AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ವಿಟರ್​ನಲ್ಲಿ ದಿಲ್​​ಜಿತ್ ದೊಸಾಂಜ್-ಕಂಗನಾ ಫೈಟ್: ಪಂಜಾಬಿ ಅನುವಾದಕ್ಕೆ ಗೂಗಲ್ ಮೊರೆ ಹೋದ ನೆಟ್ಟಿಗರು

ಮುಂಬೈ: ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿರಿಯ ರೈತ ಮಹಿಳೆಯನ್ನು ಲೇವಡಿ ಮಾಡಿದ್ದಕ್ಕೆ ನಟಿ ಕಂಗನಾ ರನೌತ್ ವಿರುದ್ಧ ಪಂಬಾಬಿ ನಟ, ಗಾಯಕ ದಿಲ್​​ಜಿತ್ ದೊಸಾಂಜ್ ಸಿಡಿದೆದ್ದಿದ್ದಾರೆ. ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದಲ್ಲಿ ಹಿರಿಯ ರೈತ ಮಹಿಳೆಯನ್ನು ಲೇವಡಿ ಮಾಡಿ, ‘ಇವರು ₹100 ಕೊಟ್ಟರೆ ಎಲ್ಲಿಗೆ ಬೇಕಾದರೂ ಬರುತ್ತಾರೆ’ ಎಂದು ಕಂಗನಾ ಟ್ವೀಟ್ ಮಾಡಿದ್ದರು. ನೆಟ್ಟಿಗರು ತರಾಟೆಗೆ ತೆಗೆದುಕೊಂಡ ನಂತರ ಕಂಗನಾ ಆ ಟ್ವೀಟ್ ಡಿಲೀಟ್ ಮಾಡಿದ್ದರು. ರೈತ ಮಹಿಳೆಯನ್ನು ಲೇವಡಿ ಮಾಡಿದ ಕಂಗನಾ […]

ಟ್ವಿಟರ್​ನಲ್ಲಿ ದಿಲ್​​ಜಿತ್ ದೊಸಾಂಜ್-ಕಂಗನಾ ಫೈಟ್: ಪಂಜಾಬಿ ಅನುವಾದಕ್ಕೆ ಗೂಗಲ್ ಮೊರೆ ಹೋದ ನೆಟ್ಟಿಗರು
ದಿಲ್ಜಿತ್ ದೊಸಾಂಜ್ ಮತ್ತು ಕಂಗನಾ ರನೌತ್
Ghanashyam D M | ಡಿ.ಎಂ.ಘನಶ್ಯಾಮ
| Edited By: |

Updated on:Dec 17, 2020 | 7:00 PM

Share

ಮುಂಬೈ: ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿರಿಯ ರೈತ ಮಹಿಳೆಯನ್ನು ಲೇವಡಿ ಮಾಡಿದ್ದಕ್ಕೆ ನಟಿ ಕಂಗನಾ ರನೌತ್ ವಿರುದ್ಧ ಪಂಬಾಬಿ ನಟ, ಗಾಯಕ ದಿಲ್​​ಜಿತ್ ದೊಸಾಂಜ್ ಸಿಡಿದೆದ್ದಿದ್ದಾರೆ.

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದಲ್ಲಿ ಹಿರಿಯ ರೈತ ಮಹಿಳೆಯನ್ನು ಲೇವಡಿ ಮಾಡಿ, ‘ಇವರು ₹100 ಕೊಟ್ಟರೆ ಎಲ್ಲಿಗೆ ಬೇಕಾದರೂ ಬರುತ್ತಾರೆ’ ಎಂದು ಕಂಗನಾ ಟ್ವೀಟ್ ಮಾಡಿದ್ದರು. ನೆಟ್ಟಿಗರು ತರಾಟೆಗೆ ತೆಗೆದುಕೊಂಡ ನಂತರ ಕಂಗನಾ ಆ ಟ್ವೀಟ್ ಡಿಲೀಟ್ ಮಾಡಿದ್ದರು.

