ಮೊಬೈಲ್ ಬಳಕೆಯಿಂದ 10 ವರ್ಷದಲ್ಲಿ ಜಗತ್ತು ಅಂತ್ಯಗೊಳ್ಳಲಿದೆ; ಬಿಹಾರ ಸಿಎಂ ಹೇಳಿಕೆಗೆ ಕಾಂಗ್ರೆಸ್ ವಾಗ್ದಾಳಿ
ಬಿಹಾರದ ವಿಧಾನಸಭೆಯೊಳಗೆ ಮೊಬೈಲ್ ಫೋನ್ ಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ವಿರೋಧ ಪಕ್ಷಗಳ ನಾಯಕರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಟೀಕಿಸಿದ್ದಾರೆ. ಇಂದು ಸದನದಲ್ಲಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಆರ್ ಜೆಡಿ ನಾಯಕರ ವಿರುದ್ಧ ನಿತೀಶ್ ಕುಮಾರ್ ಆಕ್ರೋಶ ಹೊರಹಾಕಿದ್ದರು. ಸದನದೊಳಗೆ ಮೊಬೈಲ್ ಬಳಸುವವರನ್ನು ಹೊರಗೆ ಕಳುಹಿಸಿ ಎಂದು ಸ್ಪೀಕರ್ ಬಳಿ ಸಿಎಂ ಮನವಿ ಮಾಡಿದ್ದರು.

ಪಾಟ್ನಾ, ಮಾರ್ಚ್ 20: ಬಿಹಾರದ ಅಧಿವೇಶನದಲ್ಲಿ ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಶಾಸಕ ಕುಮಾರ್ ಕೃಷ್ಣ ಮೋಹನ್ ಅಲಿಯಾಸ್ ಸುದಯ್ ಯಾದವ್ ಮೊಬೈಲ್ ಫೋನ್ ಬಳಸುವುದನ್ನು ಗಮನಿಸಿದ ನಂತರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಬಿಹಾರದ ವಿಧಾನಸಭೆಯಲ್ಲಿ ತಮ್ಮ ತಾಳ್ಮೆ ಕಳೆದುಕೊಂಡರು. ಇದಕ್ಕೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ ವಿಧಾನಸಭೆಯೊಳಗೆ ಮೊಬೈಲ್ ಫೋನ್ಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. ಈ ವೇಳೆ, ಮೊಬೈಲ್ ಫೋನ್ ಬಳಕೆಯಿಂದ 10 ವರ್ಷಗಳಲ್ಲಿ ಜಗತ್ತು ಅಂತ್ಯವಾಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಸದನದಲ್ಲಿ ಮೊಬೈಲ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದ ಸಿಎಂ ನಿತೀಶ್ ಕುಮಾರ್, “ಸದನದಲ್ಲಿ ಇದನ್ನು ಈಗಾಗಲೇ ನಿಷೇಧಿಸಲಾಗಿದೆ. ಮೊಬೈಲ್ ಫೋನ್ನೊಂದಿಗೆ ಬರುವವರನ್ನು ಸದನದಿಂದ ಹೊರಗೆ ಕಳುಹಿಸಬೇಕೆಂದು ನಾನು ನಿಮ್ಮನ್ನು (ಸ್ಪೀಕರ್) ವಿನಂತಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ: ‘ನಿರುದ್ಯೋಗ ಭತ್ಯೆ’ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಘೋಷಣೆ
“ಈ ಹಿಂದೆ ನಾನು ಕೂಡ ಬಹಳ ಮೊಬೈಲ್ ಬಳಸುತ್ತಿದ್ದೆ. ಅದರಿಂದ ತೊಂದರೆ ಆಗುತ್ತದೆ ಎಂದು ತಿಳಿದ ನಂತರ ನಾನು 2019ರಲ್ಲಿ ಮೊಬೈಲ್ ಬಳಸುವುದನ್ನು ನಿಲ್ಲಿಸಿದ್ದೇವೆ. ಮೊಬೈಲ್ ಬಳಕೆ ಅಧಿಕವಾದರೆ ಮುಂದಿನ 10 ವರ್ಷಗಳಲ್ಲಿ ಜಗತ್ತು ಅಂತ್ಯಗೊಳ್ಳುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದ್ದರು. ಬಿಹಾರದ ಸಿಎಂ ರಾಜ್ಯ ವಿಧಾನಸಭೆಯೊಳಗೆ ಆರ್ಜೆಡಿ ಶಾಸಕರಿಗೆ ಛೀಮಾರಿ ಹಾಕುತ್ತಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ಇದಾದ ಬಳಿಕ ವಿರೋಧ ಪಕ್ಷಗಳ ನಾಯಕರು ವಿಧಾನಸಭೆಯೊಳಗೆ ಮೊಬೈಲ್ ಫೋನ್ ಬಳಕೆಯ ಬಗ್ಗೆ ಬಿಹಾರ ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಇಂದು ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. “ಮೊಬೈಲ್ ಫೋನ್ಗಳಿಂದಾಗಿ 10 ವರ್ಷಗಳಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ವಿಧಾನಸಭೆಯಲ್ಲಿ ಸಿಎಂ ಒಬ್ಬರು ಹೇಳುತ್ತಿದ್ದಾರೆ?! ಹುಚ್ಚುತನ ಮತ್ತು ಅಸಂಬದ್ಧ ಮಾತುಗಳಿಗೂ ಒಂದು ಮಿತಿ ಇದೆ!” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಆರ್ಜೆಡಿ ಶಾಸಕರು ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು “ಅನಕ್ಷರಸ್ಥ ಸಿಎಂ” ಎಂದು ಟೀಕಿಸಿದ್ದಾರೆ. “ಮೊಬೈಲ್ ಫೋನ್ಗಳಿಂದಾಗಿ 10 ವರ್ಷಗಳಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಸಿಎಂ ಹೇಳಿದ್ದಾರೆ. ಇದು ಯಾವ ರೀತಿಯ ಹೇಳಿಕೆ?. ಪರಿಸರದ ದೃಷ್ಟಿಕೋನದಿಂದ ವಿಧಾನಸಭೆಯನ್ನು ಕಾಗದರಹಿತವಾಗಿಸುವ ಪ್ರಯತ್ನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಆನ್ಲೈನ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಯಾವುದೇ ಶಾಸಕರು ಪೂರಕ ಪ್ರಶ್ನೆಯನ್ನು ಕೇಳಲು ಬಯಸಿದರೆ ಅವರು ತಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್ ಅನ್ನು ಬಳಸಬೇಕಾಗುತ್ತದೆ. ಆದರೆ, ಬಿಹಾರದ ಕಂಪ್ಯೂಟರ್ ಅನಕ್ಷರಸ್ಥ ಮುಖ್ಯಮಂತ್ರಿಗೆ ಇದು ಒಂದು ದೊಡ್ಡ ಸಮಸ್ಯೆ ಆಗಿದೆ.” ಎಂದು ಲೇವಡಿ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