ಮಾತಿಗೆ ತಪ್ಪಿದ ಕೇಂದ್ರ ಸರ್ಕಾರ; ಸೆ. 5ರಂದು ದೆಹಲಿಯಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಘೋಷಿಸಿದ ಸಿಜೆಪಿ

ಜುಲೈ 25ರಂದು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP), ಸೆಪ್ಟೆಂಬರ್ 5ರಂದು ಮತ್ತೊಮ್ಮೆ ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಕರೆ ನೀಡಿದೆ. ಇಂದು ಮಧ್ಯಾಹ್ನ ನಡೆದ ಸಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಸೆಪ್ಟೆಂಬರ್ 5ರಂದು ನಡೆಯಲಿರುವ ಶಾಂತಿಯುತ ಮೆರವಣಿಗೆಯು ಇಂಡಿಯಾ ಗೇಟ್‌ನಿಂದ ಆರಂಭವಾಗಿ ನವದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಸಾಗಲಿದೆ ಎಂದು ಸಿಜೆಪಿ ತಿಳಿಸಿದೆ.

ಮಾತಿಗೆ ತಪ್ಪಿದ ಕೇಂದ್ರ ಸರ್ಕಾರ; ಸೆ. 5ರಂದು ದೆಹಲಿಯಲ್ಲಿ ಮತ್ತೆ ಬೃಹತ್ ಪ್ರತಿಭಟನೆ ಘೋಷಿಸಿದ ಸಿಜೆಪಿ
CJP Leaders
Image Credit source: PTI

Updated on: Aug 24, 2026 | 8:03 PM

ನವದೆಹಲಿ, ಆಗಸ್ಟ್ 24: ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭವಾಗಿದ್ದ ಪ್ರತಿಭಟನೆಯು ಇಡೀ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡಿದ ಒಂದು ತಿಂಗಳ ನಂತರ ಕಾಕ್ರೋಚ್ ಜನತಾ ಪಾರ್ಟಿ (CJP) ಇಂದು ಯುವಜನರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಘೋಷಿಸಿದೆ. ಜುಲೈ 25ರಂದು ವಿದ್ಯಾರ್ಥಿ ಚಳವಳಿಯನ್ನು ಹಿಂಪಡೆಯಲು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಸಿಜೆಪಿ ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಮೆರವಣಿಗೆ ನಡೆಸುವುದಾಗಿ ತಿಳಿಸಿದೆ.

“ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್‌ನಿಂದ ಹೊಸ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆಯನ್ನು ನಾವು ಘೋಷಿಸುತ್ತಿದ್ದೇವೆ. ಮೃತ ನೀಟ್ ಸಂತ್ರಸ್ತರ ಕುಟುಂಬಗಳು ಮತ್ತು ಪೊಲೀಸ್ ದೌರ್ಜನ್ಯಕ್ಕೊಳಗಾದವರು ಇದನ್ನು ಮುನ್ನಡೆಸಲಿದ್ದು, ದೇಶಾದ್ಯಂತದ ವಿದ್ಯಾರ್ಥಿಗಳು ಮತ್ತು ಯುವಕರು ಭಾಗವಹಿಸಲಿದ್ದಾರೆ” ಎಂದು ಸಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಜಂತರ್ ಮಂತರ್ ಸೀಸನ್ 2 ಶೀಘ್ರದಲ್ಲೇ ಆರಂಭ; ಹೊಸ ಪ್ರತಿಭಟನೆಯ ಸುಳಿವು ನೀಡಿದ ಸಿಜೆಪಿ ನಾಯಕ ದಿಪ್ಕೆ

ಈ ದೇಶದ ಯುವ ಪೀಳಿಗೆ, ‘ಜೆನ್-ಜಿ’ (Gen Z) ಮತ್ತು ಈಗಾಗಲೇ ತಮ್ಮ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರವು ವಿಶ್ವಾಸದ್ರೋಹ ಎಸಗಲು ನಿರ್ಧರಿಸಿರುವಂತೆ ತೋರುತ್ತಿರುವುದರಿಂದ ನಾವು ಮತ್ತೆ ರಸ್ತೆಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಸಿಜೆಪಿ ಆರೋಪಿಸಿದೆ. ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸುವ ಬದಲಿಗೆ ಸರ್ಕಾರವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿದೆ ಎಂದು ಸಿಜೆಪಿ ಆರೋಪಿಸಿದೆ.


