ಗುಜರಾತ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲಟ್ ಸಿದ್ಧಾರ್ಥ್ಗೆ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಇತ್ತೀಚೆಗಷ್ಟೇ ಗುಜರಾತ್ನ ಜಾಮ್ನಗರದಲ್ಲಿ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿತ್ತು. ಓರ್ವ ಪೈಲಟ್ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದರೆ, ಇನ್ನೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ್ದ ಪೈಲಟ್ ಸಿದ್ದಾರ್ಥ್ಗೆ ಕೇವಲ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು. ನವೆಂಬರ್ನಲ್ಲಿ ಮದುವೆ ನಿಶ್ಚಯಮಾಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು ರೇವಾರಿಯಿಂದ ರಜೆ ಮುಗಿಸಿ ಜಾಮ್ನಗರ ವಾಯುಪಡೆ ನಿಲ್ದಾಣಕ್ಕೆ ಹೋಗಿದ್ದರು.

ಜಾಮ್ನಗರ, ಏಪ್ರಿಲ್ 04: ಗುಜರಾತ್ನ ಜಾಮ್ನಗರದಲ್ಲಿ ತರಬೇತಿ ವೇಳೆ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ(Plane Crash)ಗೊಂಡಿತ್ತು. ಈ ಅಪಘಾತದಲ್ಲಿ ಹರ್ಯಾಣದ ರೇವಾರಿ ಜಿಲ್ಲೆಯ 28 ವರ್ಷದ ಪೈಲಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಸಾವನ್ನಪ್ಪಿದ್ದಾರೆ. ಅವರು ಕೇವಲ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ನವೆಂಬರ್ನಲ್ಲಿ ನಿಗದಿಯಾಗಿತ್ತು. ಸಿದ್ಧಾರ್ಥ್ ಅವರ ಕುಟುಂಬದಲ್ಲಿ ಅವರ ವಿವಾಹದ ಸಿದ್ಧತೆಗಳು ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಸಾವಿನ ಸುದ್ದಿ ಬಂದಿದೆ. ಆತ ತಂದೆ-ತಾಯಿಗೆ ಒಬ್ಬನೇ ಮಗ.
ಸಿದ್ಧಾರ್ಥ್ ಕುಟುಂಬ ಈಗ ಶೋಕ ಸಾಗರದಲ್ಲಿ ಮುಳುಗಿದೆ. ಎಂದೂ ಅಂದುಕೊಳ್ಳದ ಘಟನೆ ನಡೆದುಹೋಗಿದೆ. ಸಿದ್ಧಾರ್ಥ್ ಅವರ ಕುಟುಂಬ ಸದಸ್ಯರು ಮಾರ್ಚ್ 23 ರಂದು ಅವರ ನಿಶ್ಚಿತಾರ್ಥ ನೆರವೇರಿಸಿದ್ದರು. ಮಾರ್ಚ್ 31 ರಂದು, ಅವರು ರೇವಾರಿಯಿಂದ ರಜೆ ಮುಗಿಸಿ ಜಾಮ್ನಗರ ವಾಯುಪಡೆ ನಿಲ್ದಾಣಕ್ಕೆ ಹೋಗಿದ್ದರು, ಮತ್ತು ಕೇವಲ ಎರಡು ದಿನಗಳ ನಂತರ ಅಪಘಾತದಲ್ಲಿ ಅವರು ಮೃತಪಟ್ಟಿರುವ ಸುದ್ದಿ ಕೇಳಿಬಂದಿತ್ತು.
ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಅವರ ತಂದೆ ಸುಶೀಲ್ ಯಾದವ್ ಮಾತನಾಡಿ, ಸಿದ್ಧಾರ್ಥ್ ಏಪ್ರಿಲ್ 2 ರ ರಾತ್ರಿ ಜಾಗ್ವಾರ್ ವಿಮಾನದಲ್ಲಿ ಹೊರಟಿದ್ದರು. ಅವರ ಜೊತೆ ಒಬ್ಬ ಸಹಚರ ಕೂಡ ಇದ್ದರು. ಈ ಸಮಯದಲ್ಲಿ, ಜಾಗ್ವಾರ್ನಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಉಂಟಾಯಿತು. ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಹಲವು ಪ್ರಯತ್ನಗಳನ್ನು ಮಾಡಲಾಯಿತು, ಆದರೆ ಒಂದು ಸಮಯದಲ್ಲಿ ವಿಮಾನವು ಅಪಘಾತಕ್ಕೀಡಾಗುವುದು ಖಚಿತ ಎಂದು ಸ್ಪಷ್ಟವಾಯಿತು. ನಂತರ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಮತ್ತು ಅವರ ಸಹ-ಪೈಲಟ್ ವಿಮಾನವು ಜನನಿಬಿಡ ಪ್ರದೇಶಗಳಿಂದ ದೂರವಿರುವ ತೆರೆದ ಮೈದಾನದಲ್ಲಿ ವಿಮಾನವನ್ನು ಕೆಳಗಿಳಿಸಬೇಕೆಂದುಕೊಂಡರು.
ಮತ್ತಷ್ಟು ಓದಿ: Video: ಗುಜರಾತ್ನಲ್ಲಿ ಐಎಎಫ್ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ನಾಗರಿಕರಿಗೆ ಆಗುವ ತೊಂದರೆ ತಪ್ಪಿಸಲು ಹೊಲವೊಂದರಲ್ಲಿ ಪತನಗೊಂಡಿತ್ತು. ಅವರ ಸಹ ಪೈಲಟ್ ಸುರಕ್ಷಿತವಾಗಿ ಹೊರಜಿಗಿಯುವಲ್ಲಿ ಯಶಸ್ವಿಯಾಗಿದ್ದು, ಪ್ರಸ್ತುತ ಜಾಮ್ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸಿದ್ಧಾರ್ಥ್ ಪ್ರಾಣ ಕಳೆದುಕೊಂಡಿದ್ದಾರೆ. ಜಾಮ್ನಗರ ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಸುವರ್ದಾ ಗ್ರಾಮದಲ್ಲಿ ಬುಧವಾರ ರಾತ್ರಿ 9.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ವಿಮಾನ ಅಪಘಾತದಲ್ಲಿ ಮೃತಪಟ್ಟ ಪೈಲಟ್ ಸಿದ್ಧಾರ್ಥ್ ಯಾದವ್ ಅವರ ಮೃತದೇಹವನ್ನು ಜಾಮ್ನಗರದ ಜಿಜಿ ಆಸ್ಪತ್ರೆಯು ವಾಯುಪಡೆಗೆ ಹಸ್ತಾಂತರಿಸಿದ್ದು, ಅವರ ಹುಟ್ಟೂರಿಗೆ ವಿಮಾನದಲ್ಲಿ ಸಾಗಿಸಲಾಗಿದೆ. ಸಿದ್ಧಾರ್ಥ್ ಅವರ ಕುಟುಂಬದಲ್ಲಿ ದೇಶ ಸೇವೆ ಮಾಡಿದ ನಾಲ್ಕನೇ ತಲೆಮಾರಿನವರು. 2016 ರಲ್ಲಿ NDA ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಸಿದ್ಧಾರ್ಥ್ ಯುದ್ಧ ವಿಮಾನ ಪೈಲಟ್ ಆಗುವ ಮೊದಲು 3 ವರ್ಷಗಳ ಕಠಿಣ ತರಬೇತಿಯನ್ನು ಪಡೆದರು. ಎರಡು ವರ್ಷಗಳ ಸೇವೆಯ ನಂತರ ಅವರಿಗೆ ಫ್ಲೈಟ್ ಲೆಫ್ಟಿನೆಂಟ್ ಹುದ್ದೆಗೆ ಬಡ್ತಿ ನೀಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:22 am, Fri, 4 April 25