ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯುಮಾರ್ಗ ಬಂದ್, ಭಾರತದೊಂದಿಗಿನ ವ್ಯಾಪಾರವೂ ಸ್ಥಗಿತ
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. ನಿನ್ನೆ ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ 5 ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಸಿಂಧೂ ಜಲ ಒಪ್ಪಂದ ರದ್ದು ಮತ್ತು ಪಾಕಿಸ್ತಾನೀಯರಿಗೆ ಭಾರತಕ್ಕೆ ಪ್ರವೇಶ ನಿಷೇಧವೂ ಸೇರಿದೆ. ಇದರ ಬೆನ್ನಲ್ಲೇ ಇಂದು ಪಾಕಿಸ್ತಾನದ ಪ್ರಧಾನಮಂತ್ರಿ ಕೂಡ ಉನ್ನತ ಮಟ್ಟದ ಸಭೆ ನಡೆಸಿದ್ದು, ಭಾರತದ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ವಾಯುಮಾರ್ಗವನ್ನು ನಿರ್ಬಂಧಿಸಿದೆ. ಹಾಗೇ, ವಾಘಾ ಗಡಿಯನ್ನು ಮುಚ್ಚಿದೆ. ಈ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಮತ್ತೊಂದು ಹಂತಕ್ಕೆ ಹೋಗಿದೆ.

ನವದೆಹಲಿ, ಏಪ್ರಿಲ್ 24: ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Attack) ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿತ್ತು. ಸಿಂಧೂ ಜಲ ಒಪ್ಪಂದ (Sindhu Water Agreement) ರದ್ದು, ಭಾರತ-ಪಾಕ್ ಗಡಿ ಬಂದ್, ಪಾಕಿಸ್ತಾನೀಯರಿಗೆ ವೀಸಾ ರದ್ದು ಸೇರಿದಂತೆ ಹಲವು ಕ್ರಮಗಳನ್ನು ಭಾರತ ತೆಗೆದುಕೊಂಡಿತ್ತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಇಂದು ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇಂದು ರಾಷ್ಟ್ರೀಯ ಭದ್ರತಾ ಸಮಿತಿ (ಎನ್ಎಸ್ಸಿ) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕತ್ವ ಭಾಗವಹಿಸಿದ್ದ ಈ ಸಭೆಯು ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನಿ ವಾಯುಪ್ರದೇಶವನ್ನು ನಿರ್ಬಂಧಿಸುವುದು ಮತ್ತು ವಾಘಾ ಗಡಿಯನ್ನು ಮುಚ್ಚುವುದು ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು.
ಹಾಗೇ, ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನ ಬಲವನ್ನು 30 ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಇಳಿಸಲಾಗುವುದು ಎಂದು ಪಾಕಿಸ್ತಾನ ಸರ್ಕಾರ ದೃಢಪಡಿಸಿದೆ. ಪಾಕಿಸ್ತಾನದ ಪ್ರಧಾನಿ ಸಚಿವಾಲಯ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ನ ಬಲವನ್ನು ಏಪ್ರಿಲ್ 30, 2025ರಿಂದ ಜಾರಿಗೆ ಬರುವಂತೆ 30 ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಇಳಿಸಲಾಗುವುದು. ಪಾಕಿಸ್ತಾನದ ಮೂಲಕ ಯಾವುದೇ ಮೂರನೇ ದೇಶಕ್ಕೆ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಭಾರತದ ಸಿಖ್ ಧರ್ಮೀಯರು 24 ಗಂಟೆಯೊಳಗೆ ಪಾಕ್ ತೊರೆಯಬೇಕು ಎಂದು ಪಾಕಿಸ್ತಾನ ಆದೇಶಿಸಿದೆ. ಇಸ್ಲಾಮಾಬಾದ್ನಲ್ಲಿರೋ ಭಾರತೀಯ ರಕ್ಷಣಾ, ನೌಕಾ ಪಡೆ, ವಾಯಪಡೆ ಸಲಹೆಗಾರರು ಪಾಕಿಸ್ತಾನ ತೊರೆಯಬೇಕು ಎಂದು ಸೂಚಿಸಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಸಂಖ್ಯೆಯನ್ನು 30ಕ್ಕೆ ಇಳಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Pak stock market: ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಅಟ್ಟಾರಿ ಗಡಿ, ಸಿಂಧೂ ಜಲ ಒಪ್ಪಂದ ಮುಚ್ಚಿದ್ದು ಶಾಕ್ ಕೊಟ್ಟಿತಾ?
ಬುಧವಾರ ಭಾರತದ ಭದ್ರತಾ ಸಚಿವ ಸಂಪುಟ ಸಮಿತಿಯು ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡ ನಂತರ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ. ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಭಾರತದ ಆರೋಪಗಳನ್ನು “ರಾಜಕೀಯ ಪ್ರೇರಿತ” ಮತ್ತು “ಕಾನೂನುಬಾಹಿರ” ಎಂದು ಪಾಕಿಸ್ತಾನ ಟೀಕಿಸಿದೆ. ಸಿಖ್ ಯಾತ್ರಿಕರನ್ನು ಹೊರತುಪಡಿಸಿ ಭಾರತೀಯ ಪ್ರಜೆಗಳಿಗೆ ಎಲ್ಲಾ SAARC ವೀಸಾಗಳನ್ನು ಅಮಾನತುಗೊಳಿಸಲಾಗಿದೆ. ವಾಘಾ ಗಡಿಯನ್ನು ಮುಚ್ಚಲಾಗಿದೆ. ಭಾರತೀಯ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಪಾಕಿಸ್ತಾನ ಘೋಷಿಸಿದೆ.
Press Release PM Office
Prime Minister of Pakistan Muhammad Shehbaz Sharif chaired a meeting of the National Security Committee (NSC), today. The participants discussed the national security environment and the regional situation, particularly in the wake of #Pahalgam attack in… pic.twitter.com/JuawHaOJom
— Islamabad Insider (@IslooInsider) April 24, 2025
ಇದನ್ನೂ ಓದಿ: Indus Water Treaty: ಪಾಕಿಸ್ತಾನಕ್ಕೆ ಭಾರತದ ಶಾಕ್; ಏನಿದು ಸಿಂಧೂ ಜಲ ಒಪ್ಪಂದ?
ಭಾರತದಿಂದ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದನ್ನು “ಯುದ್ಧದ ಕಾಯಿದೆ” ಎಂದು ಖಂಡಿಸಲಾಗಿದೆ. ಪಾಕಿಸ್ತಾನವು ಯಾವುದೇ ಬೆಲೆ ತೆತ್ತಾದರೂ ತನ್ನ ನೀರಿನ ಹಕ್ಕುಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದೆ. ಭಾರತೀಯ ವಾಹಕಗಳಿಗೆ ವ್ಯಾಪಾರ ಮತ್ತು ವಾಯುಪ್ರದೇಶ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಶಿಮ್ಲಾ ಒಪ್ಪಂದ ಮತ್ತು ಇತರ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸುವ ಹಕ್ಕನ್ನು ಪಾಕಿಸ್ತಾನ ಕಾಯ್ದಿರಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Thu, 24 April 25