ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಘೋಷಣೆ; ಅ. 6ಕ್ಕೆ ಮತದಾನ

ಭಾರತೀಯ ಚುನಾವಣಾ ಆಯೋಗವು ಇಂದು ಪ್ರಮುಖ ಉಪಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ ನೌಗಾಂವ್ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6ರಂದು ಮತದಾನ ನಡೆಯಲಿದೆ. ಅಕ್ಟೋಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ಸೆಪ್ಟೆಂಬರ್ 9 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರಲಿದೆ. ಸೆಪ್ಟೆಂಬರ್ 16 ನಾಮಪತ್ರ ಪರಿಶೀಲನೆ ನಡೆಯಲಿದೆ. ಸೆಪ್ಟೆಂಬರ್ 17ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಘೋಷಣೆ; ಅ. 6ಕ್ಕೆ ಮತದಾನ
ಭಾರತೀಯ ಚುನಾವಣಾ ಆಯೋಗ
Image Credit source: TV9

Updated on: Sep 07, 2026 | 8:31 PM

ನವದೆಹಲಿ, ಸೆಪ್ಟೆಂಬರ್ 7: ಕೇಂದ್ರ ಚುನಾವಣಾ ಆಯೋಗವು ಇಂದು ಭಾರತದ 3 ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳು ಹಾಗೂ ಅಸ್ಸಾಂನ 1 ಲೋಕಸಭಾ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳಿಗೆ ಉಪಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಮತ್ತು ಅಸ್ಸಾಂನಲ್ಲಿ ತೆರವಾಗಿರುವ ಈ ಕ್ಷೇತ್ರಗಳಿಗೆ ಅಕ್ಟೋಬರ್ 6ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9ರಂದು ಮತಎಣಿಕೆ ಮತ್ತು ಫಲಿತಾಂಶ ಹೊರಬೀಳಲಿದೆ. ನಿಯಮಗಳಂತೆ ಚುನಾವಣೆಗೆ ಸಂಬಂಧಿಸಿದ ಜಿಲ್ಲೆಗಳಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.

ನಂದಿಗ್ರಾಮ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಭವಾನಿಪುರವನ್ನು ಉಳಿಸಿಕೊಂಡು ನಂದಿಗ್ರಾಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರ ಖಾಲಿಯಾಗಿದೆ.

ರೇಜಿನಗರ (ಪಶ್ಚಿಮ ಬಂಗಾಳ): ಆಮ್ ಜನತಾ ಉನ್ನಯನ್ ಪಾರ್ಟಿ (ಎಜೆಯುಪಿ) ಸಂಸ್ಥಾಪಕ ಹುಮಾಯೂನ್ ಕಬೀರ್ ತಾವು ಗೆದ್ದಿದ್ದ ರೇಜಿನಗರ ಮತ್ತು ನೌಡಾ ಕ್ಷೇತ್ರಗಳ ಪೈಕಿ ನೌಡಾವನ್ನು ಉಳಿಸಿಕೊಂಡು ರೇಜಿನಗರಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಬಂಕಿಪುರ ಉಪಚುನಾವಣೆ : ಪ್ರಶಾಂತ್ ಕಿಶೋರ್ ಕುಟುಂಬದ ಒಟ್ಟು ಆಸ್ತಿ 198 ಕೋಟಿ ರೂ.ಗೂ ಅಧಿಕ!

ಮಧುರಾಂತಕಂ ಮತ್ತು ಧರಾಪುರಂ (ತಮಿಳುನಾಡು): ಎಐಎಡಿಎಂಕೆಯಿಂದ ಗೆದ್ದಿದ್ದ ಮರಗತಂ ಕುಮಾರವೇಲ್ (ಮಧುರಾಂತಕಂ) ಮತ್ತು ಪಿ. ಸತ್ಯಭಾಮ (ಧರಾಪುರಂ) ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ತಟ್ಟಂಚಾವಡಿ (ಪುದುಚೇರಿ): ಮುಖ್ಯಮಂತ್ರಿ ಎನ್. ರಂಗಸಾಮಿ ತಟ್ಟಂಚಾವಡಿ ಮತ್ತು ಮಂಗಳಂ ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಮಂಗಳಂ ಕ್ಷೇತ್ರವನ್ನು ಉಳಿಸಿಕೊಂಡು ತಟ್ಟಂಚಾವಡಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ.

ನೌಗಾಂವ್ ಲೋಕಸಭಾ ಕ್ಷೇತ್ರ (ಅಸ್ಸಾಂ): ಕಾಂಗ್ರೆಸ್‌ನಿಂದ ಲೋಕಸಭಾ ಸದಸ್ಯರಾಗಿದ್ದ ಪ್ರದ್ಯುತ್ ಬೋರ್ಡೊಲೊಯ್, ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಹಾಗೂ ಲೋಕಸಭೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿ ಡಿಸ್ಪುರ್ ಶಾಸಕರಾಗಿ ಗೆಲುವು ಸಾಧಿಸಿದ್ದರಿಂದ ಈ ಲೋಕಸಭಾ ಕ್ಷೇತ್ರ ತೆರವಾಗಿದೆ.

ಇದನ್ನೂ ಓದಿ: ಬಿಹಾರದ ಬಂಕಿಪುರ ಉಪಚುನಾವಣೆ; ಅಭಿಷೇಕ್ ಸಿನ್ಹಾ ಬದಲು ಬಿಜೆಪಿಯಿಂದ ನೀರಜ್ ಕುಮಾರ್ ಸಿನ್ಹಾ ಕಣಕ್ಕೆ

ಚುನಾವಣಾ ವೇಳಾಪಟ್ಟಿ:

ಅಧಿಸೂಚನೆ ಹೊರಡಿಸುವ ದಿನಾಂಕ: ಸೆಪ್ಟೆಂಬರ್ 9

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟೆಂಬರ್ 16

ನಾಮಪತ್ರ ಪರಿಶೀಲನೆ: ಸೆಪ್ಟೆಂಬರ್ 17

ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಸೆಪ್ಟೆಂಬರ್ 19

ಮತದಾನ: ಅಕ್ಟೋಬರ್ 6

ಮತಎಣಿಕೆ ಹಾಗೂ ಫಲಿತಾಂಶ: ಅಕ್ಟೋಬರ್ 9

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Mon, 7 September 26

Loading...
Unable to load recommendations.
Follow Us