AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಂತಾ ಚಂಡಮಾರುತದಿಂದ ಆಂಧ್ರಕ್ಕೆ ರೆಡ್ ಅಲರ್ಟ್; ಕರಾವಳಿ ಜನರ ಸ್ಥಳಾಂತರಕ್ಕೆ ಸಿಎಂ ನಾಯ್ಡು ಆದೇಶ

ಆಂಧ್ರಪ್ರದೇಶಕ್ಕೆ ನಾಳೆ (ಅಕ್ಟೋಬರ್ 28) ಮೊಂತಾ ಚಂಡಮಾರುತ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಜನರನ್ನು ತಕ್ಷಣ ಸ್ಥಳಾಂತರಗೊಳಿಸುವಂತೆ ಸಿಎಂ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ. ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಚಂಡಮಾರುತದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ, ದುರ್ಬಲ ವಲಯಗಳಿಂದ ಜನರ ಸ್ಥಳಾಂತರವನ್ನು ತ್ವರಿತಗೊಳಿಸಲು ಮತ್ತು ರಕ್ಷಣೆ, ಪರಿಹಾರ ಮತ್ತು ಪುನಃಸ್ಥಾಪನೆ ಪ್ರಯತ್ನಗಳಿಗಾಗಿ ಇಲಾಖೆಗಳ ನಡುವೆ ನಿರಂತರ ಸಮನ್ವಯತೆ ಕಾಯ್ದುಕೊಳ್ಳಲು ಸಿಎಂ ಚಂದ್ರಬಾಬು ನಾಯ್ಡು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮೊಂತಾ ಚಂಡಮಾರುತದಿಂದ ಆಂಧ್ರಕ್ಕೆ ರೆಡ್ ಅಲರ್ಟ್; ಕರಾವಳಿ ಜನರ ಸ್ಥಳಾಂತರಕ್ಕೆ ಸಿಎಂ ನಾಯ್ಡು ಆದೇಶ
Cm Naidu
ಸುಷ್ಮಾ ಚಕ್ರೆ
|

Updated on: Oct 27, 2025 | 9:48 PM

Share

ಅಮರಾವತಿ, ಅಕ್ಟೋಬರ್ 27: ಮೊಂತಾ ಚಂಡಮಾರುತ (Cyclone Montha) ಆಂಧ್ರಪ್ರದೇಶದ ಕರಾವಳಿಯಲ್ಲಿ ಅಪ್ಪಳಿಸಲು ಸಜ್ಜಾಗಿದೆ. ಇಂದು ಬೆಳಗ್ಗೆಯಿಂದಲೇ ಆಂಧ್ರದ ಕರಾವಳಿಯಲ್ಲಿ ಚಂಡಮಾರುತದ ಲಕ್ಷಣಗಳು ಗೋಚರವಾಗುತ್ತಿದ್ದವು. ‘ಮೊಂತಾ’ ಚಂಡಮಾರುತದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಿಂದ ನಿವಾಸಿಗಳನ್ನು ತಕ್ಷಣ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (Chandrababu Naidu) ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನೆಯ ಸಂದರ್ಭದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಯಾವುದೇ ಜೀವಹಾನಿ ಆಗದಂತೆ ತಡೆಯಲು ದುರ್ಬಲ ವಲಯಗಳಿಂದ ತ್ವರಿತ ಸ್ಥಳಾಂತರಕ್ಕೆ ಅನುಕೂಲ ಮಾಡಿಕೊಡಲು ಮತ್ತು ರಕ್ಷಣೆ, ಪರಿಹಾರ ಮತ್ತು ಪುನಃಸ್ಥಾಪನೆ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಚಂಡಮಾರುತ ‘ಮೊಂತಾ’ ಆಂಧ್ರದ ಕರಾವಳಿಯತ್ತ ಸಾಗುತ್ತಿದ್ದಂತೆ ರಾಜ್ಯ ಸರ್ಕಾರ ಸಂಪೂರ್ಣ ಕಟ್ಟೆಚ್ಚರ ವಹಿಸಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಸಚಿವ ನಾರಾ ಲೋಕೇಶ್ ಅವರು ರಿಯಲ್-ಟೈಮ್ ಗವರ್ನೆನ್ಸ್ ಸೊಸೈಟಿ (ಆರ್‌ಟಿಜಿಎಸ್) ವಾರ್ ರೂಮ್‌ನಿಂದ ನಿರಂತರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ತಗ್ಗು ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗಳು ನಡೆಯುತ್ತಿದ್ದು, 400ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ NDRF ಮತ್ತು SDRF ತಂಡಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ.

