AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಗಳಲ್ಲಿ ಗಾಯತ್ರಿ ಮಂತ್ರ, ಸರಸ್ವತಿ ವಂದನೆ ನಿಷೇಧಿಸಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು

ಛತ್ತೀಸ್‌ಗಢ ಹೈಕೋರ್ಟ್ ಶಾಲೆಗಳಲ್ಲಿ ಗಾಯತ್ರಿ ಮಂತ್ರ, ಸರಸ್ವತಿ ವಂದನೆ ನಿಷೇಧಿಸುವ ಅರ್ಜಿಯನ್ನು ವಜಾಗೊಳಿಸಿದೆ. ಯಾವುದೇ ನಿರ್ದಿಷ್ಟ ಧರ್ಮವನ್ನು ಹೇರದ ಹೊರತು, ಭಾರತೀಯ ಸಂಸ್ಕೃತಿ ಹಾಗೂ ನೈತಿಕ ಮೌಲ್ಯಗಳ ಬೋಧನೆ ಸಂವಿಧಾನ ವಿರೋಧಿಯಲ್ಲ. ಎನ್ಇಪಿ 2020 ರ ಭಾಗವಾಗಿ, ಜ್ಞಾನ ಮತ್ತು ಏಕಾಗ್ರತೆ ಹೆಚ್ಚಿಸುವ ಈ ಆಚರಣೆಗಳು ಕಡ್ಡಾಯವಲ್ಲ, ವೈಯಕ್ತಿಕ ನಂಬಿಕೆಗೆ ಧಕ್ಕೆ ಇಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಶಾಲೆಗಳಲ್ಲಿ ಗಾಯತ್ರಿ ಮಂತ್ರ, ಸರಸ್ವತಿ ವಂದನೆ ನಿಷೇಧಿಸಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು
ಹೈಕೋರ್ಟ್​
ನಯನಾ ರಾಜೀವ್
|

Updated on: Jul 09, 2026 | 9:03 AM

Share

ಬಿಲಾಸ್‌ಪುರ, ಜುಲೈ 09: ಸರ್ಕಾರಿ ಶಾಲೆಗಳ ಬೆಳಗಿನ ಪ್ರಾರ್ಥನೆಯಲ್ಲಿ ಗಾಯತ್ರಿ ಮಂತ್ರ(Gayatri Mantra), ಸರಸ್ವತಿ ವಂದನೆ ಮತ್ತು ಶಾಂತಿ ಮಂತ್ರಗಳನ್ನು ಪಠಿಸುವುದನ್ನು ತಡೆಯಬೇಕು ಮತ್ತು ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅಜರ್ಜಯನ್ನು ಛತ್ತೀಸ್​ಗಢ ಹೈಕೋರ್ಟ್​ ವಜಾಗೊಳಿಸಿದೆ. ಯಾವುದೇ ನಿರ್ದಿಷ್ಟ ಧಾರ್ಮಿಕ ಸಿದ್ಧಾಂತವನ್ನು ಬಲವಂತವಾಗಿ ಹೇರದ ಹೊರತು, ಶಾಲೆಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವುದನ್ನು ಸಂವಿಧಾನವು ನಿಷೇಧಿಸುವುದಿಲ್ಲ ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ವಿವಾದವೇನು, ಆದೇಶದಲ್ಲಿ ಏನಿದೆ?

ಛತ್ತೀಸ್​ಗಢ ಶಾಲಾ ಶಿಕ್ಷಣ ಇಲಾಖೆಯು ಜೂನ್ 12 ರಂದು ಸುತ್ತೋಲೆಯೊಂದನ್ನು ಹೊರಡಿಸಿತ್ತು. ಅದರ ಪ್ರಕಾರ, 2026-27ನೇ ಸಾಲಿನಿಂದ ಎಲ್ಲಾ ಸರ್ಕಾರಿ ಶಾಲೆಗಳ ಬೆಳಗಿನ ಪ್ರಾರ್ಥನೆ ವೇಳೆ ರಾಷ್ಟ್ರಗೀತೆ, ರಾಷ್ಟ್ರಗೀತೆ, ಸರಸ್ವತಿ ವಂದನೆ, ಗುರು ಮಂತ್ರ ಹಾಗೂ ದಿನದ ಕೊನೆಯಲ್ಲಿ ಗಾಯತ್ರಿ ಮಂತ್ರ ಮತ್ತು ಶಾಂತಿ ಮಂತ್ರಗಳನ್ನು ಪಠಿಸಬೇಕು ಎಂದು ಸೂಚಿಸಲಾಗಿತ್ತು.

ಇದನ್ನು ವಿರೋಧಿಸಿ ಕೆಲವು ವ್ಯಕ್ತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ‘‘ಇದು ಶಿಕ್ಷಣದ ಕೇಸರಿಕರಣ ಮತ್ತು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ಸರ್ಕಾರಿ ಅನುದಾನ ಪಡೆಯುವ ಶಾಲೆಗಳಲ್ಲಿ ಇಂತಹ ಧಾರ್ಮಿಕ ಮಂತ್ರಗಳನ್ನು ಕಡ್ಡಾಯಗೊಳಿಸುವುದರಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ’’ ಎಂದು ಅರ್ಜಿದಾರರ ಪರ ವಕೀಲ ಆಮಿರ್ ಖಾನ್ ವಾದಿಸಿದ್ದರು.