ರೈತ ಮಹಿಳೆಯನ್ನು ಲೇವಡಿ ಮಾಡಿದ ಕಂಗನಾ ಅವರ ಟ್ವೀಟ್ ಮತ್ತು ಬಳಸಿದ ಭಾಷೆಯ ದಾಟಿಗೆ ಆಕ್ಷೇಪ ವ್ಯಕ್ತಪಡಿಸಿದ ದಿಲ್​​ಜಿತ್ ದೊಸಾಂಜ್, ರೈತ ಮಹಿಳೆ ಮೊಹಿಂದರ್ ಕೌರ್ ಅವರು ಮಾತನಾಡುತ್ತಿರುವ ವಿಡಿಯೊವನ್ನು ಷೇರ್ ಮಾಡಿ, ಇಲ್ಲಿದೆ ನೋಡಿ ಸಾಕ್ಷಿ ಎಂದು ಕಂಗನಾಗೆ ಟ್ಯಾಗ್ ಮಾಡಿ, ‘ಯಾರೊಬ್ಬರೂ ಇಷ್ಟು ಕುರುಡಾಗಿರಬಾರದು’ ಎಂದು ಟ್ವೀಟಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ಕರಣ್‌ ಜೋಹರ್ ಅವರ ಪಾಲ್ತೂ (ಪ್ರೀತಿಪಾತ್ರ), ಪೌರತ್ವ ಕಾಯ್ದೆ ವಿರುದ್ಧ ಶಾಹೀನ್​​ಬಾಗ್​ನಲ್ಲಿ ಪ್ರತಿಭಟನೆ ಮಾಡಿದ್ದ ಬಿಲ್ಕಿಸ್ ಬಾನು ಅವರೇ ಕನಿಷ್ಠ ಬೆಂಬಲ ಬೆಲೆಗಾಗಿ ರೈತರು ಮಾಡುತ್ತಿರುವ ಹೋರಾಟದಲ್ಲಿ ಕಾಣಿಸಿಕೊಂಡಿದ್ದರು. ಮಹಿಂದರ್ ಕೌರ್ ಅವರನ್ನು ನನಗೆ ಗೊತ್ತೇ ಇಲ್ಲ. ಏನು ನಾಟಕ ಮಾಡುತ್ತಿದ್ದೀರಿ ನೀವೆಲ್ಲ? ಇದನ್ನು ಈಗಲೇ ನಿಲ್ಲಿಸಿ ಎಂದಿದ್ದರು.

ಈ ಜಗಳ ಸರಣಿ ಮುಂದುವರಿಯಿತು.

ಕಂಗನಾ ಟ್ವೀಟ್​​ನಲ್ಲಿ ಪಾಲ್ತೂ ಎಂಬ ಪದ ಬಳಸಿದ್ದಕ್ಕೆ ಉತ್ತರಿಸಿದ ದಿಲ್​​ಜಿತ್ ನೀವು ಯಾವುದಾದರೂ ವ್ಯಕ್ತಿಯೊಂದಿಗೆ ಸಿನಿಮಾ ಮಾಡಿದರೆ ಅವೆಲ್ಲರೂ ಪಾಲ್ತೂಗಳಾ? ಹಾಗಾದರೆ ಆ ಪಟ್ಟಿ ತುಂಬಾ ಉದ್ದವೇ ಇರುತ್ತದೆ. ನಾವು ಬಾಲಿವುಡ್​ನವರಲ್ಲ, ನಾವು ಪಂಜಾಬಿಗಳು. ಸುಳ್ಳು ಹೇಳಿ ಜನರ ಹಾದಿ ತಪ್ಪಿಸಲು ಮತ್ತು ಜನರ ಭಾವನೆಗಳ ಜತೆ ಆಟವಾಡಲು ನಿಮಗೆ ಚೆನ್ನಾಗಿ ಗೊತ್ತಿದೆ ಎಂದಿದ್ದರು.

ಇದಕ್ಕೆ ಉತ್ತರಿಸಿದ ಕಂಗನಾ, ನನಗೆ ಪಂಬಾಬಿ ತಿಳಿದಿದೆ. ದೆಹಲಿಯಲ್ಲಿ ದಂಗೆಯೆಬ್ಬಿಸಿ ರಕ್ತದ ಹೊಳೆಯನ್ನೇ ಹರಿಸಲಾಯಿತು. ದಂಗೆ ಮಾಡಿದವರನ್ನು ಬೆಂಬಲಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ. ನಿನಗೆ ನಾಚಿಕೆ ಯಾಕೆ ಆಗಬೇಕು? ಕರಣ್ ಜೋಹರ್ ಏನು ಕೆಲಸ ಕೊಡ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದಿದ್ದರು.