ಇದನ್ನೂ ಓದಿ: ನಾಳೆಯ ಹವಾಮಾನ: ಮೊಂತಾ ಚಂಡಮಾರುತದ ಎಫೆಕ್ಟ್; ರಾಜ್ಯಾದ್ಯಂತ ಯೆಲ್ಲೋ ಅಲರ್ಟ್​

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮೊಂತಾ ಚಂಡಮಾರುತವು ಅಕ್ಟೋಬರ್ 28ರ ಬೆಳಿಗ್ಗೆ ತೀವ್ರ ಚಂಡಮಾರುತವಾಗಿ ರೂಪುಗೊಂಡು ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ನಿರೀಕ್ಷೆಯಿದೆ. ನಾಳೆ ಸಂಜೆ ಅಥವಾ ರಾತ್ರಿಯ ವೇಳೆಗೆ ಕಾಕಿನಾಡ ಬಳಿಯ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಭೂಕುಸಿತವನ್ನು ಉಂಟುಮಾಡುವ ಸಾಧ್ಯತೆಯಿದೆ. ಗಂಟೆಗೆ 90ರಿಂದ 110 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಜೊತೆಗೆ ಭಾರೀ ಮಳೆ ಉಂಟಾಗುವ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, ಆಂಧ್ರಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜನರು ಮನೆಯೊಳಗೆ ಇರಬೇಕು, ಕರಾವಳಿ ಪ್ರದೇಶಗಳಲ್ಲಿ ಸಂಚರಿಸುವುದನ್ನು ಅವಾಯ್ಡ್ ಮಾಡಬೇಕು, ಸರ್ಕಾರದ ಅಧಿಕೃತ ಸಲಹೆಗಳನ್ನು ಅನುಸರಿಸಬೇಕೆಂದು ಹವಾಮಾನ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಸಿದೆ. ಇಂದು ಸಂಜೆ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅಧಿಕಾರಿಗಳಿಗೆ ಗಂಟೆಗೊಮ್ಮೆ ಚಂಡಮಾರುತದ ಬುಲೆಟಿನ್‌ಗಳನ್ನು ಬಿಡುಗಡೆ ಮಾಡಲು ಮತ್ತು ಸಾರ್ವಜನಿಕರಿಗೆ ನಿರಂತರವಾಗಿ ಪರಿಸ್ಥಿತಿಯ ಬಗ್ಗೆ ಅಪ್​ಡೇಟ್ ನೀಡಲು ಸೂಚನೆ ನೀಡಿದ್ದಾರೆ. ಪರಿಹಾರ ಶಿಬಿರಗಳಲ್ಲಿ ಪ್ರತಿ ವ್ಯಕ್ತಿಗೆ 25 ಕೆಜಿ ಅಕ್ಕಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿದೆ.

ಇದನ್ನೂ ಓದಿ: ಮೊಂತಾ ಚಂಡಮಾರುತ ಎಫೆಕ್ಟ್​: ಆಂಧ್ರ ಪ್ರದೇಶದ 23 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಈಗಾಗಲೇ ಆಂಧ್ರದ ಕರಾವಳಿ ಭಾಗದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತಿದೆ. ಆಂಬ್ಯುಲೆನ್ಸ್ ಸೇವೆಗಳು (108 ಮತ್ತು 104) ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವಿನ ವಿಷ ಮತ್ತು ರೇಬೀಸ್ ವಿರೋಧಿ ಲಸಿಕೆಗಳನ್ನು ಸಂಗ್ರಹಿಸಲಾಗಿದೆ. ರಸ್ತೆಗಳು ಮತ್ತು ವಿದ್ಯುತ್ ಮಾರ್ಗಗಳ ತುರ್ತು ಪುನಃಸ್ಥಾಪನೆಗಾಗಿ 851ಕ್ಕೂ ಹೆಚ್ಚು ಜೆಸಿಬಿಗಳು ಮತ್ತು 757 ಪವರ್ ಗರಗಸಗಳನ್ನು ಇರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