ಇನ್ನೂ ನಿಗೂಢವಾಗಿಯೇ ಇದೆ ಕೇರಳಂ ಸಿಎಂ ಹೆಸರು; ನಾಳೆ ಕಾಂಗ್ರೆಸ್​​ನಿಂದ ಅಧಿಕೃತ ಘೋಷಣೆ

ಕೇರಳದ ಚುನಾವಣಾ ಫಲಿತಾಂಶ ಹೊರಬಿದ್ದು 9 ದಿನಗಳು ಕಳೆದಿವೆ. ಯುಡಿಎಫ್ ಬಹುಮತ ಪಡೆದಿದ್ದರೂ ಕಾಂಗ್ರೆಸ್ ಇನ್ನೂ ಸಿಎಂ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಿಲ್ಲ. ವಿಧಾನಸಭಾ ಚುನಾವಣೆ ನಡೆದ ಬೇರೆ ರಾಜ್ಯಗಳಲ್ಲಿ ನೂತನ ಸರ್ಕಾರ ರಚನೆಯಾಗಿದ್ದರೂ ಕೇರಳಂನಲ್ಲಿ ಮಾತ್ರ ಇನ್ನೂ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಒಮ್ಮತದ ಅಭಿಪ್ರಾಯಕ್ಕೆ ಬರಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಎಂ ಯಾರಾಗಲಿದ್ದಾರೆ ಎಂಬುದು ಅಂತಿಮವಾಗಿದೆ ಎನ್ನಲಾಗುತ್ತಿದೆ. ನಾಳೆ ಕೇರಳಂ ನೂತನ ಸಿಎಂ ಹೆಸರು ಘೋಷಣೆಯಾಗಲಿದೆ.

ಇನ್ನೂ ನಿಗೂಢವಾಗಿಯೇ ಇದೆ ಕೇರಳಂ ಸಿಎಂ ಹೆಸರು; ನಾಳೆ ಕಾಂಗ್ರೆಸ್​​ನಿಂದ ಅಧಿಕೃತ ಘೋಷಣೆ
Mallikarjun Kharge And Jairam Ramesh

Updated on: May 13, 2026 | 8:48 PM

ನವದೆಹಲಿ, ಮೇ 13: ಕೇರಳಂನಲ್ಲಿ ಇನ್ನೂ ಮುಖ್ಯಮಂತ್ರಿಯ ಆಯ್ಕೆಯ ಬಿಕ್ಕಟ್ಟು ಬಗೆಹರಿದಿಲ್ಲ. ಇಂದು ಕೇರಳಂನ (Keralam CM) ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಲಾಗುವುದು ಎನ್ನಲಾಗಿತ್ತು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ್ದಾರೆ. ಇದಾದ ಬಳಿಕ ಕಾಂಗ್ರೆಸ್ ಕೇರಳಂನ ಮುಖ್ಯಮಂತ್ರಿ (Kerala CM) ಹೆಸರನ್ನು ಘೋಷಿಸುವ ನಿರೀಕ್ಷೆಯಿತ್ತು. ಆದರೆ, ಮತ್ತೊಮ್ಮೆ ಸಿಎಂ ಹೆಸರು ಘೋಷಣೆ ಮುಂದೂಡಲ್ಪಟ್ಟಿದೆ. ಇಂದಿನ ಸಭೆಯಲ್ಲಿ ಸಿಎಂ ಹೆಸರು ಅಂತಿಮವಾಗಿದ್ದು, ನಾಳೆ ಅಧಿಕೃತವಾಗಿ ಹೆಸರು ಘೋಷಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಕೇರಳಂನಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಸಿಎಂ ರೇಸ್​​ನಲ್ಲಿದ್ದವು. ಕೇರಳದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೂ ಇನ್ನೂ ಸರ್ಕಾರ ರಚನೆಗೆ ಮುಹೂರ್ತ ನಿಗದಿಯಾಗಿಲ್ಲ.


