Pahalgam Attack: ಪಹಲ್ಗಾಮ್ ದಾಳಿ ಸಂಬಂಧ ಸರ್ವಪಕ್ಷ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಇದೀಗ ಭಾರತ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧ ಕೆಲ ಮಹತ್ವದ ತೀರ್ಮಾನಗಳನ್ನ ತೆಗೆದುಕೊಂಡಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಮಾಯಕರ ಜೀವ ತೆಗೆದ ಪಾಪಿ ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೊಡೆದು ಹಾಕುವ ಪ್ರತಿಜ್ಞೆ ಕೂಡ ಮಾಡಿದ್ದಾರೆ. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಸಭೆಯಲ್ಲಿ ಏನೇನು ಆಯ್ತು ಎನ್ನುವ ವಿವರ ಇಲ್ಲಿದೆ.

Pahalgam Attack: ಪಹಲ್ಗಾಮ್ ದಾಳಿ ಸಂಬಂಧ ಸರ್ವಪಕ್ಷ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ವಿವರ
All Party Meeting

Updated on: Apr 24, 2025 | 9:07 PM

ನವದೆಹಲಿ, ಏಪ್ರಿಲ್ 24): ಕಾಶ್ಮೀರದ ಪಹಲ್ಗಾಮ್​ನಲ್ಲಿ (Pahalgam Attack) ನಡೆದ ಉಗ್ರರ ದಾಳಿಯಿಂದ 26 ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಸಹ ಸಜ್ಜಾಗಿದ್ದು, ಈಗಾಗಲೇ ಪಾಕಿಸ್ತಾನ ವಿರುದ್ಧ ಕೆಲ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ. ಇನ್ನು ಉಗ್ರರ ದಾಳಿ ಸಂಬಂಧ ಮುಂದಿನ ನಡೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಇಂದು (ಏಪ್ರಿಲ್ 24) ಸಂಸತ್ ಭವನದಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದ್ದು, ಸಭೆಯಲ್ಲಿ ಕೆಲ ಮಹತ್ವದ ಅಂಶಗಳನ್ನು ಚರ್ಚಿಸಲಾಗಿದೆ. ಉಗ್ರರ ಕೃತ್ಯವನ್ನ ಖಂಡಿಸಲಾಗಿದೆ. ಅಲ್ಲದೇ ಉಗ್ರರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡರೂ ತಮ್ಮ ಬೆಂಬಲವಿದೆ ಎಂದು ವಿರೋಧ ಪಕ್ಷಗಳ ನಾಯಕರು ತಿಳಿಸಿದ್ದಾರೆ.

ಸರ್ವ ಪಕ್ಷಗಳ ಸಭೆ ಬಳಿಕ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸರ್ವಪಕ್ಷಸಭೆಯಲ್ಲಿ ಉಗ್ರರ ದುಷ್ಕೃತ್ಯವನ್ನು ಖಂಡಿಸಿದ್ದೇವೆ. ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಬೆಂಬಲವಿದೆ. ಭಯೋತ್ಪಾದನೆ ವಿರುದ್ಧ ಏನೇ ಕ್ರಮಕೈಗೊಂಡರೂ ಸಹಮತವಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಆಕಸ್ಮಿಕವಾಗಿ ಗಡಿ ದಾಟಿದ ಭಾರತೀಯ ಯೋಧನನ್ನು ಬಂಧಿಸಿದ ಪಾಕಿಸ್ತಾನ

ಇನ್ನು ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸಹ ಮಾತನಾಡಿ, ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆ ಪ್ರಯತ್ನಗಳ ಬಗ್ಗೆ ಚರ್ಚೆಯಾಗಿದ್ದು, ಸರ್ಕಾರ ಯಾವುದೇ ಕ್ರಮಕೈಗೊಂಡರೂ ನಮ್ಮ ಬೆಂಬಲವಿದೆ ಎಂದಿದ್ದಾರೆ.

