧಿಕ ವೆಚ್ಚದಲ್ಲಿ 13 ಹಳ್ಳಿಗಳನ್ನು ಒಳಗೊಂಡು ಈ ಯೋಜನೆ ರೂಪಿಸಲಾಗಿತ್ತು. ಆದರೆ ನೂರಾರು ಎಕರೆ ಕೃಷಿ ಭೂಮಿ ಹಾಗೂ ಕೆರೆ-ಕುಂಟೆಗಳು ನಾಶವಾಗುತ್ತವೆ ಎಂದು ಸ್ಥಳೀಯರು ಸತತ ಪ್ರತಿಭಟನೆ ನಡೆಸಿದ್ದರು.

ದಕ್ಷಿಣ ಭಾರತದ ಏವಿಯೇಷನ್ ಪೈಪೋಟಿ: ಬೆಂಗಳೂರಿನ ಕೆಂಪೇಗೌಡ (KIA) ಮತ್ತು ಹೈದರಾಬಾದ್‌ನ ರಾಜೀವ್ ಗಾಂಧಿ (RGIA) ವಿಮಾನ ನಿಲ್ದಾಣಗಳು ವೇಗವಾಗಿ ವಿಸ್ತರಣೆಯಾಗುತ್ತಿರುವ ಹೊತ್ತಿನಲ್ಲಿ, ಚೆನ್ನೈಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವುದು ತಮಿಳುನಾಡಿನ ಆಟೋಮೊಬೈಲ್ ಮತ್ತು ಐಟಿ ರಫ್ತು ಕ್ಷೇತ್ರಕ್ಕೆ ಅತ್ಯಂತ ಅನಿವಾರ್ಯವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us