ನೀನು ದಿನಾ ಯಾರ ಜತೆ ಕೆಲಸ ಮಾಡುತ್ತಿದ್ದಿಯೋ ಅವರಿಗೆ ದಿನಾ ನಾನು ಸರಿಯಾಗಿಯೇ ಉತ್ತರಕೊಡುತ್ತಿದ್ದೇನೆ. ನಾನು ಕಂಗನಾ ರನೌತ್, ನಿನ್ನಂತೆ ಸುಳ್ಳು ಹೇಳಲು ಯಾರ ಚಮ್ಚಾ ಅಲ್ಲ. ನಾನು ಶಾಹೀನ್​​ಬಾಗ್ ಪ್ರತಿಭಟನೆ ಬಗ್ಗೆ ಮಾತ್ರ ಕಾಮೆಂಟ್ ಮಾಡಿದ್ದು. ಇದು ತಪ್ಪು ಎಂದು ಯಾರಾದರೂ ಸಾಬೀತು ಪಡಿಸಿದರೆ ನಾನು ಕ್ಷಮೆ ಕೇಳುವೆ ಎಂದು ಕಂಗನಾ ಆಕ್ಷೇಪಿಸಿದ್ದರು.

ಕಂಗನಾ ಟ್ವೀಟ್​ಗೆ ಆಕ್ಷೇಪಿಸಿದ್ದ ದಿಲ್​ಜಿತ್, ಮಾತಿನಲ್ಲಿ ಮರ್ಯಾದೆ ಬೇಡವೇ? ನೀವೊಬ್ಬ ಮಹಿಳೆಯಾಗಿ ಇನ್ನೊಬ್ಬರ ಅಮ್ಮ, ಸಹೋದರಿಯನ್ನು 100 ಅವರು ಎಂದು ಹೇಳುತ್ತಿದ್ದೀರಿ. ಪಂಜಾಬ್​ನಲ್ಲಿ ನಮ್ಮ ಅಮ್ಮ ನಮ್ಮ ಪಾಲಿಗೆ ದೇವರೇ ಆಗಿದ್ದಾರೆ. ನೀವಿಲ್ಲಿ ಜೇನು ಗೂಡಿಗೆ ಕಲ್ಲು ಎಸೆದಿದ್ದೀರಿ ಎಂದಿದ್ದರು.

ನಾವು ಏನು ಮಾತನಾಡುತ್ತಿದ್ದೇವೆ ಮತ್ತು ನೀವೇನು ಮಾತನಾಡುತ್ತಿದೀರಿ?

ನಿಮ್ಮ ತಲೆ ಸರಿಯಿದೆಯಾ ಮಾತಿನಿಂದಲೇ ದಾರಿ ತಪ್ಪಿಸಬೇಡಿ. ನೇರಾ ನೇರಾ ಉತ್ತರಿಸಿ. ನೀವು ನಮ್ಮ ಅಮ್ಮಂದಿರ ಬಗ್ಗೆ ಕೆಟ್ಟದಾಗಿ ಹೇಳಿದ್ದೀರಿ. ನಮ್ಮ ಅಮ್ಮಂದಿರು 100 ಕೊಟ್ಟರೆ ಬರ್ತಾರೆ ಎಂದು ಹೇಳಲು ನಿಮಗೆ ಧೈರ್ಯವಾದರೂ ಹೇಗೆ ಬಂತು? ನಿನ್ನ ಹೀರೊಯಿನ್ ಪಟ್ಟವನ್ನು ಕಳಚಿ ಬಿಡುತ್ತೇವೆ ಎಂದೆಲ್ಲಾ ತರಾಟೆಗೆ ತೆಗೆದುಕೊಂಡಿದ್ದರು.

ಕಂಗನಾ ಮೂಢ, ಯಾರದ್ದಾದರೂ ಪೌರತ್ವ ಹೋಗಿದ್ದರೆ ಮಾತು ಬೇರೆ ಇರುತ್ತಿತ್ತು. ಶಾಹೀನ್​​ಬಾಗ್ ಯಾರು ಹೇಳಿದ್ದಕ್ಕೆ ಪ್ರತಿಭಟನೆ ಮಾಡಿದರು? ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ತೆಗೆದು ಹಾಕಿಲ್ಲ ಎಂದಾದ ಮೇಲೆ ಅದೇ ದಾದಿ ಯಾರ ಮಾತು ಕೇಳಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ? ಆಕೆ ಮಾತನಾಡುವಾಗ ಆಕೆಗೆ ಹಿಂದಿನಿಂದ ಯಾರು ಹೇಳಿಕೊಡುತ್ತಿದ್ದಾರೆ?

ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆ ₹100 ಬಾಡಿಗೆಗೆ ಬರ್ತಾಳೆ ಎಂದು ಹೇಳಲು ನಿಮಗೆ ಯಾರು ಹೇಳಿಕೊಟ್ಟರು?

