
ನವದೆಹಲಿ, ಡಿಸೆಂಬರ್ 3: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಬಾಬ್ರಿ ಮಸೀದಿಯನ್ನು ಪುನರ್ನಿರ್ಮಿಸಲು ಸರ್ಕಾರಿ ಹಣವನ್ನು ಬಳಸಲು ಯೋಜಿಸಿದ್ದರು ಎಂದು ಆರೋಪಿಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರನ್ನು ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್ ತೀವ್ರವಾಗಿ ಟೀಕಿಸಿದ್ದಾರೆ. ಈ ಹೇಳಿಕೆಯನ್ನು “ಸುಳ್ಳು” ಎಂದು ಕರೆದಿರುವ ಅವರು, ಯಾವುದೇ ಇತಿಹಾಸ ಅಥವಾ ಸಾಕ್ಷ್ಯಚಿತ್ರ ಪುರಾವೆಗಳು ಈ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಮಾಣಿಕಮ್ ಟ್ಯಾಗೋರ್, “ಈ ಆರೋಪವನ್ನು ಬೆಂಬಲಿಸಲು ಯಾವುದೇ ಆರ್ಕೈವಲ್ ಅಥವಾ ಸಾಕ್ಷ್ಯಚಿತ್ರ ಪುರಾವೆಗಳಿಲ್ಲ. ಧಾರ್ಮಿಕ ಸ್ಥಳಗಳಿಗೆ ಸರ್ಕಾರಿ ಹಣವನ್ನು ಬಳಸುವುದನ್ನು ನೆಹರೂ ಅವರು ಸ್ಪಷ್ಟವಾಗಿ ವಿರೋಧಿಸಿದ್ದರು” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಶ್ರೀಕೃಷ್ಣನ ಸಂದೇಶವನ್ನು ಅನುಸರಿಸಿದೆವು; ಕುರುಕ್ಷೇತ್ರದಲ್ಲಿ ಸಚಿವ ರಾಜನಾಥ್ ಸಿಂಗ್
ಸೋಮನಾಥ ದೇವಾಲಯದ ಪುನರ್ನಿರ್ಮಾಣವನ್ನು ಸಹ ಸರ್ಕಾರಿ ನಿಧಿಯ ಬದಲು ಸಾರ್ವಜನಿಕ ದೇಣಿಗೆಯ ಮೂಲಕವೇ ಮಾಡಬೇಕೆಂದು ನೆಹರು ಒತ್ತಾಯಿಸಿದ್ದರು ಎಂದು ಅವರು ಹೇಳಿದ್ದಾರೆ. “ಲಕ್ಷಾಂತರ ಜನರು ಪೂಜಿಸುವ ಸಂಕೇತವಾದ ಸೋಮನಾಥಕ್ಕೇ ನೆಹರು ಸರ್ಕಾರಿ ಹಣವನ್ನು ನಿರಾಕರಿಸಿದ್ದರೆ, ಬಾಬರಿಗಾಗಿ ತೆರಿಗೆದಾರರ ಹಣವನ್ನು ಖರ್ಚು ಮಾಡಲು ಅವರು ಏಕೆ ಪ್ರಸ್ತಾಪಿಸುತ್ತಾರೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸೇನೆಗೆ ಯಾವುದೇ ಧರ್ಮ, ಜಾತಿ ಇಲ್ಲ; ಮೀಸಲಾತಿ ಕುರಿತು ರಾಹುಲ್ ಗಾಂಧಿ ಹೇಳಿಕೆಗೆ ರಾಜನಾಥ್ ಸಿಂಗ್ ತಿರುಗೇಟು
ರಾಜನಾಥ್ ಸಿಂಗ್ ಏನು ಹೇಳಿದ್ದರು?:
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯನ್ನು ಗುರುತಿಸುವ ಕಾರ್ಯಕ್ರಮವಾದ ‘ಸರ್ದಾರ್ ಸಭಾ’ ಸಂದರ್ಭದಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, ಜವಾಹರಲಾಲ್ ನೆಹರು ಅವರು ಬಾಬರಿ ಮಸೀದಿ ನಿರ್ಮಿಸಲು ಸಾರ್ವಜನಿಕ ನಿಧಿಯನ್ನು ಕೋರಿದ್ದರು. ನೆಹರು ಅವರ ಈ ಕೋರಿಕೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಒಪ್ಪದೆ, ಈ ಯೋಜನೆಯನ್ನು ಮುಂದುವರಿಸದಂತೆ ತಡೆದಿದ್ದರು ಎಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