ದೇಶಾದ್ಯಂತ ದಾಖಲಾಗಿರುವ ಎಫ್‌ಐಆರ್‌ಗಳ (FIR) ಪಟ್ಟಿಯನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಕ್ಕೂ ಸರ್ಕಾರ ಸಮ್ಮತಿಸಿಲ್ಲ. ಈ ಪಟ್ಟಿ ಸಿಕ್ಕಿದ್ದರೆ ಸುಪ್ರೀಂ ಕೋರ್ಟ್ ಒಂದೇ ಹಂತದಲ್ಲಿ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಸಾಧ್ಯವಾಗುತ್ತಿತ್ತು ಎಂದು ಸಿಜೆಪಿ ವಿವರಿಸಿದೆ. “ಆಗಸ್ಟ್ 18ರಂದು, ದೇಶಾದ್ಯಂತ ದಾಖಲಾಗಿರುವ ಎಫ್‌ಐಆರ್‌ಗಳ ಪಟ್ಟಿಯನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಇದರಿಂದ ಕೋರ್ಟ್ ಒಂದೇ ಬಾರಿಗೆ ಅವುಗಳನ್ನು ರದ್ದುಗೊಳಿಸಲು ಪರಿಶೀಲಿಸಬಹುದಾಗಿತ್ತು. ಆದರೆ, ಸರ್ಕಾರ ಇದಕ್ಕೆ ಸ್ಪಷ್ಟ ಬದ್ಧತೆ ತೋರಿಸಲು ನಿರಾಕರಿಸಿದೆ. ಅಲ್ಲದೆ, ಸಿಜೆಪಿಗೆ ನೀಡಬೇಕಾಗಿರುವ ಲಿಖಿತ ಭರವಸೆಯೂ ಇನ್ನು ಬಾಕಿಯಿದೆ” ಎಂದು ಸಿಜೆಪಿ ನಾಯಕರು ಟೀಕಿಸಿದ್ದಾರೆ.


ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ವೇಳೆ ಸಂಘರ್ಷ ಪ್ರಕರಣ: ತನಿಖೆಗಾಗಿ ಉನ್ನತ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಧಾರ

ಘಟನೆಯ ಹಿನ್ನೆಲೆ:

ಪರೀಕ್ಷಾ ವ್ಯವಸ್ಥೆಯಲ್ಲಾಗುತ್ತಿರುವ ಅಕ್ರಮಗಳು ಮತ್ತು ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಜೂನ್ 20ರಂದು ಜಂತರ್ ಮಂತರ್‌ನಲ್ಲಿ ಸಿಜೆಪಿಯ ಹೋರಾಟ ಪ್ರಾರಂಭವಾಗಿತ್ತು. ಬಳಿಕ ಈ ಹೋರಾಟ ದೇಶದಾದ್ಯಂತ ವ್ಯಾಪಿಸಿತು. ಜುಲೈ 20ರಂದು ಸಂಸತ್ತಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಪರಿಸ್ಥಿತಿ ಗಂಭೀರವಾಗಿ, ಹಲವು ಪ್ರತಿಭಟನಾಕಾರರು ಗಾಯಗೊಂಡಿದ್ದರು. ಬಳಿಕ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸಿಜೆಪಿ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಕೇಂದ್ರ ಸರ್ಕಾರವು ಅವರ ಇತರ ಬೇಡಿಕೆಗಳಿಗೆ ಒಪ್ಪಿಕೊಂಡಿದ್ದರಿಂದ ಜುಲೈ 25ರಂದು ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು. ನೀಟ್ ಪರೀಕ್ಷೆಯಿಂದಾಗಿ ಆತ್ಮಹತ್ಯೆಗೆ ಶರಣಾದ ಅಭ್ಯರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವುದು ಮತ್ತು ಪ್ರತಿಭಟನಾಕಾರರ ಮೇಲಿನ ಎಫ್‌ಐಆರ್ (FIR) ಹಿಂಪಡೆಯುವುದು ಈ ಬೇಡಿಕೆಗಳಲ್ಲಿ ಸೇರಿದ್ದವು. ಅಲ್ಲದೆ, ಪರೀಕ್ಷಾ ಸುಧಾರಣೆಗಳ ಕುರಿತು ಚರ್ಚೆಯನ್ನು ಮುಂದುವರಿಸಲು ಎರಡೂ ಕಡೆಯವರು ಸಮ್ಮತಿಸಿದ್ದರು. ಆದರೆ, ಎಫ್‌ಐಆರ್ ಹಿಂಪಡೆಯುವುದು, ಪ್ರತಿಭಟನಾಕಾರರ ವಿರುದ್ಧ ಶಿಕ್ಷಾರ್ಹ ಕ್ರಮಗಳಿಂದ ರಕ್ಷಣೆ ನೀಡುವುದು ಮತ್ತು ಲಿಖಿತ ಭರವಸೆ ನೀಡುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ಜುಲೈ 25ರ ಒಪ್ಪಂದವನ್ನು ಗೌರವಿಸಿಲ್ಲ ಎಂದು ಸಿಜೆಪಿ ಆರೋಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us