ನೀವು ಮಾತು ಬದಲಿಸಬೇಡಿ. ಪ್ರತಿಯೊಂದು ವಿಷಯದಲ್ಲಿ ನೀವು ಸರಿಯಾಗಿಯೇ ಇರಬೇಕು ಅಂತೇನಿಲ್ಲವಲ್ಲಾ ಎಂದು ಟ್ವೀಟಿಸಿದ್ದಕ್ಕೆ ಕಂಗನಾ, ನಾನು ಅಥವಾ ನೀನು ಸರಿಯಾಗಿರಲೇಬೇಕು ಅಂತೇನಿಲ್ಲ. ದೇಶ ಸರಿಯಾಗಿರಬೇಕು ಎಂಬುದು ಮುಖ್ಯ. ನೀವೆಲ್ಲರೂ ರೈತರ ಹಾದಿ ತಪ್ಪಿಸುತ್ತಿದ್ದೀರಿ. ಈ ಪ್ರತಿಭಟನೆ, ದಂಗೆ, ರಕ್ತಪಾತಗಳಿಂದ ನಾನು ರೋಸಿ ಹೋಗಿದ್ದೇನೆ. ಇದರಲ್ಲಿ ನೀನೂ ಭಾಗಿಯಾಗಿದ್ದಿ. ನೆನಪಿರಲಿ ಎಂದಿದ್ದಾರೆ.

ಸುಮಾರು ಟ್ವೀಟ್ ವಾಗ್ವಾದಗಳ ನಂತರ ದಿಲ್​​ಜಿತ್ ಇದು ಇವತ್ತಿನ ಕೊನೆಯ ಟ್ವೀಟ್. ಈ ಪಾಲ್ತೂ ನಿಜವಾದ ವಿಷಯಗಳ ದಾರಿ ತಪ್ಪಿಸುವಲ್ಲಿ ಖ್ಯಾತರು. ವಿಷಯ ಈಗ ರೈತರದ್ದು. ನಾವು ರೈತರಿಗೆ ಶಾಂತಿಯುತ ರೀತಿಯಲ್ಲಿ ಬೆಂಬಲ ನೀಡುತ್ತೇವೆ ಎಂದು ಜಗಳಕ್ಕೆ ಅಂತ್ಯ ಹಾಡಿದ್ದಾರೆ.

ಕಂಗನಾ ಜತೆ ದಿಲ್​​ಜಿತ್ ಪಂಬಾಬಿಯಲ್ಲಿ ಟ್ವೀಟ್ ವಾರ್ ಮಾಡುತ್ತಿದ್ದಂತೆ ನೆಟ್ಟಿಗರು ಪಂಬಾಬಿ ಪದಗಳ ಅರ್ಥ ಹುಡುಕಲು ಶುರು ಮಾಡಿದ್ದಾರೆ. ಅದೇ ವೇಳೆ ಪಂಬಾಬಿ ಅರಿತ ನೆಟ್ಟಿಗರು ದಿಲ್​ಜಿತ್ ಟ್ವೀಟ್​ಗಳ ಅನುವಾದ ಮಾಡಿ ಸಹಕರಿಸಿದ್ದಾರೆ.

ಟ್ವಿಟರ್​ನಲ್ಲಿ ದಿಲ್​ಜಿತ್ ಕಂಗನಾ ಟ್ರೆಂಡಿಂಗ್

ಶುಕ್ರವಾರ ಟ್ವಿಟರ್​ನಲ್ಲಿ ದಿಲ್​ಜಿತ್ ಕಂಗನಾ ಟ್ರೆಂಡ್ ಆಗಿದ್ದಾರೆ. ಕಂಗನಾ ರನೌತ್ ಜತೆ ಗುರುವಾರ ರಾತ್ರಿವರೆಗೆ ಟ್ವೀಟ್ ಜಗಳವಾಡಿದ ದಿಲ್​ಜಿತ್​ಗೆ ಗಾಯಕ ಮಿಖಾ ಸಿಂಗ್, ನಟ ಗಿಪ್ಪೀ ಗ್ರೆವಾಲ್, ಗಾಯಕ ರಂಜೀತ್ ಬವಾ ,ಅಮ್ಮೀ ವಿರ್ಕ್ ಬೆಂಬಲ ಸೂಚಿಸಿ ಟ್ವೀಟಿಸಿದ್ದಾರೆ.

Published On - 2:50 pm, Fri, 4 December 20

Follow Us
Ghanashyam D M | ಡಿ.ಎಂ.ಘನಶ್ಯಾಮ
Ghanashyam D M | ಡಿ.ಎಂ.ಘನಶ್ಯಾಮ