ಮತ್ತಷ್ಟು ಓದಿ: ಅತ್ಯಂತ ಪ್ರಬಲ ಮಂತ್ರ ಯಾವುದು ಗೊತ್ತಾ? ಅದರ ವಿಶೇಷ ಇಲ್ಲಿದೆ ನೋಡಿ

ಹೈಕೋರ್ಟ್‌ನಲ್ಲಿ ಸರ್ಕಾರದ ಪ್ರತಿವಾದವೇನು?

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಭಾಗ: ಈ ಆದೇಶವು ಯಾವುದೇ ಧರ್ಮವನ್ನು ಪ್ರಚಾರ ಮಾಡುವ ಉದ್ದೇಶ ಹೊಂದಿಲ್ಲ. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸದುದ್ದೇಶ ಹೊಂದಿದೆ.

ಜ್ಞಾನ ಮತ್ತು ಏಕಾಗ್ರತೆಯ ಸಂಕೇತ: ಗಾಯತ್ರಿ ಮಂತ್ರವು ಕೇವಲ ಪೂಜೆಯಲ್ಲ, ಅದು ಜ್ಞಾನ, ಬುದ್ಧಿವಂತಿಕೆ ಮತ್ತು ಸಕಾರಾತ್ಮಕ ಯೋಚನೆಗಳನ್ನು ನೀಡುವ ಮಂತ್ರವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಯಾರ ಮೇಲೂ ಬಲವಂತವಿಲ್ಲ: ಸರ್ಕಾರದ ಆದೇಶದಲ್ಲಿರುವ ಕಡ್ಡಾಯ ಎಂಬ ಪದವು ಶಾಲೆಗಳಲ್ಲಿ ಶಿಸ್ತು ಕಾಪಾಡಲು ಮಾತ್ರ ಬಳಸಲಾಗಿದೆಯೇ ಹೊರತು ಯಾರ ಮೇಲೂ ಧರ್ಮ ಹೇರಲು ಅಲ್ಲ.

ವಿದ್ಯಾರ್ಥಿಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ನ್ಯಾಯಮೂರ್ತಿ ಅಮಿತೇಂದ್ರ ಕಿಶೋರ್ ಪ್ರಸಾದ್ ಅವರ ಏಕಸದಸ್ಯ ಪೀಠವು ಜುಲೈ 2 ರಂದು ಈ ಮಹತ್ವದ ತೀರ್ಪನ್ನು ನೀಡಿದ್ದು, ಅದನ್ನು ಇತ್ತೀಚೆಗೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಯಾವುದೇ ಬಲವಂತದ ಕ್ರಮವಿಲ್ಲ: ಈ ಮಂತ್ರಗಳನ್ನು ಪಠಿಸಲು ನಿರಾಕರಿಸುವ ಅಥವಾ ತಮ್ಮ ನಂಬಿಕೆಗೆ ವಿರುದ್ಧ ಎಂದು ಭಾವಿಸುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ದಂಡ ಅಥವಾ ಶಿಸ್ತು ಕ್ರಮ ಜರುಗಿಸುವ ಕಡ್ಡಾಯ ನಿಯಮ ಈ ಆದೇಶದಲ್ಲಿ ಎಲ್ಲೂ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ದೂರುಗಳೇ ಬಂದಿಲ್ಲ: ಈ ನಿಯಮ ಈಗಾಗಲೇ ಶಾಲೆಗಳಲ್ಲಿ ಜಾರಿಯಲ್ಲಿದ್ದು, ಇಷ್ಟು ದಿನ ಯಾವುದೇ ವಿದ್ಯಾರ್ಥಿ, ಪೋಷಕರು ಅಥವಾ ಶಿಕ್ಷಕರಿಂದ ಈ ಬಗ್ಗೆ ಯಾವುದೇ ತಕರಾರು ಅಥವಾ ದೂರುಗಳು ಬಂದಿಲ್ಲ ಎಂದು ಕೋರ್ಟ್ ಗಮನಿಸಿದೆ.

ಅಕಾಲಿಕ ಅರ್ಜಿ: ಅರ್ಜಿದಾರರು ಕೇವಲ ಊಹಾಪೋಹಗಳ ಆಧಾರದ ಮೇಲೆ, ರಾಜಕೀಯ ಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಯಾರಿಗೂ ನೇರ ಹಾನಿಯಾಗಿಲ್ಲ ಎಂದು ಹೇಳಿದ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.

ಈ ಹಿಂದೆಯೂ ಮಧ್ಯಪ್ರದೇಶ ಮತ್ತು ಹರಿಯಾಣದ ಶಾಲೆಗಳಲ್ಲಿ ಗೀತಾ ಪಠಣ ಹಾಗೂ ಯೋಗವನ್ನು ಕಡ್ಡಾಯಗೊಳಿಸಿದಾಗ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ಅವುಗಳನ್ನು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ನೈತಿಕ ಮತ್ತು ದೈಹಿಕ ಶಿಕ್ಷಣ ಎಂದು ಪರಿಗಣಿಸಿ ಮಾನ್ಯ ಮಾಡಿದ್ದವು. ಈಗ ಛತ್ತೀಸ್‌ಗಢ ಹೈಕೋರ್ಟ್ ಕೂಡ ಅದೇ ಮಾದರಿಯ ತೀರ್ಪು ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us