ಇದನ್ನೂ ಓದಿ
ದಕ್ಷಿಣ ಏಷ್ಯಾದ ನಂ. 1 ಆಗಿದ್ದ ಪಾಕಿಸ್ತಾನ ಭಿಕಾರಿ ಆದ ಕಥೆ
ಪಾಕ್ ನಾಗರಿಕರಿಗೆ ವೀಸಾ ರದ್ದು, ಏ. 27ರೊಳಗೆ ಭಾರತ ಬಿಟ್ಟು ತೆರಳಲು ಆದೇಶ
ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯುಮಾರ್ಗ ಬಂದ್, ವ್ಯಾಪಾರವೂ ಸ್ಥಗಿತ
ಅಟ್ಟಾರಿ ಬಂದ್ ಎಫೆಕ್ಟ್; ಪಾಕಿಸ್ತಾನದ ಷೇರುಪೇಟೆ ಕುಸಿತ

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ಸಭೆಯಲ್ಲಿ ಎಲ್ಲಾ ರಾಜಕೀಯ ನಾಯಕರು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಭದ್ರತೆ ಕುರಿತ ಸಂಪುಟ ತೆಗೆದುಕೊಂಡ ಕ್ರಮವನ್ನು ಸರ್ವಾನುಮತದಿಂದ ಬೆಂಬಲಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರವು ನಮ್ಮ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿರುತ್ತದೆ ಎಂದು ಸರ್ಕಾರ ಸಭೆಯಲ್ಲಿ ಸ್ಪಷ್ಟಪಡಿಸಿತು. ಸರ್ಕಾರವು ತೆಗೆದುಕೊಳ್ಳುತ್ತಿರುವ ಎಲ್ಲಾ ಕ್ರಮಗಳು ಮತ್ತು ಭವಿಷ್ಯದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳಿಗೆ ಎಲ್ಲಾ ನಾಯಕರು ಸರ್ಕಾರದೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು ಎಂದರು.

ಭಾರತ-ಪಾಕ್ ನಡುವೆ ಬಿಗುವಿನ ವಾತಾವರಣ

ಉಗ್ರರಿಗೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನಕ್ಕೆ ಭಾರತ ಕೆಲ ವಿಚಾರಗಳಲ್ಲಿ ಶಾಕ್ ಕೊಟ್ಟಿದೆ. ಪಾಕಿಸ್ತಾನಿ ನಾಗರಿಕರಿಗೆ ವಿಸಾ ರದ್ದುಗೊಳಿಸಿದೆ. ಅಲ್ಲದೇ ಭಾರತದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳಿಗೆ ತಮ್ಮ ದೇಶಕ್ಕೆ ಹೋಗುವಂತೆ ಖಡಕ್​ ಸೂಚನೆ ನೀಡಿದೆ. ಪಾಕಿಸ್ತಾನಿ ನಾಗರಿಕರಿಗೆ ಇಂದಿನಿಂದ ವಿಸಾ ಇಲ್ಲ. ಇನ್ನು ಪಹಲ್ಗಾಮ್‌ ಉಗ್ರರ ದುಷ್ಕೃತ್ಯದ ನಂತರ ಪಾಕಿಸ್ತಾನದಿಂದ 108 ಭಾರತೀಯರು ವಾಪಸಾಗಿದ್ದಾರೆ. ಇತ್ತ ಭಾರತದಿಂದ 28 ಪಾಕಿಸ್ತಾನಿ ನಾಗರಿಕರು ತಮ್ಮ ರಾಷ್ಟ್ರಕ್ಕೆ ವಾಪಸ್ ಹೋಗಿದ್ದಾರೆ. ಈ ಬಗ್ಗೆ ಭಾರತದ ಹಿರಿಯ ಪ್ರೊಟೋಕಾಲ್‌ ಅಧಿಕಾರಿ ಅರುಣ್‌ ಮಹಲ್‌ ಮಾಹಿತಿ ನೀಡಿದ್ದಾರೆ. ಅಲ್ಲದೇ ಪಾಕಿಸ್ತಾನ ಸಹ ವಿಸಾ ರದ್ದುಗೊಳಿಸಿದ್ದಲ್ಲದೇ ತಮ್ಮ ರಾಷ್ಟ್ರದಿಂದ ಭಾರತರ ಪ್ರಜೆಗಳಿಗೆ ಸೂಚನೆ ರವಾನಿಸಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಖಡಕ್ ಎಚ್ಚರಿಕೆ ನೀಡಿರುವ ಮೋಡಿ