ಕೇರಳಂ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ನಡೆಯುತ್ತಿರುವ ತೀವ್ರ ಜಗಳದ ನಡುವೆ, ರಾಹುಲ್ ಗಾಂಧಿ ನಿನ್ನೆ ದೆಹಲಿಯಲ್ಲಿ ಮಾಜಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನು ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಇದಾದ ನಂತರ ಇಂದು ಮಲ್ಲಿಕಾರ್ಜುನ ಖರ್ಗೆಯವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಹೈಕಮಾಂಡ್​​ ಸಭೆ ಬಳಿಕವೂ ಆಗದ ಅಂತಿಮ ನಿರ್ಧಾರ: ಕೇರಳದ ನೂತನ ಸಿಎಂ ಯಾರೆಂಬುದು ಇನ್ನೂ ಸಸ್ಪೆನ್ಸ್​!

ಮಂಗಳವಾರ ನಡೆದ ನಿರ್ಣಾಯಕ ಚರ್ಚೆಗಳ ಸಂದರ್ಭದಲ್ಲಿ ಪಕ್ಷದ ನಾಯಕತ್ವವು ದೆಹಲಿಗೆ ಕರೆಸಿದ್ದ ಕೇರಳಂ ನಾಯಕರು ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ಮಾಜಿ ಕೆಪಿಸಿಸಿ ಮುಖ್ಯಸ್ಥ ಕೆ ಮುರಳೀಧರನ್, ಪಕ್ಷವು ಬುಧವಾರದೊಳಗೆ ಮುಖ್ಯಮಂತ್ರಿಯ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ಆದರೆ, ಅದು ನಾಳೆಗೆ ಮುಂದೂಡಲ್ಪಟ್ಟಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ಮಾಹಿತಿ ನೀಡಿದ್ದು, ನಾಳೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಕೆ.ಸಿ. ವೇಣುಗೋಪಾಲ್ ಸಿಎಂ ಆಗುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ವಿ.ಡಿ. ಸತೀಶನ್ ಕೇರಳಂ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಕೇರಳಂನ ಹಿರಿಯ ನಾಯಕರೊಂದಿಗೆ ವಿವರವಾದ ಚರ್ಚೆಯ ನಂತರ ನಾಳೆ ಈ ಕ್ರಮವನ್ನು ಘೋಷಿಸಲಾಗುವುದು.

ಇದನ್ನೂ ಓದಿ: ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ ಆಗೋದು ಪಕ್ಕಾ?

ವಿ.ಡಿ. ಸತೀಶನ್ ಜೊತೆಗೆ ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ಇತರರು ಕೇರಳಂನ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿದ್ದರು. ಕೇರಳಂ ಮುಖ್ಯಮಂತ್ರಿಯನ್ನು ಘೋಷಿಸುವಲ್ಲಿನ ವಿಳಂಬಕ್ಕೆ ಕಾಂಗ್ರೆಸ್ ನಾಯಕರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಕೂಡ ಕೂಡಲೇ ಸಿಎಂ ಹೆಸರು ಘೋಷಿಸುವ ಒತ್ತಡಕ್ಕೆ ಸಿಲುಕಿದೆ.

ಕೇರಳಂ ವಿಧಾನಸಭಾ ಚುನಾವಣೆ:

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳಂನಲ್ಲಿ 140 ವಿಧಾನಸಭಾ ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಒಂದು ದಶಕದ ನಂತರ ಐತಿಹಾಸಿಕ ಪುನರಾಗಮನವನ್ನು ಗುರುತಿಸುತ್ತದೆ. ಮತ್ತೊಂದೆಡೆ, ಎಡ ಪ್ರಜಾಸತ್ತಾತ್ಮಕ ರಂಗವು ಕೇವಲ 35 ಸ್ಥಾನಗಳನ್ನು ಗಳಿಸಿತು. ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದಂತಾಗಿದೆ. ಇದು ಎಲ್‌ಡಿಎಫ್‌ನ ದಶಕಗಳಷ್ಟು ಹಳೆಯದಾದ ಆಡಳಿತವನ್ನು ಕೊನೆಗೊಳಿಸಿತು. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಲು ಸಾಧ್ಯವಾಗಿರಲಿಲ್ಲ. ಇದೀಗ ಇಂದು ಸಿಎಂ ಹೆಸರನ್ನು ಘೋಷಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us