ಹರಿಯಾಣದ ಕಾಂಗ್ರೆಸ್ ಪಕ್ಷದ 5 ಶಾಸಕರ ಅಮಾನತು; ಕಾರಣ ಇಲ್ಲಿದೆ

ಹರಿಯಾಣದ ಕಾಂಗ್ರೆಸ್ ಪಕ್ಷದ ಐವರು ಶಾಸಕರನ್ನು ಅಮಾನತುಗೊಳಿಸಲಾಗಿದೆ. ಕಳೆದ ತಿಂಗಳ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಕಾಂಗ್ರೆಸ್ ಹರಿಯಾಣದ ತನ್ನ ಐದು ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಶಾಸಕರ ಕ್ರಮಗಳು ಸಾಂಸ್ಥಿಕ ಶಿಸ್ತು ಮತ್ತು ಪಕ್ಷ ವಿರೋಧಿ ನಡವಳಿಕೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುವ ಕಾಂಗ್ರೆಸ್ ನಾಯಕರಿಗೆ ಪಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಹರಿಯಾಣದ ಕಾಂಗ್ರೆಸ್ ಪಕ್ಷದ 5 ಶಾಸಕರ ಅಮಾನತು; ಕಾರಣ ಇಲ್ಲಿದೆ
Congress President Mallikarjun Kharge
Image Credit source: PTI

Updated on: Apr 16, 2026 | 6:25 PM

ಚಂಡೀಗಢ, ಏಪ್ರಿಲ್ 16: ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯ (Rajya Sabha Elections) ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಹರಿಯಾಣದ ಕಾಂಗ್ರೆಸ್ ಇಂದು (ಏಪ್ರಿಲ್ 16) ತನ್ನ ಪಕ್ಷದ 5 ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಮಾಜಿ ಸಂಸದ ಧರ್ಮಪಾಲ್ ಮಲಿಕ್ ನೇತೃತ್ವದ ಪಕ್ಷದ ಹರಿಯಾಣ ಘಟಕದ ಶಿಸ್ತು ಕ್ರಿಯಾ ಸಮಿತಿ ಶಾಸಕರಾದ ಮೊಹಮ್ಮದ್ ಇಲ್ಯಾಸ್ (ಪುನಾಹನ), ಮೊಹಮ್ಮದ್ ಇಸ್ರೇಲ್ (ಹತಿನ್), ರೇಣು ಬಾಲಾ (ಸಧೌರ), ಶಲ್ಲಿ ಚೌಧರಿ (ನರೈಂಗಢ) ಮತ್ತು ಜರ್ನೈಲ್ ಸಿಂಗ್ (ರತಿಯಾ) ಅವರನ್ನು ಅಮಾನತುಗೊಳಿಸಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕಾಂಗ್ರೆಸ್ ಈ ಐವರು ಶಾಸಕರನ್ನು ತಪ್ಪಿತಸ್ಥರೆಂದು ಘೋಷಿಸಿದ್ದು, ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾವ್ ನರೇಂದರ್ ಸಿಂಗ್ ಹೇಳಿದ್ದಾರೆ. ರಾಜ್ಯ ಶಿಸ್ತು ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಒಂದು ಕುಟುಂಬಕ್ಕಾಗಿ ಕಾಂಗ್ರೆಸ್ ನಮ್ಮ ಕೈಬಿಟ್ಟಿದೆ: ಮುಸ್ಲಿಂ ಮುಖಂಡರಿಂದ ತೀವ್ರ ಆಕ್ರೋಶ

“ನಾರಾಯಣಗಢ, ಸಧೌರಾ, ಪೆಹೋವಾ, ಪಟೌಡಿ ಮತ್ತು ಫಿರೋಜ್‌ಪುರ್ ಝಿರ್ಕಾ ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರಾದ ಶಲ್ಲಿ ಚೌಧರಿ, ರೇಣು ಬಾಲಾ, ಸರ್ದಾರ್ ಗುರ್ಮೀತ್ ಸಿಂಗ್, ಮೊಹಮ್ಮದ್ ಇಲ್ಯಾಸ್ ಮತ್ತು ಮೊಹಮ್ಮದ್ ಇಸ್ರೇಲ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಕಾರಣಕ್ಕೆ ಅಮಾನತುಗೊಳಿಸಲಾಗಿದೆ. ಶಿಸ್ತು ಕ್ರಿಯಾ ಸಮಿತಿಯ ಶಿಫಾರಸಿನ ಮೇರೆಗೆ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅವರು ಘೋಷಿಸಿದ್ದಾರೆ.


ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ಈ 5 ಶಾಸಕರು ಇತ್ತೀಚೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದರು. ಪಕ್ಷದ ಯಾವುದೇ ಮಟ್ಟದಲ್ಲಿ ಅಶಿಸ್ತನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಪಕ್ಷದ ಸಾಮೂಹಿಕ ನಿರ್ಧಾರಗಳು ಮತ್ತು ಅಧಿಕೃತ ನಿಲುವಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಈ ನಿರ್ಧಾರವು ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ರವಾನಿಸುತ್ತದೆ” ಎಂದು ರಾವ್ ನರೇಂದರ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ:Video: ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ 

ಹರಿಯಾಣದ ಎರಡು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16ರಂದು ಮತದಾನ ನಡೆಯಿತು. ಬಿಜೆಪಿ ಸಂಜಯ್ ಭಾಟಿಯಾ ಒಂದು ಸ್ಥಾನವನ್ನು ಆರಾಮವಾಗಿ ಗೆದ್ದರೆ, ನಂದಲ್ ವಿರುದ್ಧದ ನಿಕಟ ಸ್ಪರ್ಧೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಕರಮವೀರ್ ಸಿಂಗ್ ಬೌಧ್ ಎರಡನೇ ಸ್ಥಾನವನ್ನು ಪಡೆದಿದ್ದರು. 5 ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಮತಎಣಿಕೆಯ ಸಮಯದಲ್ಲಿ ಕಾಂಗ್ರೆಸ್​​ನ 4 ಮತಗಳನ್ನು ಸಹ ಅಮಾನ್ಯವೆಂದು ಘೋಷಿಸಲಾಯಿತು. ಆದರೆ, ಶಾಸಕರಾದ ಶಲ್ಲಿ ಚೌಧರಿ, ರೇಣು ಬಾಲಾ ಮತ್ತು ಜರ್ನೈಲ್ ಸಿಂಗ್ ಅಡ್ಡ ಮತದಾನದ ಆರೋಪಗಳನ್ನು ನಿರಾಕರಿಸಿದ್ದರು. ನಮ್ಮ ಹೆಸರುಗಳನ್ನು ಅನಗತ್ಯವಾಗಿ ವಿವಾದಕ್ಕೆ ಎಳೆಯಲಾಗುತ್ತಿದೆ ಮತ್ತು ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿರುವುದಾಗಿ ಸಮರ್ಥಿಸಿಕೊಂಡಿದ್ದರು. ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:24 pm, Thu, 16 April 26

Follow Us