ಇನ್ನು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉಗ್ರರಿಗೆ ಹಾಗೂ ಭಯೋತ್ದಾದರಿಗೆ ನೆರವು ನೀಡುವವರಿಗೆ ತಕ್ಕ ಶಾಸ್ತಿ ಆಗಲಿದೆ ಎಂದು ಖಡಕ್ ಆಗಿ ಹೇಳಿದ್ದಾರೆ. ಇಂದು (ಏಪ್ರಿಲ್ 24) ಬಿಹಾರ್​ನಲ್ಲಿ ಮಾತನಾಡಿದ ಮೋದಿ, ಈ ದಾಳಿ ಕೇವಲ ಪ್ರವಾಸಿಗರ ಮೇಲೆ ಆಗಿಲ್ಲ, ದೇಶದ ಶತ್ರುಗಳು ಭಾರತದ ಆತ್ಮದ ಮೇಲೆ ದಾಳಿ ಮಾಡುವ ಸಾಹಸ ಮಾಡಿವೆ. ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಯಾರು ಈ ದಾಳಿ ಮಾಡಿದ್ದಾರೋ ಆ ಉಗ್ರರನ್ನು.. ಈ ದಾಳಿಗೆ ಸಂಚು ಮಾಡಿದವರಿಗೆ ಅವರ ಕಲ್ಪನೆಗೂ ಮೀರಿದ್ದ ಶಿಕ್ಷೆಯನ್ನ ನೀಡುತ್ತೇವೆ. ಶಿಕ್ಷೆ ಆಗೇ ಆಗುತ್ತೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ಸೈನಿಕರ ಸಂಖ್ಯೆ ಹೆಚ್ಚಿಸಿದ ಪಾಕ್​

ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಭಾರತ ಚಿಂತನೆ ನಡೆಸಿದೆ. ಇದಕ್ಕೆ ಪೂರವಕೆಂಬಂತೆ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಿದೆ. ಇದರಿಂದ ಪಾಕಿಸ್ತಾನಕ್ಕೆ ನಡುಕ ಶುರುವಾಗಿದ್ದು, ತಮ್ಮ ಮೇಲೆ ಭಾರತ ಯಾವುದೇ ಸಂದರ್ಭದಲ್ಲಿ ದಾಳಿ ಮಾಡಬಹುದು ಎನ್ನುವ ಆತಂಕದಲ್ಲಿ ಇದೆ. ಹೀಗಾಗಿ ಗಡಿ ನಿಯಂತ್ರಣ ರೇಖೆ ಬಳಿ ಸೈನಿಕರ ಸಂಖ್ಯೆ ಹೆಚ್ಚಿಸಿದ್ದು, ಬಂಕರ್‌ ಒಳಗಿನಿಂದ ಮಾತ್ರ ಕಣ್ಗಾವಲು ನಡೆಸಲು ಆದೇಶಿಸಿದೆ. ಜೊತೆಗೆ ಅಂತಾರಾಷ್ಟ್ರೀಯ ಗಡಿಯಲ್ಲೂ ಪಾಕ್​ಗೆ ಭೀತಿ ಶುರುವಾಗಿದ್ದರಿಂದ ರಾವಲ್ಪಿಂಡಿಯ ಪ್ರಧಾನ ಕಚೇರಿ ಸುತ್ತಲೂ ಭದ್ರತೆ ಹೆಚ್ಚಿಸಿದ್ದು, ಜಾಗರೂಕರಾಗಿರಲು ಸೇನೆಯ 10 ಕಾರ್ಪ್ಸ್‌ಗೆ ಪಾಕ್ ಸೇನಾ ಮುಖ್ಯಸ್ಥ ಆದೇಶ ಹೊರಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